ಪೆಟ್ರೋಲ್, ಡೀಸೆಲ್ ಕೊರತೆ: ಶ್ರೀಲಂಕಾ ಮಿಲಿಟರಿ ಗುಂಡಿನ ದಾಳಿ
ಕೊಲಂಬೊ, ಜೂನ್ 19: ಪೆಟ್ರೋಲ್ ಬಂಕ್ನಲ್ಲಿ ಗಲಭೆ ನಿಯಂತ್ರಿಸಲು ಶ್ರೀಲಂಕಾದ ಮಿಲಿಟರಿ ಗುಂಡಿನ ದಾಳಿ ನಡೆಸಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಕಂಗೆಟ್ಟಿದೆ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಿದ್ದು, ಕಿಲೋ ಮೀಟರ್ ಗಟ್ಟಲೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಶನಿವಾರ ರಾತ್ರಿ ಕೊಲಂಬೊದಿಂದ ಉತ್ತರಕ್ಕೆ 365 ಕಿಲೋಮೀಟರ್ (228 ಮೈಲುಗಳು) ದೂರದಲ್ಲಿರುವ ವಿಸುವಮಡುವಿನಲ್ಲಿ ಸೈನಿಕರು ಗುಂಡು ಹಾರಿಸಿದರು ಎಂದು ವರದಿಯಾಗಿದೆ. ಮಿಲಿಟರಿ ಕಾವಲು ಕೇಂದ್ರಕ್ಕೆ ಕಲ್ಲು ತೂರಲಾಯಿತು ಎಂದು ಸೇನಾ ವಕ್ತಾರ ನಿಲಂತ ಪ್ರೇಮರತ್ನೆ ಹೇಳಿದ್ದಾರೆ. 20 ರಿಂದ 30 ಜನರ ಗುಂಪು ಕಲ್ಲು ತೂರಾಟ ನಡೆಸಿ ಸೇನಾ ಟ್ರಕ್ಗೆ ಹಾನಿ ಮಾಡಿದೆ ಎಂದು ಪ್ರೇಮರತ್ನೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2 ವಾರ ವರ್ಕ್ ಫ್ರಮ್ ಹೋಂಗೆ ಸೂಚಿಸಿದ ಶ್ರೀಲಂಕಾ, ಏಕೆ?
ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಅಶಾಂತಿಯನ್ನು ಹತ್ತಿಕ್ಕಲು ಸೇನೆಯು ಮೊದಲ ಬಾರಿಗೆ ಗುಂಡು ಹಾರಿಸಿದೆ. ಘಟನೆಯಲ್ಲಿ ನಾಲ್ವರು ನಾಗರಿಕರು ಮತ್ತು ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಪ್ನಲ್ಲಿ ಪೆಟ್ರೋಲ್ ಖಾಲಿಯಾಗುತ್ತಿದ್ದಂತೆ, ವಾಹನ ಸವಾರರು ಪ್ರತಿಭಟನೆ ಆರಂಭಿಸಿದರು ಮತ್ತು ಪ್ರತಿಭಟನೆ ವಿಕೋಪಕ್ಕೆ ತಿರುಗಿ ಸೈನಿಕರೊಂದಿಗೆ ಘರ್ಷಣೆಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ಶೀಘ್ರದಲ್ಲೇ ವಿಮಾನಯಾನ ಪುನರಾರಂಭ : ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ
ತೀವ್ರ ಸಂಕಷ್ಟದಲ್ಲಿರುವ ದ್ವೀಪರಾಷ್ಟ್ರ
ಶ್ರೀಲಂಕಾವು ಸ್ವಾತಂತ್ರ್ಯದ ನಂತರದ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹಣವನ್ನು ಹೊಂದಿಸಲು ಶ್ರೀಲಂಕಾ ಪರದಾಡುತ್ತಿದೆ.
22 ಮಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಇಂಧನಕ್ಕಾಗಿ ತೀವ್ರ ಕೊರತೆ ಎದುರಾಗಿದೆ. ದೇಶಕ್ಕೆ ಅಗತ್ಯವಾಗುವಷ್ಟು ಇಂಧನ ಲಭ್ಯವಿಲ್ಲ. ಪೆಟ್ರೋಲ್, ಡೀಸೆಲ್ಗಾಗಿ ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗಿದೆ.
ಪೆಟ್ರೋಲ್ ಬಂಕ್ ಭದ್ರತೆಗೆ ಸೇನೆ ನಿಯೋಜನೆ
ಇಂಧನ ಕೇಂದ್ರಗಳ ಭದ್ರತೆಗಾಗಿ ಶ್ರೀಲಂಕಾ ಸರ್ಕಾರ ಸಶಸ್ತ್ರ ಪೋಲೀಸ್ ಮತ್ತು ಪಡೆಗಳನ್ನು ನಿಯೋಜಿಸಿದೆ.
