Breaking: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಗೋತಬಯ ರಾಜಪಕ್ಸೆ
ಕೊಲಂಬೋ, ಮೇ 6: ಶ್ರೀಲಂಕಾದಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು, ಇಡೀ ದೇಶದ ಚಿತ್ರಣವನ್ನೇ ಬದಲಿಸಿದೆ. ಸರ್ಕಾರದ ವಿರುದ್ಧ ಸಾರ್ವಜನಿಕರು ನಡೆಸುತ್ತಿರುವ ನಿರಂತರ ಪ್ರತಿಭಟನೆಯ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಬಾಹ್ಯ ಸಾಲದಿಂದ ಕಂಗೆಟ್ಟಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಮಧ್ಯರಾತ್ರಿಯಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಶುಕ್ರವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ. ಈ ಹಿನ್ನೆಲೆ "ಸಾರ್ವಜನಿಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷ ಗೋಟಾಬಯ ರಾಜಪಕ್ಸೆಯವರ ವಕ್ತಾರರು ತಿಳಿಸಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ
ಸರ್ಕಾರವನ್ನು ಕೆಳಗಿಳಿಯಬೇಕೆಂದು ಒತ್ತಾಯಿಸಿ ಟ್ರೇಡ್ ಯೂನಿಯನ್ ಮುಷ್ಕರದ ನಡುವೆಯೇ ಶ್ರೀಲಂಕಾದ ಸಂಸತ್ತಿಗೆ ಶುಕ್ರವಾರ ಮುತ್ತಿಗೆ ಹಾಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಸಿಡಿಸಿದರು.
ದ್ವೀಪರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು:
ಕಳೆದೊಂದು ತಿಂಗಳಿನಿಂದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೆಲೆದೂಡಿತ್ತು. ಆಹಾರ, ಇಂಧನ ಮತ್ತು ಔಷಧಗಳಿಗೂ ತೀವ್ರ ಕೊರತೆಯಿಂದಾಗಿ 22 ದಶಲಕ್ಷ ಜನರು ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿದೆ.
1948ರ ಸ್ವಾತಂತ್ರ್ಯ ನಂತರದಲ್ಲೇ ಎಂದೂ ಕಂಡು ಕೇಳರಿಯದಂತಾ ದುಸ್ಥಿತಿಗೆ ಕಾರಣವಾದ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸಲಾಗದ ಸರ್ಕಾರವನ್ನು ವಿಸರ್ಜಿಸುವಂತೆ ಆಗ್ರಹಿಸಿದ ಪ್ರತಿಭಟನೆಗಳು ತೀವ್ರಗೊಂಡವು. ಗುರುವಾರ ಕೊಲಂಬೋದ ಸರೋವರ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಿದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಟ್ರೇಡ್ ಯೂನಿಯನ್ ಆಂದೋಲನದಿಂದ ಆಯೋಜಿಸಲಾದ ಮುಷ್ಕರದಿಂದಾಗಿ ಲಕ್ಷಾಂತರ ಕಾರ್ಮಿಕರು ಕೆಲಸದಿಂದ ದೂರ ಉಳಿದರು. ಒಂದು ನಿಗದಿತ ರೈಲು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ರದ್ದಾಗಿದ್ದವು. ಖಾಸಗಿ ಒಡೆತನದ ಬಸ್ಗಳು ರಸ್ತೆಗಿಳಿದಿದ್ದು, ಕೈಗಾರಿಕಾ ಕಾರ್ಮಿಕರು ತಮ್ಮ ಕಾರ್ಖಾನೆಗಳ ಹೊರಗೆ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಕಪ್ಪು ಬಾವುಟಗಳನ್ನು ಪ್ರದರ್ಶಿಸಲಾಯಿತು.
ದೇಶದ ಮೂರನೇ ಎರಡರಷ್ಟು ನೌಕಾಪಡೆಯನ್ನು ಹೊಂದಿರುವ ಖಾಸಗಿ ಬಸ್ಗಳು ಸಹ ರಸ್ತೆಗಿಳಿಯಲಿಲ್ಲ ಎಂದು ಖಾಸಗಿ ಬಸ್ ನಿರ್ವಾಹಕರ ಸಂಘದ ಅಧ್ಯಕ್ಷ ಗೇಮುನು ವಿಜೆರತ್ನ ಹೇಳಿದರು. "ನಾವು ಇಂದು ಸೇವೆಗಳನ್ನು ಒದಗಿಸುತ್ತಿಲ್ಲ, ಆದರೆ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ಜನರ ಗುಂಪುಗಳು ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಸೇರಲು ಬಯಸಿದರೆ, ನಾವು ನಮ್ಮ ಬಸ್ಗಳ ಸೇವೆಯನ್ನು ಉಚಿತವಾಗಿ ನೀಡುತ್ತೇವೆ," ಎಂದು ಶ್ರೀ ವಿಜೆರತ್ನೆ ತಿಳಿಸಿದರು.