ಶ್ರೀಲಂಕಾದಲ್ಲಿ ಸಾಲುಗಟ್ಟಿ ನಿಂತವರಿಗೆ ಸಿಗುವುದೆಷ್ಟು ಇಂಧನ!?
ಕೊಲಂಬೋ, ಜುಲೈ 16: ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಇಂಧನ ಕೊರತೆಯನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವುದಕ್ಕಾಗಿ ರಾಷ್ಟ್ರೀಯ ಇಂಧನ ಕೋಟಾ ಯೋಜನೆಯನ್ನು ಪರಿಚಯಿಸುವುದಕ್ಕೆ ನಿರ್ಧರಿಸಲಾಗಿದೆ.
ಸರ್ಕಾರದ ಕೋಟಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಗುರುತಿನ ಚೀಟಿಯನ್ನು ಹೊಂದಿರುವ ಪ್ರತಿ ವಾಹನಕ್ಕೆ ಒಂದು ವಾರದಲ್ಲಿ ಇಂತಿಷ್ಟು ಇಂಧನವನ್ನು ಕಡ್ಡಾಯವಾಗಿ ನೀಡುವುದಕ್ಕೆ ನಿಗದಿಪಡಿಸಲಾಗಿದೆ.
ಸಿಂಗಾಪುರಕ್ಕೆ ತೆರಳಿ ರಾಜೀನಾಮೆ ನೀಡಿದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ
ವಾಹನದ ಚಾಸಿಸ್ ಸಂಖ್ಯೆ ಮತ್ತು ವಿವರಗಳನ್ನು ಪರಿಶೀಲಿಸಿದ ನಂತರ QR ಕೋಡ್ ಅನ್ನು ಹಂಚಲಾಗುತ್ತದೆ. ನಂಬರ್ ಪ್ಲೇಟ್ನ ಕೊನೆಯ ಅಂಕಿಯ ಆಧಾರದ ಮೇಲೆ ವಾರದ ಎರಡು ದಿನ ಇಂಧನವನ್ನು ಹಂಚಿಕೆ ಮಾಡಲಾಗುತ್ತದೆ.
ಶ್ರೀಲಂಕಾದಲ್ಲಿ ಪರಿಸ್ಥಿತಿ ಸುಧಾರಣೆ
ಕಳೆದ ಗುರುವಾರವಷ್ಟೇ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ ಮಾಲ್ಡೀವ್ಸ್ ಮತ್ತು ಅಲ್ಲಿಂದ ಸಿಂಗಾಪೂರಕ್ಕೆ ಪಲಾಯನ ಮಾಡಿದರು. ಇದರ ಮಧ್ಯೆ ದ್ವೀಪರಾಷ್ಟ್ರದಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿದೆ. ಈ ಹಿನ್ನೆಲೆ ಇಂಧನ ಕೊರತೆಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕಾಗಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.
ಪೆಟ್ರೋಲ್-ಡೀಸೆಲ್ ಖರೀದಿಗಾಗಿ ಜನರ ಸರದಿ ಸಾಲು
ಶ್ರೀಲಂಕಾದಲ್ಲಿ ಕಳ್ಳ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟಕ್ಕೆ ಕಡಿವಾಣ ಹಾಕುವುದು. ಇಂಧನ ಸಂಗ್ರಹಣೆಯನ್ನು ನಿಯಂತ್ರಿಸುವುದು ಹಾಗೂ ದ್ವೀಪರಾಷ್ಟ್ರದ ಮಂದಿಗೆ ಸಮಾನ ರೀತಿಯಲ್ಲಿ ಇಂಧನವನ್ನು ಪೂರೈಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಹೊಸ ಇಂಧನ ವಿತರಣಾ ಕಾರ್ಯ ವಿಧಾನವನ್ನು ರೂಪಿಸಲಾಗುತ್ತಿದೆ. ದೇಶದ ಜನರು ಗ್ಯಾಸ್ ಸ್ಟೇಷನ್ಗಳ ಹೊರಗೆ ಇಂಧನ ತುಂಬಿಸಿಕೊಳ್ಳುವುದಕ್ಕಾಗಿಯೇ ಕಿಲೋಮೀಟರ್ ಉದ್ದದ ಸರತಿ ಸಾಲುಗಳಲ್ಲಿ ನಿಂತಿದ್ದಾರೆ.
