ಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿ
ಕೊಲಂಬೋ, ಮೇ 4: ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರ ಸರಣಿ ಬಾಂಬ್ ದಾಳಿ ನಡೆಸಿದವರಲ್ಲಿ ಕೆಲವು ಉಗ್ರರು ಭಯೋತ್ಪಾದನಾ ತರಬೇತಿ ಪಡೆದಿದ್ದು ಭಾರತದಲ್ಲಿ. ಅದಕ್ಕಾಗಿ ಅವರು ಬೆಂಗಳೂರು, ಕೇರಳ ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನೆ ಆಘಾತಕಾರಿ ಮಾಹಿತಿ ನೀಡಿದೆ.
'ಉಗ್ರರು ಭಾರತಕ್ಕೆ ತೆರಳಿದ್ದರು. ಬೆಂಗಳೂರು, ಕೇರಳ ಮತ್ತು ಕಾಶ್ಮೀರಕ್ಕೆ ಹೋಗಿದ್ದರು. ಅದರ ಕುರಿತ ಮಾಹಿತಿಗಳು ನಮ್ಮ ಬಳಿ ಇವೆ' ಎಂದು ಲೆಫ್ಟಿನೆಂಟ್ ಜನರಲ್ ಮಹೇಶ್ ಸೇನನಾಯಕೆ ಬಿಬಿಸಿ ವರ್ಲ್ಡ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಶ್ರೀಲಂಕಾ ದಾಳಿ ಎಫೆಕ್ಟ್: ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ
ಈ ಬಾಂಬರ್ಗಳು ಭಾರತಕ್ಕೆ ಭೇಟಿ ನೀಡಿದ್ದು ಯಾಕಾಗಿ ಎಂಬುದರ ಮಾಹಿತಿ ಇನ್ನೂ ಖಚಿತವಾಗಿಲ್ಲ. ಆದರೆ, ಭಯೋತ್ಪಾದನಾ ತರಬೇತಿಗಾಗಿ ಅಲ್ಲಿಗೆ ಹೋಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಬಹುಶಃ ಸಮಾನ ಮನಸ್ಕ ವ್ಯಕ್ತಿಗಳಿಂದ ತರಬೇತಿ ಪಡೆದುಕೊಳ್ಳಲು ಅಥವಾ ದೇಶದ ಹೊರಗಿನ ಇತರೆ ಸಂಘಟನೆಗಳೊಂದಿಗೆ ಹೆಚ್ಚಿನ ನಂಟು ಬೆಳೆಸಿಕೊಳ್ಳುವ ಸಲುವಾಗಿ ಅವರು ಭಾರತದ ದಕ್ಷಿಣ ತುದಿಯಲ್ಲಿರುವ ಕೇರಳ ಮತ್ತು ಉತ್ತರದ ತುದಿಯಲ್ಲಿರುವ ಕಾಶ್ಮೀರಗಳಲ್ಲಿನ ಪಡೆದುಕೊಳ್ಳಲು ಹೋಗಿರಬಹುದು' ಎಂದಿದ್ದಾರೆ.
ಈಸ್ಟರ್ ಭಾನುವಾರದ ದಾಳಿಯಲ್ಲಿ ಶ್ರೀಲಂಕಾ ಮತ್ತು ಕೆಲವು ಭಾರತೀಯ ಸಂಚುಕೋರರ ಕೈವಾಡದ ನಂಟಿನ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನಡೆಸಿದ ದಾಳಿಗಳ ಬಳಿಕ ಬಹಿರಂಗವಾಗಿತ್ತು. ಆದರೆ, ಉಗ್ರರು ಬೆಂಗಳೂರಿಗೆ ಯಾಕೆ ಭೇಟಿ ನೀಡಿದ್ದರು ಎಂಬುದರ ಬಗ್ಗೆ ಅವರು ವಿವರಣೆ ನೀಡಿಲ್ಲ.
