ಖಾರದ ಪುಡಿ ಎರಚಿ, ಕುರ್ಚಿ ತೂರಾಡಿದ ಶ್ರೀಲಂಕಾ ಸಂಸದರು
ಶ್ರೀಲಂಕಾ ಸಂಸತ್ ನಡೆಸಲು ಸತತ ಎರಡನೇ ದಿನವೂ (ಶುಕ್ರವಾರ) ತಡೆಯೊಡ್ಡಲಾಯಿತು. ವಿವಾದಿತ ಪ್ರಧಾನಿ ಮಹಿಂದ ರಾಜಪಕ್ಸೆ ಬೆಂಬಲಿತ ಸಂಸದರು ವಿಪಕ್ಷದ ಸದಸ್ಯರ ಮೇಲೆ ಖಾರದ ಪುಡಿ ಎರಚಿದರು. ಪೊಲೀಸರ ಮೇಲೆ ಕುರ್ಚಿಗಳನ್ನು ತೂರಲಾಯಿತು. ಇದೇ ವಾರದಲ್ಲೇ ಎರಡನೇ ಬಾರಿಗೆ ರಾಜಪಕ್ಸೆ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು.
ರಾಜಪಕ್ಸೆ ಪರ ಸದಸ್ಯರು ಸಂಸತ್ ನ ಸ್ಪೀಕರ್ ಕರು ಜಯಸೂರ್ಯ ಮೇಲೆ ವಸ್ತುಗಳನ್ನು ಎಸೆದರು. ಇಷ್ಟೆಲ್ಲ ಗಲಭೆಗಳಾದರೂ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸದಂತೆ ಇರಲು ತಡೆಯುವುದಕ್ಕೆ ರಾಜಪಕ್ಸೆ ಪರ ಸದಸ್ಯರಿಗೆ ಸಾಧ್ಯವಾಗಲಿಲ್ಲ. ಎರಡನೇ ಬಾರಿಗೆ ರಾಜಪಕ್ಸೆ ಸರಕಾರವನ್ನು ವಜಾಗೊಳಿಸಲಾಯಿತು.
ಶ್ರೀಲಂಕಾ ರಾಜಕೀಯಕ್ಕೆ ಹೊಸ ತಿರುವು: ಸಂಸತ್ ವಿಸರ್ಜನೆಗೆ ತಡೆ
ಮೂರು ವಾರಗಳ ಹಿಂದೆ ಶ್ರೀಲಂಕಾದ ಅಧ್ಯಕ್ಷ ಸಿರಿಸೇನ ಮೈತ್ರಿಪಾಲ ದಿಢೀರ್ ಆಗಿ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರನ್ನು ಪದಚ್ಯುತಗೊಳಿಸಿ, ರಾಜಪಕ್ಸೆಯನ್ನು ನೇಮಿಸಿದ್ದರು. ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರಿಂದ ಮೂವತ್ತು ನಿಮಿಷ ತಡವಾಗಿ ಸಂಸತ್ ಕಲಾಪ ಆರಂಭವಾಯಿತು. ಇದಕ್ಕೂ ಒಂದು ದಿನಕ್ಕೆ ಮುನ್ನ ಸಂಸತ್ ಅಧಿವೇಶನಕ್ಕೆ ಚಾಕು ತಂದಿದ್ದ ರನಿಲ್ ವಿಕ್ರಮ್ ಸಿಂಘೆ ಪರ ಇಬ್ಬರು ಸದಸ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಯಿತು.
ಕೈಗೆ ಸಿಕ್ಕಂಥ ಹಲವು ವಸ್ತುಗಳನ್ನು ಸ್ಪೀಕರ್ ಕುರ್ಚಿಯತ್ತ ತೂರಲಾಯಿತು. ಈ ವೇಳೆ ಶಸ್ತ್ರಸಜ್ಜಿತ ಪೊಲೀಸರು ರಕ್ಷಣೆ ನೀಡಲು ಮುಂದಾದರು. ಇವೆಲ್ಲವನ್ನೂ ರಾಜಪಕ್ಸೆ ಗಮನಿಸುತ್ತಿದ್ದರು. ಅವರ ಕಡೆಯ ಸಂಸದರು ಕುರ್ಚಿ, ಪುಸ್ತಕಗಳನ್ನು ತೂರಿದ್ದರಿಂದ ಕನಿಷ್ಠ ಇಬ್ಬರಿಗೆ ಗಾಯಗಳಾದವು. ಬೇರೆ ಸದಸ್ಯರು ಸ್ಪೀಕರ್ ಕುರ್ಚಿಯನ್ನು ಜಗ್ಗಾಡಿ, ನೆಲಕ್ಕೆ ಎಳೆದರು.
ಅಧಿಕಾರಿಗಳ ರಕ್ಷಣೆ ಮಧ್ಯೆಯೇ ಸ್ಪೀಕರ್ ಜಯಸೂರ್ಯ ಅವಿಶ್ವಾಸ ನಿರ್ಣಯ ಮಂಡನೆಗೆ ಕರೆ ನೀಡಿದರು. ಮೊದಲಿಗೆ ಹೆಸರಿನ ಪ್ರಕಾರ ಮತ ನೀಡಲು ಕರೆ ನೀಡಿದರು. ಆದರೆ ಕಾವೇರಿದ ಗಲಾಟೆ ಇದ್ದುದರಿಂದ 'ಧ್ವನಿ ಮತ'ಕ್ಕೆ ಹಾಕಿದರು. ಆ ನಂತರ ಅವಿಶ್ವಾಸ ಮಂಡನೆ ಆಗಿದೆ ಹಾಗೂ ನವೆಂಬರ್ ಹತ್ತೊಂಬತ್ತರ ತನಕ ಸಂಸತ್ ಮುಂದೂಡಲಾಗಿದೆ ಎಂದು ಸ್ಪೀಕರ್ ಘೋಷಣೆ ಮಾಡಿದರು.