ನವೆಂಬರ್ 14ಕ್ಕೆ ಬಗೆಹರಿಯಬಹುದೇ ಶ್ರೀಲಂಕಾ ರಾಜಕೀಯ ಬಿಕ್ಕಟ್ಟು?
ಶ್ರೀಲಂಕಾ ಪ್ರಧಾನಿಯಾಗಿ ರನಿಲ್ ವಿಕ್ರಮ್ ಸಿಂಘೆ ಪದಚ್ಯುತಿ ಹಾಗೂ ಮಹಿಂದ ರಾಜಪಕ್ಸೆ ನೇಮಕ ಸೃಷ್ಟಿಸಿದ ಸಾಂವಿಧಾನಿಕ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾರಿಗೆ ಎಷ್ಟು ಬಲವಿದೆ ಎಂಬ ಬಗ್ಗೆ ಸದನದಲ್ಲಿ ಬಲಾಬಲ ಪರೀಕ್ಷೆ ಆಗಲಿ ಎಂದು ಸ್ಪೀಕರ್ ಕರು ಜಯಸೂರ್ಯ ಬುಧವಾರ ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ವಿರುದ್ಧ ಸ್ಪೀಕರ್ ಜಯಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ರನಿಲ್ ವಿಕ್ರಮ್ ಸಿಂಘೆ ಪದಚ್ಯುತಿ ಹಾಗೂ ಸಂಸತ್ ಅನ್ನು ಅಮಾನತಿನಲ್ಲಿಟ್ಟು ಅಧ್ಯಕ್ಷರ ಕ್ರಮವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಕರೆದಿದ್ದರು. ಸಂಸತ್ ನಲ್ಲಿ ತಮಗಿರುವ ಬಹುಮತವನ್ನು ಸಾಬೀತು ಪಡಿಸುವ ತನಕ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು.
ಶ್ರೀಲಂಕಾ: ಪ್ರಧಾನಿ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಅಧ್ಯಕ್ಷ
ಸದ್ಯಕ್ಕೆ ಅಧ್ಯಕ್ಷ ಸಿರಿಸೇನ ಶ್ರೀಲಂಕಾ ಸಂಸತ್ ಅನ್ನು ಅಮಾನತಿನಲ್ಲಿ ಇರಿಸಿದ್ದಾರೆ. ನವೆಂಬರ್ 14ಕ್ಕೆ ಅದು ಕೊನೆ ಆಗುತ್ತದೆ. ಆ ನಂತರ ಪಕ್ಷದ ಪ್ರತಿನಿಧಿಗಳ ಜತೆಗೆ ಚರ್ಚಿಸಿ, ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆ ದಿನ ಸರಕಾರದ ಬಲಾಬಲ ಪರೀಕ್ಷೆ ಆಗಬಾರದು. ಆ ದಿನದ ಕಲಾಪವಷ್ಟೇ ನಡೆಯಬೇಕು ಎಂದು ಸರಕಾರ ತಿಳಿಸಿರುವುದಾಗಿ ಜಯಸೂರ್ಯ ಹೇಳಿದ್ದಾರೆ.