ಹೊರಗಿನ ವ್ಯಕ್ತಿಗಳ ಕೈವಾಡ
ಸರಣಿ ಬಾಂಬ್ ಸ್ಫೋಟದ ಸಂಚನ್ನು ಹೊರಗಿನ ವ್ಯಕ್ತಿಗಳು ಮಾಡಿರಬಹುದು ಎಂದು ಸೇನನಾಯಕೆ ಸುಳಿವು ನೀಡಿದ್ದಾರೆ. ದಾಳಿಯ ಸ್ವರೂಪ ಮತ್ತು ಉಗ್ರರ ಮುಖಂಡರು ಪ್ರವಾಸ ಮಾಡಿದ ಪ್ರದೇಶಗಳನ್ನು ಗಮನಿಸಿದಾಗ ಈ ದಾಳಿಯ ನಾಯಕತ್ವ ಅಥವಾ ಸೂಚನೆ ನೀಡಿರುವವರಲ್ಲಿ ಹೊರದೇಶದವರ ಕೈವಾಡ ಇದೆ ಎನಿಸುತ್ತದೆ ಎಂದು ತಿಳಿಸಿದ್ದಾರೆ.
ಕೇರಳದ ರಿಯಾಜ್ಗೆ ನಂಟು
ಎನ್ಐಎ ಕೇರಳದ ಪಾಲಕ್ಕಾಡ್ನಲ್ಲಿ ಬಂಧಿಸಿದ ರಿಯಾಜ್ ಅಬೂಬಕರ್ನಿಂದ ಕೆಲವು ಮಾಹಿತಿಗಳನ್ನು ಸಂಗ್ರಹಿಸಿತ್ತು. ಶ್ರೀಲಂಕಾ ದಾಳಿಯ ಪ್ರಮುಖ ಸಂಚುಕೋರ ಜಹ್ರಾನ್ ಹಶೀಮ್ನ ಭಾಷಣಗಳಿಂದ ರಿಜಾಯ್ ಪ್ರಭಾವಿತನಾಗಿದ್ದ. ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆತನ ಭಾಷಣಗಳನ್ನು ಹಂಚಿಕೊಂಡಿದ್ದ ಎಂದು ಎನ್ಐಎ ತಿಳಿಸಿತ್ತು.
ಅಲ್ಲದೆ, ತನ್ನ ವಶದಲ್ಲಿರುವ ಕೆಲವು ಶಂಕಿತ ಉಗ್ರರು ಕೇರಳದ ಕಾಸರಗೋಡಿನಲ್ಲಿ ನಡೆದ ಐಎಸ್ ನೇಮಕಾತಿಯಲ್ಲಿ ನಂಟು ಹೊಂದಿದ್ದರು. ಹಶೀಮ್ ಕೇರಳಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದ್ದವು.
ಶ್ರೀಲಂಕಾದಲ್ಲಿ ಭಾರತ ಮೂಲದ ಪತ್ರಕರ್ತನ ಬಂಧನ
ಕೇರಳಕ್ಕೆ ಬರುತ್ತಿದ್ದ ಹಶೀಮ್
ಹಶೀಮ್ ಕೇರಳ ಮತ್ತು ತಮಿಳುನಾಡಿಗೆ ನಿರಂತರವಾಗಿ ಪ್ರವಾಸ ಕೈಗೊಳ್ಳುತ್ತಿದ್ದ. ಕೇರಳದ ಮಲಪ್ಪುರಂ ಮತ್ತು ಅಲುವಾ ಸಮೀಪದ ಪಣಯಿಕ್ಕುಳಂಗೆ ಆತ ಭೇಟಿ ನೀಡಿದ್ದ. ಅಲ್ಲಿ ತೀವ್ರಗಾಮಿ ಭಾಷಣಗಳನ್ನು ಮಾಡಿದ್ದ ಎಂದು ದಾಳಿ ನಡೆದ ಬಳಿಕ ಏಪ್ರಿಲ್ 21ರಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿತ್ತು.
