ದಿನಕ್ಕೆ 10 ಗಂಟೆ ಪವರ್ ಕಟ್; ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಸೃಷ್ಟಿಸಿದ ಅಸ್ಥಿರತೆ
ಕೋಲಂಬೋ, ಮಾರ್ಚ್ 30: ನೆರೆಯ ರಾಷ್ಟ್ರ ಶ್ರೀಲಂಕಾ ಬದಲಾಗಿದೆ. ಈಗ ದಿನದಲ್ಲಿ 7 ರಿಂದ 10 ಗಂಟೆಗಳ ಕಾಲ ಕರೆಂಟ್ ಇಲ್ಲ, ಕಿಲೋ ಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತರೂ ಸರಿಯಾಗಿ ಇಂಧನ ಸಿಗುತ್ತಿಲ್ಲ, ಜೀವರಕ್ಷಣ ಔಷಧಿಗಳೂ ಇಲ್ಲ, ಅಗತ್ಯ ವಸ್ತುಗಳೂ ಕೈಗೆಟಕುತ್ತಿಲ್ಲ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪರಿಸ್ಥಿತಿ ಈಗ ಮೊದಲಿನಂತಿಲ್ಲ.
ಈ ಹಿಂದೆಂದೂ ಕಂಡು ಕೇಳರಿಯದಂತಹ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಜನರು ನಿತ್ಯ ನರಕಯಾತನೆ ಅನುಭವಿಸುವಂಥಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ವಿದೇಶಿ ಕರೆನ್ಸಿಯ ನಿರ್ಣಾಯಕ ಕೊರತೆಯಿಂದಾಗಿ ಆಮದು ಅಭಾವ ಸೃಷ್ಟಿ ಆಗುತ್ತಿದೆ. ಜೀವ ರಕ್ಷಣ ಔಷಧಿಗಳಿಂದ ಹಿಡಿದು ಸಿಮೆಂಟ್ ವರೆಗೂ ಎಲ್ಲದರ ಆಮದಿಗೆ ಹಣ ಪಾವತಿಸುವುದಕ್ಕೆ ಅಸಾಧ್ಯವಾಗುತ್ತಿದೆ. ಶ್ರೀಲಂಕಾದ ಪರಿಸ್ಥಿತಿ ಆರ್ಥಿಕ ಮುಗ್ಗಟ್ಟಿನಿಂದ ಸಂಪೂರ್ಣ ಬದಲಾಗಿದೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ತಮಿಳುನಾಡಿಗೆ ನಿರಾಶ್ರಿತರ ಆಗಮನ, ಅಕ್ರಮ ಪ್ರವೇಶಿಸಿ ಜೈಲು ಪಾಲು
ದಿನ ಬೆಳಗಾದ್ರೆ ಇಂಧನಕ್ಕಾಗಿ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ. ಅಗತ್ಯ ವಸ್ತುಗಳು, ಆಹಾರ ಧಾನ್ಯಗಳ ಬೆಲೆಯು ಗಗನಮುಖಿ ಆಗುತ್ತಿರುವ ಈ ಸಂದರ್ಭದಲ್ಲಿ ನಾವು ಕುಟುಂಬವನ್ನು ಹೇಗೆ ಸಾಕುವುದು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸುತ್ತಿರುವ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಶ್ರೀಲಂಕಾದಲ್ಲಿ ಸೃಷ್ಟಿ ಆಗಿರುವ ಆರ್ಥಿಕ ಮುಗ್ಗಟ್ಟು ಹಾಗೂ ಅದರ ಸುತ್ತಮುತ್ತಲಿನ ಬೆಳವಣಿಗೆಗಳ ಕುರಿತು ಒಂದು ವರದಿ ಇಲ್ಲಿದೆ ಓದಿ.