ಬಹುಮತ ಸಾಬೀತಿಗೆ ಎರಡೂ ಬಣಕ್ಕೆ ಅವಕಾಶ
ಎರಡೂ ಬಣದವರ ನಿಲುವುಗಳ ಬಗ್ಗೆ ಕೇಳಿಸಿಕೊಂಡ ನಂತರ ಸ್ಪೀಕರ್ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಬಹುಮತವನ್ನು ನಿರ್ಧರಿಸಬೇಕಿದೆ. ಸಂಸತ್ ನ ಸೂಚನೆಯನ್ನು ರದ್ದು ಮಾಡಬೇಕು ಎಂದು 116 ಸದಸ್ಯರು ಲಿಖಿತ ಮನವಿ ನೀಡಿದ್ದಾರೆ. ನವೆಂಬರ್ 14ರಂದು ದಿನದ ಕಲಾಪ ಮುಗಿದ ಮೇಲೆ ಸ್ಥಿರ ಸರಕಾರ ರಚನೆಗಾಗಿ ಎರಡೂ ಪಕ್ಷದವರಿಗೆ ಬಹುಮತ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಪೀಕರ್ ಆಗ್ರಹಕ್ಕೆ ಅಧ್ಯಕ್ಷರ ಒಪ್ಪಿಗೆ ಇಲ್ಲ
ಬಹುಮತ ಪರೀಕ್ಷೆ ಆಗಬೇಕು ಎಂಬ ಜಯಸೂರ್ಯ ಒತ್ತಾಯವನ್ನು ಅಧ್ಯಕ್ಷ ಸಿರಿಸೇನ ಒಪ್ಪಿಲ್ಲ ಎಂದು ಮೂಲಗಳು ತಿಳಿಸಿವೆ. ಇತ್ತ ಸ್ಪೀಕರ್ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಪದಚ್ಯುತ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಪರವಾಗಿ ಜಯಸೂರ್ಯ ಅವರ ನಿಲುವಿದೆ ಎಂದು ಸಿರಿಸೇನ ಆರೋಪ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಬಹುಮತ ಇಲ್ಲದವರಿಗೆ ಅಧಿಕಾರ!
225 ಸದಸ್ಯ ಬಲದ ಶ್ರೀಲಂಕಾ ಸಂಸತ್
ಅಕ್ಟೋಬರ್ 26ನೇ ತಾರೀಕು ರನಿಲ್ ವಿಕ್ರಮ್ ಸಿಂಘೆ ಅವರನ್ನು ಪದಚ್ಯುತಗೊಳಿಸಿದ ಅಧ್ಯಕ್ಷ ಸಿರಿಸೇನ, ಆ ಸ್ಥಾನಕ್ಕೆ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಿದ್ದರು. ಒಟ್ಟು 225 ಸದಸ್ಯ ಬಲದ ಶ್ರೀಲಂಕಾ ಸಂಸತ್ ನಲ್ಲಿ ಬಹುಮತ ಸಾಬೀತಿಗೆ 113 ಸ್ಥಾನಗಳ ಬೆಂಬಲ ಇರಬೇಕು. ಆ ಸಂಖ್ಯೆಯ ಬೆಂಬಲ ರಾಜಪಕ್ಸೆಗೆ ಇಲ್ಲ.
ಪ್ರಧಾನಿಯನ್ನು ಪದಚ್ಯುತಗೊಳಿಸುವ ಅಧಿಕಾರ ಅಧ್ಯಕ್ಷರಿಗಿಲ್ಲ
ಶ್ರೀಲಂಕಾದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು, ಸದ್ಯಕ್ಕೆ ಅಧ್ಯಕ್ಷರಿಗೆ ಪ್ರಧಾನಿಯನ್ನು ಪದಚ್ಯುತಗೊಳಿಸುವ ಅಧಿಕಾರ ಇಲ್ಲ. ಆದ್ದರಿಂದ ತಾವು ಈಗಲೂ ಪ್ರಧಾನಿಯೇ ಎಂಬುದು ವಿಕ್ರಮ್ ಸಿಂಘೆ ವಾದ. ಅಂದಹಾಗೆ ಮೈತ್ರಿ ಸರಕಾರವು 2015ರಲ್ಲಿ ರಚನೆ ಆಗಿತ್ತು. ವಿಕ್ರಮ್ ಸಿಂಘೆ ಬೆಂಬಲದೊಂದಿಗೆ ಸಿರಿಸೇನ ಅಧ್ಯಕ್ಷರಾಗಿ ಆಯ್ಕೆಯಾದರು. ರಾಜಪಕ್ಸೆ ದಶಕಗಳ ಆಡಳಿತ ಕೊನೆಗೊಂಡಿತ್ತು.
ಮೈತ್ರಿ ಪಕ್ಷಗಳ ಬಿಕ್ಕಟ್ಟು, ಶ್ರೀಲಂಕಾ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ನೇಮಕ