ಶ್ರೀಲಂಕಾದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ಬಗ್ಗೆ 10 ದಿನಕ್ಕೂ ಮೊದಲೇ ಮುನ್ಸೂಚನೆ
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 21: ಶ್ರೀಲಂಕಾದ ಕೊಲಂಬೋ ಸೇರಿ ಸುತ್ತಮುತ್ತ ಭಾನುವಾರ ಬಾಂಬ್ ದಾಳಿಯ ನಡೆದಿದ್ದು, ಈ ಘಟನೆಗೂ ಹತ್ತು ದಿನಕ್ಕೆ ಮೊದಲೇ ಅಲ್ಲಿನ ಪೊಲೀಸ್ ಮುಖ್ಯಸ್ಥರು ಆತ್ಮಹತ್ಯಾ ಬಾಂಬ್ ದಾಳಿ ಆಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಪ್ರಮುಖ ಚರ್ಚ್ ಗಳ ಮೇಲೆ ದಾಳಿ ಮಾಡಲು ಆತ್ಮಹತ್ಯಾ ಬಾಂಬರ್ ಗಳು ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದ್ದಾಗಿ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
ಪೊಲೀಸ್ ಮುಖ್ಯಸ್ಥ ಪುಜುತ್ ಜಯಸುಂದರ ಅವರು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ಏಪ್ರಿಲ್ ಹನ್ನೊಂದನೇ ತಾರೀಕಿನಂದು ಉನ್ನತಾಧಿಕಾರಿಗಳಿಗೆ ಕಳುಹಿಸಿದ್ದರು. "ವಿದೇಶಿ ಗುಪ್ತಚರ ಇಲಾಖೆಯೊಂದರ ವರದಿ ಪ್ರಕಾರ ನ್ಯಾಷನಲ್ ಥೋವ್ಹೀತ್ ಜಮಾತ್ (ಎನ್ ಟಿಜೆ) ನಿಂದ ಪ್ರಮುಖ ಚರ್ಚ್ ಗಳ ಮೇಲೆ ಹಾಗೂ ಕೊಲಂಬೋದಲ್ಲಿನ ಭಾರತೀಯ ಹೈಕಮಿಷನ್ ಮೇಲೆ ಆತ್ಮಹತ್ಯಾ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ" ಎಚ್ಚರವಾಗಿರುವಂತೆ ಹೇಳಲಾಗಿತ್ತು.
ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವು, 500 ಮಂದಿಗೆ ಗಾಯ
ಎನ್ ಟಿಜೆ ಎಂಬ ಇಸ್ಲಾಂ ಮೂಲಭೂತವಾದಿ ಸಂಘಟನೆಯು ಕಳೆದ ವರ್ಷ ಬೌದ್ಧರ ಪುತ್ಥಳಿಗಳನ್ನು ಧ್ವಂಸ ಮಾಡುವ ಮೂಲಕ ಶ್ರೀಲಂಕಾದಲ್ಲಿ ಸಕ್ರಿಯವಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಇನ್ನು ಭಾನುವಾರದಂದು ನಡೆದ ಆರು ಬಾಂಬ್ ಸ್ಫೋಟದಲ್ಲಿ ಕನಿಷ್ಠ ನೂರಾ ಐವತ್ತು ಮಂದಿ ಸಾವನ್ನಪ್ಪಿದ್ದಾರೆ.