ದೇಶದಲ್ಲಿ ಪೆಟ್ರೋಲ್ ಖಾಲಿಯಾಗಿದೆ: ಶ್ರೀಲಂಕಾ ಪ್ರಧಾನಿ
ಕೊಲಂಬೊ, ಮೇ 16; ಮಹಿಂದಾ ರಾಜಪಕ್ಸೆ ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅಧಿಕಾರದ ಚುಕ್ಕಾಣಿ ಹಿಡಿದಿರುವ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಎಲ್ಲಾ ರಾಜಕೀಯ ಪಕ್ಷಗಳನ್ನೊಳಗೊಂಡ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸಲು ಚಿಂತಿಸಿದ್ದಾರೆ.
ಸೋಮವಾರ ಮಾತನಾಡಿರುವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ವಿಮಾನಯಾನ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. "ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ದೇಶದಲ್ಲಿ ನಗದು ಕೊರತೆಯಾಗಿದ್ದು, ಪೆಟ್ರೋಲ್ ಕೂಡ ದೇಶದಲ್ಲಿ ಲಭ್ಯವಿಲ್ಲ" ಎಂದು ಹೇಳಿದ್ದಾರೆ.
"ದೇಶದಲ್ಲಿ ಪೆಟ್ರೋಲ್ ದಾಸ್ತಾನು ಖಾಲಿಯಾಗಿದ್ದು, ಒಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಲಭ್ಯವಿದೆ, ಮುಂಬರುವ ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಸಂಕಷ್ಟದ ದಿನಗಳು ಎದುರಾಗಬಹುದು" ಎಂದು ತಿಳಿಸಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟು ಹಿಂಸಾಚಾರಕ್ಕೆ ತಿರುಗಿದ ನಂತರ ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ್ದ ಬೆನ್ನಲ್ಲೇ ನೂತನ ಪ್ರಧಾನಿಯನ್ನಾಗಿ ಕಳೆದ ವಾರ ರಾನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದರು.
ಇನ್ನೂ ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಮುಂದಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳ ವಿಶ್ವಾಸ ಗಳಿಸಲು ಮತ್ತು ಸಲಹೆ ಪಡೆಯಲು ರಾಷ್ಟ್ರೀಯ ಮಂಡಳಿ ರಚನೆ ಸ್ಥಾಪನೆಗೆ ಚಿಂತನೆ ನಡೆಸಿದ್ದಾರೆ.
"ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಹಿಂದಿನ ಸರ್ಕಾರದ ಬಜೆಟ್ನಲ್ಲಿ 2.3 ಟ್ರಿಲಿಯನ್ ಶ್ರೀಲಂಕಾ ರುಪಾಯಿಗಳ ಆದಾಯ ನಿರಿಕ್ಷಿಸಿದ್ದರೂ, ವಾಸ್ತವಿಕವಾಗಿ 1.6 ಟ್ರಿಲಿಯನ್ ಶ್ರೀಲಂಕಾ ರುಪಾಯಿಗಳ ಆದಾಯ ಬಂದಿದೆ" ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.
"ದೇಶದಲ್ಲಿ 14 ಔಷಧಿಗಳ ಕೊರತೆಯಿದೆ, ಅಲ್ಪಾವಧಿಯಲ್ಲೇ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಳ ಪಾವತಿಸಲು ಮತ್ತು ಅಗತ್ಯಗಳ ಪೂರೈಕೆಗಾಗಿ ಹಣದ ಮುದ್ರಣವನ್ನು ಮುಂದುವರೆಸಬೇಕಾದ ಅನಿವಾರ್ಯತೆ ಇದೆ" ಎಂದು ದೇಶದ ಸ್ಥಿತಿಯ ಮಾಹಿತಿ ನೀಡಿದ್ದಾರೆ.
"ನವೆಂಬರ್ 2019ರಲ್ಲಿ 7.5 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲಿಡಲಾಗಿತ್ತು. ಇಂದು 1 ಮಿಲಿಯನ್ ಡಾಲರ್ ಹೊಂದಿಸುವುದು ಕೂಡ ಕಷ್ಟಕರವಾಗಿದೆ. ಇಂಧನ ಆಮದು ಮಾಡಿಕೊಳ್ಳಲು ಅಗತ್ಯವಿರುವ 5 ಮಿಲಿಯನ್ ಡಾಲರ್ ಸಂಗ್ರಹಿಸುವುದು ಹಣಕಾಸು ಸಚಿವಾಯಲಕ್ಕೆ ಕಷ್ಟಕರವಾಗಿದೆ" ಎಂದು ವಿಕ್ರಮಸಿಂಘೆ ಹೇಳಿದ್ದಾರೆ.