ಶ್ರೀಲಂಕಾ ಬಿಕ್ಕಟ್ಟು: ಹಿಂಸಾಚಾರಕ್ಕೆ ಉಗ್ರಗಾಮಿಗಳ ಗುಂಪೇ ಕಾರಣ ಎಂದ ಅಧ್ಯಕ್ಷರ ಕಚೇರಿ
ಕೊಲಂಬೊ ಎಪ್ರಿಲ್ 1: ಉಗ್ರರ ಸಂಘಟಿತ ಗುಂಪೊಂದು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸದ ಹೊರಗೆ ಪ್ರತಿಭಟನೆ ಮಾಡಲು ಪ್ರಚೋದಿಸುತ್ತಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗ ಶುಕ್ರವಾರ ಆರೋಪಿಸಿದೆ. ಗುರುವಾರ ರಾಜಪಕ್ಸೆ ಅವರ ನಿವಾಸದ ಹೊರಗೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುವುದರ ಹಿಂದೆ ಉಗ್ರರ ಸಂಘಟಿತ ಗುಂಪೊಂದರ ಕೈವಾಡವಿದೆ ಎಂದು ಅದು ಹೇಳಿದೆ. ಉದ್ರಿಕ್ತರ ಗುಂಪು ಕಬ್ಬಿಣದ ದೊಣ್ಣೆಗಳು, ಮಚ್ಚುಗಳು ಮತ್ತು ದೊಣ್ಣೆಗಳಿಂದ ಶಸ್ತ್ರಸಜ್ಜಿತವಾಗಿತ್ತು. ಶಾಂತವಾಗಿದ್ದ ಪ್ರತಿಭಟನಾಕಾರರನ್ನು ಪ್ರಚೋದಿಸಿತು. ರಾಜಪಕ್ಸೆ ನಿವಾಸದ ಕಡೆಗೆ ಮೆರವಣಿಗೆ ನಡೆಸಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಅಧ್ಯಕ್ಷರ ಮಾಧ್ಯಮ ವಿಭಾಗದ ಹೇಳಿಕೆ ತಿಳಿಸಿದೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಒತ್ತಾಯಿಸಿ ಸ್ಥಳೀಯರು ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಪಕ್ಸೆ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆ ನಿನ್ನೆ ಹಿಂಸಾಚಾರಕ್ಕೆ ತಿರುಗಿದೆ. ಇದರಿಂದ ಕೊಲಂಬೊದ ಹಲವು ಭಾಗಗಳಲ್ಲಿ ವಿಧಿಸಲಾದ ರಾತ್ರಿಯ ಕರ್ಫ್ಯೂ ಅನ್ನು ಇಂದು ಬೆಳಿಗ್ಗೆ 5 ಗಂಟೆಗೆ ಹಿಂತೆಗೆದುಕೊಳ್ಳಲಾಯಿತು. ಜೊತೆಗೆ ಪೊಲೀಸರು ರಾಜಪಕ್ಸೆ ನಿವಾಸದ ಮುಂದೆ ನಿನ್ನೆ (ಮಾರ್ಚ್ 31) ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 45 ಜನರನ್ನು ಬಂಧಿಸಿದ್ದಾರೆ.
ಭೀಕರ ಆರ್ಥಿಕ ಬಿಕ್ಕಟ್ಟು: ಲಂಕಾ ಅಧ್ಯಕ್ಷರ ಮನೆ ಮುಂದೆ ಪ್ರತಿಭಟನೆ
ಅಧ್ಯಕ್ಷರ ಮನೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳು ಪುರುಷರು ಮತ್ತು ಮಹಿಳೆಯರು ಮನೆಗೆ ಮುತ್ತಿಗೆ ಹಾಕಲು ಕೂಗುತ್ತಿರುವುದನ್ನು ತೋರಿಸಿವೆ.
ಜೊತೆಗೆ ಪ್ರತಿಭಟನೆ ವೇಳೆ ಪೊಲೀಸರಿಗೂ ಹಾಗೂ ಪ್ರತಿಭಟನಾಕಾರರಿಗೂ ವಾಗ್ವಾದ ನಡೆದು ಗಲಾಟೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಉದ್ರಿಕ್ತ ಪ್ರತಿಭಟನಾಕಾರರು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಮತ್ತು ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ದ್ವೀಪ ರಾಷ್ಟ್ರದ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ವಿಫಲವಾದ ಕಾರಣಕ್ಕಾಗಿ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಹಿಂಸಾಚಾರಕ್ಕೆ ಕಾರಣವಾದವರನ್ನು ಬಂಧಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಉಗ್ರಗಾಮಿಗಳ ಸಂಘಟಿತ ಗುಂಪು ಎಂದು ಗುರುತಿಸಲಾಗಿದೆ ಎಂದು ಅದು ಹೇಳುತ್ತದೆ. ಶ್ರೀಲಂಕಾದಲ್ಲಿ ಅರಬ್ ವಸಂತಕ್ಕೆ ಕರೆ ನೀಡುವ ಅಭಿಯಾನವನ್ನು ಅವರು ಮುನ್ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ಆರೋಪಿಸಲಾಗಿದೆ. ಜನರನ್ನು ಪ್ರಚೋದಿಸಲು ಮತ್ತು ದೇಶವನ್ನು ಅಸ್ಥಿರಗೊಳಿಸಲು ಅನಾಮಧೇಯವಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಗಲಭೆ ನಡೆಸಲಾಗಿದೆ ಎನ್ನಲಾಗಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಕೊಲಂಬೊ ಜಿಲ್ಲೆಯ ಹೆಚ್ಚಿನ ಭಾಗಗಳು ಮತ್ತು ಕೆಲನಿಯಾದ ಉಪನಗರ ಪೊಲೀಸ್ ವಿಭಾಗವನ್ನು ಗುರುವಾರ ಮಧ್ಯರಾತ್ರಿಯಲ್ಲಿ ಕರ್ಫ್ಯೂ ವಿಧಿಸಲಾಯಿತು. ಆದರೆ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ತೆಗೆದುಹಾಕಲಾಯಿತು. ಕೆಲನಿಯಾ ಪ್ರದೇಶದಲ್ಲಿ ಪ್ರತಿಭಟನಾಕಾರರು ಪ್ರಮುಖ ಕೊಲಂಬೊ-ಕ್ಯಾಂಡಿ ರಸ್ತೆಯನ್ನು ತಡೆದಿದ್ದರು. ಶ್ರೀಲಂಕಾ ಪ್ರಸ್ತುತ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ಹಾಗೂ ಹಲವು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದ ಸಾರ್ವಜನಿಕರು ವಾರಗಟ್ಟಲೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ರಾಜಪಕ್ಸೆ ಅವರು ತಮ್ಮ ಸರ್ಕಾರದ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿದೇಶಿ ವಿನಿಮಯ ಬಿಕ್ಕಟ್ಟು ಅವರ ತಯಾರಿಕೆಯಲ್ಲ ಮತ್ತು ಆರ್ಥಿಕ ಕುಸಿತವು ಹೆಚ್ಚಾಗಿ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದೆ ಎನ್ನಲಾಗುತ್ತಿದೆ. ಜೊತೆಗೆ ಶ್ರೀಲಂಕಾ ದ್ವೀಪದಲ್ಲಿ ಪ್ರವಾಸೋದ್ಯಮ ಆದಾಯ ಮತ್ತು ಆಂತರಿಕ ಹಣ ರವಾನೆ ಕ್ಷೀಣಿಸುತ್ತಿದೆ.