ಸೀಮೆ ಎಣ್ಣೆಗಾಗಿ ಕಾದು ಕಾದು ನೊಂದ ಮಹಿಳೆಯ ನೋವಿನ ನುಡಿ
ಶ್ರೀಲಂಕಾ ರಾಜಧಾನಿ ಕೋಲಂಬೋದಲ್ಲಿಯೇ ಜನರು ಅಗತ್ಯ ವಸ್ತುಗಳು ಸಿಗದೇ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. "ಕಳೆದ ಐದು ಗಂಟೆಗಳಿಂದ ತನ್ನ ಪಾಲಿನ ಸೀಮೆಎಣ್ಣೆ ಖರೀದಿಸುವುದಕ್ಕಾಗಿ ಸಾಲುಗಟ್ಟಿಕೊಂಡು ನಿಂತಿದ್ದೇನೆ. ಸೀಮೆ ಎಣ್ಣೆ ಸಿಕ್ಕರೆ ಮಾತ್ರ ಮನೆಯ ಒಲೆ ಉರಿಯುವುದು. ನೆತ್ತಿ ಸುಡುವ ಬಿಸಿಲಿನಲ್ಲಿ ನಿಂತು ನಿಂತು ಸಾಕಾಗಿ ಮೂವರು ನನ್ನ ಕಣ್ಣು ಎದುರಿನಲ್ಲಿ ಮೂರ್ಛೆ ಹೋಗಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇನ್ನು ನಮ್ಮ ಮನೆಯಲ್ಲಿ ಇರುವುದೇ ನಾನು, ನಮ್ಮ ಮಗ ಹಾಗೂ ಪತಿ, ಅವರು ಇಬ್ಬರೂ ಉದ್ಯೋಗಕ್ಕಾಗಿ ಹೋಗುತ್ತಿದ್ದು, ನಾನು ಈ ಸುಡು ಬಿಸಿಲಿನಲ್ಲಿ ಸೀಮೆ ಎಣ್ಣೆಗಾಗಿ ಕಾದು ನಿಲ್ಲುವುದು ಅನಿವಾರ್ಯವಾಗಿದೆ," ಎಂದು ಶ್ರೀಲಂಕಾದ ಸಗಯಾರಾಣಿ ಎಂಬ ಮಹಿಳೆ ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಸರ್ಜರಿ ಇಲ್ಲ, ಆಹಾರ ಪೂರೈಕೆಯೂ ಇಲ್ಲ
ಬಂದರಿನಲ್ಲಿರುವ ಟ್ರಕ್ಗಳು ಆಹಾರ ಮತ್ತು ಕಟ್ಟಡ ಸಾಮಗ್ರಿಗಳನ್ನು ಇತರ ನಗರ ಕೇಂದ್ರಗಳಿಗೆ ಸರಬರಾಜು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಶ್ರೀಲಂಕಾದ ಹಸಿರು ಒಳನಾಡಿನ ಬೆಟ್ಟಗಳ ಸುತ್ತಲೂ ಇರುವ ತೋಟಗಳಿಂದ ಚಹಾವನ್ನು ಮರಳಿ ತರಲು ಸಾಧ್ಯವಾಗುತ್ತಿಲ್ಲ. ಬಸ್ ಸಂಚಾರ ಸಹಜ ಸ್ಥಿತಿಯಲ್ಲಿ ಇರದೇ ಕಾರ್ಮಿಕರು ಪರದಾಡುತ್ತಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಪೂರಕ ಔಷಧಿಗಳು ಇಲ್ಲದ ಹಿನ್ನೆಲೆಯಲ್ಲಿ ಸರ್ಜರಿಯನ್ನು ಸ್ಥಗಿತಗೊಳಿಸಿವೆ. ಕಾಗದದ ಕೊರತೆಯಿಂದಾಗಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.
