ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ; ಇಪ್ಪತ್ನಾಲ್ಕು ಮಂದಿ ವಶಕ್ಕೆ
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 22: ಈಸ್ಟರ್ ಆಚರಣೆ ವೇಳೆ ಭಾನುವಾರದಂದು ನಡೆದ ದಾಳಿ ಹಿನ್ನೆಲೆಯಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಶ್ರೀಲಂಕಾ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಪೊಲೀಸರು ಹಾಗೂ ಮೂರು ಸೇನೆಗಳಿಗೆ (ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆ) ಸಾರ್ವಜನಿಕರ ಭದ್ರತೆಗಾಗಿ ವಿಶೇಷ ಅಧಿಕಾರ ಸಿಕ್ಕಂತಾಗುತ್ತದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅನಿರ್ದಿಷ್ಟಾವಧಿ ಕರ್ಫ್ಯೂಗೆ ಭಾನುವಾರ ಅದೇಶ ನೀಡಲಾಗಿತ್ತು. ಸೋಮವಾರದಂದು ಹಿಂಪಡೆಯಲಾಯಿತು. ಇನ್ನು ಸಾರ್ವಜನಿಕರ ಸಂಚಾರ ಕಡಿಮೆ ಮಾಡುವ ದೃಷ್ಟಿಯಿಂದ ಎರಡು ದಿನಗಳ ರಜಾ ಘೋಷಣೆ ಮಾಡಲಾಗಿದೆ. ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಪ್ಪತ್ನಾಲ್ಕು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರ ಬಗ್ಗೆ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.
ಕರ್ಫ್ಯೂ ಹಿಂಪಡೆಯಲಾಗಿದ್ದರೂ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಜನರ ಸಂಚಾರ ತೀರಾ ಕಡಿಮೆ ಇತ್ತು. ಶಸ್ತ್ರಸಜ್ಜಿತರಾದ ಸೈನಿಕರು ಶ್ರೀಲಂಕಾದ ಪ್ರಮುಖ ಹೋಟೆಲ್ ಗಳು, ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಪಹರೆ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಕ್ಕುಬಿದ್ದಿದ್ದ ಪ್ರಯಾಣಿಕರು ನಿರ್ಬಂಧ ಹಿಂಪಡೆದ ನಂತರ ಮನೆಗಳಿಗೆ ಹಿಂತಿರುಗುತ್ತಿದ್ದಾರೆ.
ಈ ದಾಳಿಯು ಆತ್ಮಹತ್ಯಾ ಬಾಂಬರ್ ದಾಳಿ ಎಂಬ ಶಂಕೆ ಇದೆ. ಭದ್ರತಾ ಸಿಬ್ಬಂದಿ ಕೊಲಂಬೋದ ಮನೆಯ ಮೇಲೆ ದಾಳಿ ನಡೆಸಿದ್ದು, ಆ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಮೂವರು ಪೊಲೀಸ್ ಅಧಿಕಾರಿಗಳು ಸಹ ಸಾವನ್ನಪ್ಪಿದ್ದಾರೆ.