ಶ್ರೀಲಂಕಾದಲ್ಲಿ ಶಾಲಾ-ಕಾಲೇಜು ಬಂದ್
ಇಂಧನ ಕೊರತೆಯನ್ನು ಮನಗಂಡು ಹಲವು ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿನಿತ್ಯ ಉದ್ಯೋಗಿಗಳು ಕಚೇರಿಗಳಿಗೆ ತೆರಳುವುದಕ್ಕಾಗಿ ಇಂಧನ ಬಳಕೆ ಆಗುತ್ತಿರುವುವದು ಹೆಚ್ಚಾಗಿರುವ ಹಿನ್ನೆಲೆ ಉದ್ಯೋಗಿಗಳಿಗೆ ವರ್ಕ್ ಫ್ರಾಮ್ ಹೋಮ್ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನೊಂದು ಕಡೆಯಲ್ಲಿ ಮಕ್ಕಳು ಶಾಲೆಗಳಿಗೆ ಹೋಗುವುದಕ್ಕೆ ಸಾಧ್ಯಯವಾಗದ ಕಾರಣ ಶಾಲೆಗಳನ್ನು ಬಂದ್ ಮಾಡಲಾಗಿದೆ. ಆ ಮೂಲಕ ಇಂಧನ ಬಳಕೆಯ ಪ್ರಮಾಣವನ್ನು ತಗ್ಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ದ್ವೀಪರಾಷ್ಟ್ರದಿಂದ ಮಾಜಿ ಅಧ್ಯಕ್ಷ ರಾಜಪಕ್ಸೆ ಜೂಟ್
ಇಡೀ ರಾಷ್ಟ್ರವೇ ಆರ್ಥಿಕ ಬಿಕ್ಕಟ್ಟು, ಇಂಧನ ಕೊರತೆ, ಸರ್ಕಾರದ ನಿರ್ವಹಣೆ ವೈಫಲ್ಯದ ಸುಳಿಗೆ ಸಿಲುಕಿದ ಸಂದರ್ಭದಲ್ಲಿ ಜನರು ಕೆರಳಿ ರಸ್ತೆಗೆ ಇಳಿದರು. ಒಂದು ಹಂತದಲ್ಲಿ ಜನರು ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ನುಗ್ಗಿ ವಸ್ತುಗಳನ್ನು ಧ್ವಂಸಗೊಳಿಸಿದರು. ಧಿಕ್ಕಾರ ಘೋಷಣೆಗಳನ್ನು ಕೂಗುತ್ತಿರುವುದರ ಮಧ್ಯೆ ಸರ್ಕಾರದ ಚುಕ್ಕಾಣಿಯನ್ನು ಬಿಟ್ಟು ಓಡಿ ಹೋಗುವ ನಿರ್ಧಾರಕ್ಕೆ ರಾಜಪಕ್ಸೆ ಬಂದರು. ಜುಲೈ 14ರಂದು ರಾಜಪಕ್ಸೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮಾಲ್ಡೀವ್ಸ್ ಕಡೆಗೆ ಪಲಾಯನ ಮಾಡಿದರು. ಅಲ್ಲಿನ ಶ್ರೀಲಂಕಾ ಪ್ರಜೆಗಳು ಪ್ರತಿಭಟನೆ ಮಾಡುತ್ತಿರುವುದನ್ನು ಅರಿತುಕೊಂಡು ಸಿಂಗಾಪುರಕ್ಕೆ ಹಾರಿದ್ದರು.