ಆರ್ಥಿಕ ಮುಗ್ಗಟ್ಟಿನಿಂದಾಗಿ ಶ್ರೀಲಂಕಾ ದುಸ್ಥಿತಿ ವಿವರಿಸಿದ ವೃದ್ಧ
ಕಳೆದ 60 ವರ್ಷಗಳಿಂದಲೂ ನಾನು ಕೊಲಂಬೋ ನಗರದಲ್ಲಿಯೇ ವಾಸವಾಗಿದ್ದೇನೆ. ಆದರೆ ಈ ಮೊದಲೆಂದೂ ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಇಲ್ಲಿ ತಿನ್ನುವುದಕ್ಕೆ ಏನೂ, ಕುಡಿಯುವುದಕ್ಕೂ ಸಾರ್ವಜನಿಕರಿಗೆ ಏನೂ ಸಿಗುತ್ತಿಲ್ಲ. ಸರ್ಕಾರದ ಭಾಗವಾಗಿರುವ ರಾಜಕಾರಣಿಗಳು ಮತ್ತು ಹಣವಂತರು ಅರಮನೆಗಳಲ್ಲಿ ಐಶಾರಾಮಿಯಾಗಿದ್ದಾರೆ. ಆದರೆ ಬಡವರು ಮಾತ್ರ ಬೀದಿಗಳಲ್ಲಿ ಭಿಕ್ಷೆ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು ಹೇಳಿದರು.
ಶ್ರೀಲಂಕಾದಲ್ಲಿ ಬುಧವಾರ ಒಂದೇ ದಿನದಲ್ಲಿ 10 ಗಂಟೆಗಳ ಕಾಲ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಇಂಧನ ಕೊರತೆ ಮತ್ತು ಜನರೇಟರ್ಗಳ ಅಲಭ್ಯತೆಯಿಂದಾಗಿ ಅಸಮರ್ಪಕ ವಿದ್ಯುತ್ ಉತ್ಪಾದನೆಯಿಂದಾಗಿ ಬೇಡಿಕೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಲಾಯಿತು ಎಂದು ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ ಹೇಳಿಕೆಯಲ್ಲಿ ತಿಳಿಸಿದೆ.
1948ರ ನಂತರ ಮೊದಲ ಬಾರಿ ಅತಿಕೆಟ್ಟ ಸ್ಥಿತಿ ನಿರ್ಮಾಣ
ಶ್ರೀಲಂಕಾದ 22 ದಶಲಕ್ಷ ಜನರಲ್ಲಿ ಅನೇಕರಿಗೆ ಖಾಸಗಿತನ ಹೊಸದೇನಲ್ಲ. 1970ರ ಜಾಗತಿಕ ತೈಲ ಬಿಕ್ಕಟ್ಟಿನ ಉದ್ದಕ್ಕೂ, ಅಧಿಕಾರಿಗಳು ಸಕ್ಕರೆಯಂತಹ ಅಗತ್ಯ ವಸ್ತುಗಳಿಗಾಗಿ ಪಡಿತರ ಪುಸ್ತಕಗಳನ್ನು ನೀಡಿದರು. ಆದರೆ ಸರ್ಕಾರವು ಪ್ರಸ್ತುತ ಆರ್ಥಿಕ ವಿಪತ್ತು 1948ರಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರದ ಸ್ವಾತಂತ್ರ್ಯದ ನಂತರ ಅತ್ಯಂತ ಕೆಟ್ಟದಾಗಿದೆ ಎಂದು ಒಪ್ಪಿಕೊಳ್ಳುತ್ತದೆ. ಇದರ ಮಧ್ಯೆ ಈಗ ಪಡಿತರ ವ್ಯವಸ್ಥೆಯಲ್ಲಿ ಕನಿಷ್ಠ ಸರಕುಗಳನ್ನು ನೀಡಲಾಗುತ್ತದೆ ಎಂಬ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ.
2016ರಲ್ಲಿ ರೈತರು ತೀವ್ರ ಬರಗಾಲದಿಂದ ಬಳಲುತ್ತಿದ್ದರು. ಮೂರು ವರ್ಷಗಳ ನಂತರ ಈಸ್ಟರ್ ಸಂಡೆ ಇಸ್ಲಾಮಿಸ್ಟ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 279 ಜನರು ಮೃತಪಟ್ಟಿದ್ದು, ವಿದೇಶಿ ಪ್ರಯಾಣಿಕರ ರದ್ದತಿಗೆ ಕಾರಣವಾಯಿತು. ಮೊದಲ ಪ್ರವಾಸೋದ್ಯಮವು ಪಾತಾಳಕ್ಕೆ ಕುಸಿಯುವಂತಾಗಿದ್ದ ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತಷ್ಟು ಸಂಕಷ್ಟಕ್ಕೆ ದೂಡಿತು. ಶ್ರೀಲಂಕಾ ಆಮದು ಮಾಡಿಕೊಳ್ಳುವ ಪ್ರತಿಯೊಂದು ಸರಕು ಮತ್ತು ಸೇವೆಗಳಿಗೆ ವಿದೇಶಿ ಮೌಲ್ಯ ಡಾಲರ್ ಲೆಕ್ಕದಲ್ಲಿ ಹಣ ಪಾವತಿ ಮಾಡಬೇಕಾಗಿತ್ತು. ಅದರ ಕೊರತೆಯು ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಇನ್ನೊಂದು ಮುಖ್ಯ ಕಾರಣವಾಯಿತು.
