ಶ್ರೀಲಂಕಾದ ನಿಗೊಂಬೋದಲ್ಲಿ ಘರ್ಷಣೆ; 8 ಸಾವು
ಕೊಲಂಬೋ, ಮೇ 11: ಶ್ರೀಲಂಕಾದಲ್ಲಿ ಸೋಮವಾರ ನಿಗಂಬೋ ಪ್ರಾಂತ್ಯದಲ್ಲಿ (Negombo Province) ಸಂಭವಿಸಿದ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯ ಪೊಲೀಸರು ಸಹ ಇದನ್ನು ದೃಢಪಡಿಸಿದ್ದಾರೆ.
ಮೇ 9ರಂದು ಪಶ್ಚಿಮ ಭಾಗದ ಪ್ರದೇಶಗಳಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಭಾಗದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಲಂಕಾದಲ್ಲಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಆಕ್ರೋಶಗೊಂಡಿರುವ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾರ್ವಜನಿಕರ ಮೇಲೆ ಗುಂಡು ಹಾರಿಸಲ್ಲ: ಶ್ರೀಲಂಕಾ ಸೇನಾ ಮುಖ್ಯಸ್ಥರ ಸ್ಪಷ್ಟನೆ
ಸರ್ಕಾರದ ವಿರುದ್ಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಲವು ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ ಕಳೆದ ಮೂರು ದಿನಗಳಿಂದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ.
ಸರಕಾರ ವಿರುದ್ಧ ಮತ್ತು ಪರ ಇರುವವರ ನಡುವೆ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಹಲವು ಪ್ರದೇಶದಲ್ಲಿ ಆಡಳಿತಾರೂಢ ಎಸ್ಎಲ್ಪಿಪಿ ಪಕ್ಷದ ನಾಯಕರು, ಸಚಿವರು, ಸಂಸದರ ಮನೆ, ಕಚೇರಿಗಳ ಮೇಲೆ ಜನರು ದಾಳಿ ಮಾಡಿದ್ದಾರೆ. ಮನೆಗಳನ್ನು ಸುಟ್ಟುಹಾಕಿದ್ದಾರೆ. ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅತುಕೊರಲ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲಂಕಾ: ಹಿಂಸಾಚಾರಿಗಳಿಗೆ ಗುಂಡು ಹಾರಿಸುವಂತೆ ರಕ್ಷಣಾ ಸಚಿವಾಲಯ ಆದೇಶ
ಸಂಸದರ ಆತ್ಮಹತ್ಯೆ; ಮಾಧ್ಯಮಗಳ ವರದಿ ಪ್ರಕಾರ ಸಂಸದ ಅಮರಕೀರ್ತಿ ಇದ್ದ ಕಾರಿನಿಂದ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಜನರು ಆ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಜನರ ದಾಳಿ ಕಂಡು ಭಯಭೀತಗೊಂಡ ಸಂಸದ ಹಾಗೂ ಅವರ ಭದ್ರತಾ ಸಿಬ್ಬಂದಿ ಅಲ್ಲಿಂದ ತಪ್ಪಿಸಿಕೊಂಡು ಬೇರೊಂದು ಕಟ್ಟಡ ಸೇರಿದ್ದಾರೆ. ಆ ಬಳಿಕ ಇಬ್ಬರೂ ಗುಂಡುಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೇರೊಂದು ಘಟನೆಯಲ್ಲಿ ಪ್ರತಿಭಟನಾಕಾರರ ಮೇಲೆ ಆಶ್ರುವಾಯು ಸಿಡಿಸುವಾಗ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಇಮದುವ ಪ್ರದೇಶೀಯ ಸಭಾ ಸಂಘಟನೆಯ ಮುಖ್ಯಸ್ಥ ಎ. ವಿ. ಶರತ್ ಕುಮಾರ ಎಂಬುವವರ ಮೇಲೆ ಜನರ ಗುಂಪುಂದು ದಾಳಿ ಮಾಡಿ ಹಲ್ಲೆ ಎಸಗಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸೋಮವಾರ ನಡೆದ ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 5-6 ಜನರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ವಿವಿಧ ಆಸ್ಪತ್ರೆಯ ಐಸಿಯುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗೋಂಬೋ ಪ್ರಾಂತ್ಯದ ಮಹಾಹುನುಪಿತ್ಯಾ ಎಂಬ ಪ್ರದೇಶದಲ್ಲಿ ಘರ್ಷಣೆ ನಡೆದು, 10 ಹೆಚ್ಚು ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
ಈಗ ಕ್ರೈಸ್ತರ ಪ್ರಭಾವ ಹೆಚ್ಚು ನಿಗೊಂಬೋ ಹೆಸರು ಮೂಲತಃ ತಮಿಳಿನ ನೀರ್ಕೊಳಂಬು ಹೆಸರಿನಿಂದ ಕರೆಯಲಾಗುತ್ತಿತ್ತು. ಇದನ್ನು ಸಿಂಹಳೀಯ ಭಾಷೆಯಲ್ಲಿ ಮೀಗಮುವ ಎಂದೂ ಸಂಬೋಧಿಸಲಾಗುತ್ತದೆ. ಪೋರ್ಚುಗೀಸರ ಆಡಳಿತದ ವೇಳೆ ತಮಿಳಿನ ನೀರ್ಕೊಳಂಬು ಹೆಸರು ಅಪಭ್ರಂಶಗೊಂಡು ನೀಗೊಂಬೋ ಆಗಿದೆ.
(ಒನ್ಇಂಡಿಯಾ ಸುದ್ದಿ)