ಪಡಿತರ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆಗೆ ಸಂಬಂಧಿಸಿದಂತೆ ಘರ್ಷಣೆಯು ಭುಗಿಲೆದ್ದಾಗ ರಂಬುಕ್ಕನ ಕೇಂದ್ರ ಪಟ್ಟಣದಲ್ಲಿ ಏಪ್ರಿಲ್ನಲ್ಲಿ ವಾಹನ ಚಾಲಕನನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು.
ವಾರಾಂತ್ಯದಲ್ಲಿ ಮೂರು ಸ್ಥಳಗಳಲ್ಲಿ ವಾಹನ ಚಾಲಕರನ್ನು ಒಳಗೊಂಡ ಘರ್ಷಣೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಘರ್ಷಣೆಯಲ್ಲಿ ಕನಿಷ್ಠ ಆರು ಕಾನ್ಸ್ಟೇಬಲ್ಗಳು ಗಾಯಗೊಂಡಿದ್ದರೆ ಏಳು ವಾಹನ ಚಾಲಕರನ್ನು ಬಂಧಿಸಲಾಗಿದೆ.
ಎರಡು ವಾರ ಶಾಲೆ, ಕಚೇರಿ ಬಂದ್
ಶ್ರೀಲಂಕಾದಲ್ಲಿ ಜನರ ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಖಾಲಿಯಾಗುತ್ತಿರುವ ಇಂಧನ ದಾಸ್ತಾನುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಸರ್ಕಾರವು ಎರಡು ವಾರಗಳ ಕಾಲ ರಾಜ್ಯ ಸಂಸ್ಥೆಗಳು ಮತ್ತು ಶಾಲೆಗಳನ್ನು ಮುಚ್ಚುವಂತೆ ಘೋಷಿಸಿತು.
ದೇಶವು ದಾಖಲೆಯ ಅಧಿಕ ಹಣದುಬ್ಬರ ಮತ್ತು ದೀರ್ಘಾವಧಿಯ ವಿದ್ಯುತ್ ಕೊರತೆ ಎದುರಿಸುತ್ತಿದೆ, ಹಲವು ತಿಂಗಳಿನಿಂದ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಆಹಾರ ಕೊರತೆಯಿಂದ ಜನ ಕಂಗಾಲು
ಶ್ರೀಲಂಕಾದಲ್ಲಿ ಐದು ಜನರಲ್ಲಿ ನಾಲ್ಕು ಜನರು ಊಟವನ್ನು ತ್ಯಜಿಸಲು ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಭೀಕರ ಮಾನವೀಯ ಬಿಕ್ಕಟ್ಟು ಎದುರಾಗಲಿದ್ದು ಲಕ್ಷಾಂತರ ಜನ ಹಸಿನಿಂದ ನರಳುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.
ವಿಶ್ವ ಆಹಾರ ಕಾರ್ಯಕ್ರಮವು (WFP) ಕೊಲಂಬೊದ ಹಲವು ಪ್ರದೇಶಗಳಲ್ಲಿ "ಜೀವ ಉಳಿಸುವ ಸಹಾಯ" ದ ಭಾಗವಾಗಿ ಸುಮಾರು 2,000 ಗರ್ಭಿಣಿಯರಿಗೆ ಆಹಾರ ಚೀಟಿಗಳನ್ನು ವಿತರಿಸಲು ಪ್ರಾರಂಭಿಸಿದೆ.
ಜೂನ್ ಮತ್ತು ಡಿಸೆಂಬರ್ ನಡುವಿನ ಆಹಾರ ಪರಿಹಾರ ಪ್ರಯತ್ನಕ್ಕಾಗಿ ವಿಶ್ವ ಆಹಾರ ಕಾರ್ಯಕ್ರಮದ ಅಡಿಯಲ್ಲಿ 60 ಮಿಲಿಯನ್ ಡಾಲರ್ ಸಂಗ್ರಹಿಸಲು ಪ್ರಯತ್ನಿಸುತ್ತಿದೆ. ಶ್ರೀಲಂಕಾ ತನ್ನ 51 ಡಾಲರ್ ಬಿಲಿಯನ್ ವಿದೇಶಿ ಸಾಲವನ್ನು ಏಪ್ರಿಲ್ನಲ್ಲಿ ಡೀಫಾಲ್ಟ್ ಮಾಡಿದೆ ಮತ್ತು ಬೇಲ್ಔಟ್ಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಮಾತುಕತೆ ನಡೆಸುತ್ತಿದೆ.