ಸರ್ಕಾರವನ್ನು ದೂಷಿಸಿದ ಮುರ್ತಾಜಾ ಜಾಫರ್ಜಿ
ಸರ್ಕಾರದ "ನಿರ್ವಹಣೆಯ ವೈಫಲ್ಯ" ಎಂದು ಕೊಲಂಬೊ ಮೂಲದ ಅಡ್ವೊಕಾಟಾ ಇನ್ಸ್ಟಿಟ್ಯೂಟ್ ಥಿಂಕ್ ಟ್ಯಾಂಕ್ನ ಅಧ್ಯಕ್ಷ ಮುರ್ತಾಜಾ ಜಾಫರ್ಜಿ ಹೇಳಿದ್ದಾರೆ. ವರ್ಷಗಳ ದೀರ್ಘಕಾಲದ ಬಜೆಟ್ ಕೊರತೆ, ಸರ್ಕಾರದ ಆದಾಯವನ್ನು ಕಿತ್ತುಕೊಳ್ಳುವ ಸಾಂಕ್ರಾಮಿಕ ಪಿಡುಗು, ಯಾವುದೇ ಸಲಹೆಗಳಿಲ್ಲದೇ ಮಾಡಿದ ತೆರಿಗೆ ಕಡಿತಗಳು, ಶ್ರೀಲಂಕಾದಲ್ಲಿ ವಿದ್ಯುತ್ ಮತ್ತು ಇತರ ವಸ್ತುಗಳ ಮೇಲಿನ ವಿನಾಯಿತಿಗಳನ್ನು ಅವರು ದೂಷಿಸಿದರು.
ಕಳಪೆ ನೀತಿ-ನಿರ್ಧಾರಗಳು ಸಮಸ್ಯೆಗಳನ್ನು ಹೆಚ್ಚಿಸಿದವು. ಕಳೆದ ವರ್ಷವಷ್ಟೇ ಶ್ರೀಲಂಕಾ ವಿಶ್ವದ ಮೊದಲ ಸಂಪೂರ್ಣ ಸಾವಯವ ಕೃಷಿ ರಾಷ್ಟ್ರವಾಗಲಿದೆ ಎಂದು ಅಧಿಕಾರಿಗಳು ಘೋಷಿಸಿದರು. ವಿದೇಶಿ ಕರೆನ್ಸಿಯ ಹೊರಹರಿವು ನಿಧಾನಗೊಳಿಸುವ ಸ್ಪಷ್ಟ ಪ್ರಯತ್ನದಲ್ಲಿ ಆಮದು ಮಾಡಿದ ರಸಗೊಬ್ಬರವನ್ನು ರಾತ್ರೋರಾತ್ರಿ ನಿಷೇಧಿಸಲಾಯಿತು. ರೈತರು ತಮ್ಮ ಹೊಲಗಳನ್ನು ಖಾಲಿ ಬಿಡುವ ಮೂಲಕ ಅದಕ್ಕೆ ಪ್ರತ್ಯುತ್ತರ ನೀಡಿದರು, ಇದರಿಂದಾಗಿ ಆಹಾರದ ಬೆಲೆಗಳನ್ನು ಹೆಚ್ಚಿಸಲಾಗಿದ್ದು, ಒಂದು ತಿಂಗಳ ನಂತರ ಹಠಾತ್ತನೆ ನೀತಿಯನ್ನು ಕೈಬಿಡಲಾಯಿತು.