|
ಭಾರತದಿಂದ ಗುಪ್ತಚರ ಮಾಹಿತಿ
ಭಾರತದ ಗುಪ್ತಚರ ಸಂಸ್ಥೆಗಳು ದಾಳಿಯ ಎಚ್ಚರಿಕೆ ನೀಡಿದ ಬಳಿಕವೂ ಎಚ್ಚೆತ್ತುಕೊಂಡು ದಾಳಿಯನ್ನು ತಡೆಯಲು ಪ್ರಯತ್ನಿಸದೆ ಇರುವುದು ತನ್ನ ದೇಶದ ಆಡಳಿತದ ವೈಫಲ್ಯ ಎಂಬುದನ್ನು ಸೇನನಾಯಕೆ ಒಪ್ಪಿಕೊಂಡಿದ್ದಾರೆ. 'ನಮಗೆ ಕೆಲವು ಮಾಹಿತಿ ಮತ್ತು ಗುಪ್ತಚರ ಸುಳಿವು, ಪರಿಸ್ಥಿತಿ ಮತ್ತು ಸೇನಾ ಬೇಹುಗಾರಿಕೆಯನ್ನು ವಿಭಿನ್ನ ದಿಕ್ಕುಗಳಲ್ಲಿ ಹೊಂದಿದ್ದೆವು. ಅದರಲ್ಲಿ ಉಂಟಾಗಿದ್ದ ಅಂತರವನ್ನು ಈಗ ಎಲ್ಲರೂ ನೋಡುವಂತಾಗಿದೆ' ಎಂದಿದ್ದಾರೆ.
ಭಾರತದಲ್ಲಿ ಲಂಕಾ ಮಾದರಿ ದಾಳಿಗೆ ಸಂಚು: ಐಸಿಸ್ ಶಂಕಿತ ಉಗ್ರ ಬಂಧನ
ನೆರವಾದ ಭಾರತ-ಮೊರೊಕ್ಕೋ ಒಪ್ಪಂದ
ಶ್ರೀಲಂಕಾದಲ್ಲಿ ಸಂಭವಿಸಬಹುದಾಗಿದ್ದ ಇನ್ನಷ್ಟು ಭಯೋತ್ಪಾದನಾ ದಾಳಿಗಳನ್ನು ತಡೆಯಲು ಭಾರತ ಮತ್ತು ಉತ್ತರ ಆಫ್ರಿಕಾದ ಮೊರೊಕ್ಕೋ ಸಹಭಾಗಿತ್ವ ತಡೆಗಟ್ಟಿದೆ. ಈಸ್ಟರ್ ಭಾನುವಾರದ ದಾಳಿಗಳ ಬಳಿಕ ಶ್ರೀಲಂಕಾದಲ್ಲಿ ಎರಡನೆಯ ಸುತ್ತಿನ ದಾಳಿಯ ಯೋಜನೆಯನ್ನು ಉಗ್ರರು ರೂಪಿಸಿದ್ದರು. ಆದರೆ, ಐಎಸ್ ಕುರಿತು ನಿಖರವಾದ ಮಾಹಿತಿಗಳನ್ನು ನೀಡುವ ಮೊರೊಕ್ಕೋ ಭಾರತದ ಸಹಭಾಗಿತ್ವದೊಂದಿಗೆ ಶ್ರೀಲಂಕಾಕ್ಕೆ ಐಎಸ್ನ ಜಾಲದ ಬಗ್ಗೆ ಮಹತ್ವದ ಸುಳಿವು ನೀಡಿತ್ತು. ಇದರ ಆಧಾರದಲ್ಲಿ ಶ್ರೀಲಂಕಾ ಸೇನೆ ಕೊಲಂಬೋದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿದಿತ್ತು.
ಶ್ರೀಲಂಕಾದಲ್ಲಿ ದಾಳಿ ನಡೆದ ಕೆಲವು ಗಂಟೆಗಳಲ್ಲಿಯೇ ಒಂಬತ್ತು ಆತ್ಮಾಹುತಿ ದಾಳಿಕೋರರು ಇದರ ಹಿಂದೆ ಇದ್ದಾರೆ ಎಂಂಬ ಮಾಹಿತಿಯನ್ನು ಮೊರೊಕ್ಕೋ, ಭಾರತ ಮತ್ತು ಶ್ರೀಲಂಕಾಕ್ಕೆ ಗುಪ್ತಚರ ಮಾಹಿತಿ ಒದಗಿಸಿತ್ತು.