ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಯ 484 ಫೋಟೋ, 73 ವಿಡಿಯೊ ಸಂಗ್ರಹ
ಕೊಲಂಬೊ ಮೇ 21: ಶ್ರೀಲಂಕಾ ಬಿಕ್ಕಟ್ಟಿನಿಂದಾಗಿ ನಡೆದ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ಸಾರ್ವಜನಿಕರಿಂದ 484 ಫೋಟೋಗಳು, 73 ವಿಡಿಯೊಗಳನ್ನು ಸ್ವೀಕರಿಸಿದ್ದಾರೆ. ಟೆಂಪಲ್ ಟ್ರೀಸ್ ಮತ್ತು ಗಾಲ್ ಫೇಸ್ ಸೈಟ್ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ಸಾರ್ವಜನಿಕರಿಂದ 484 ಫೋಟೋಗಳು ಮತ್ತು 73 ವಿಡಿಯೊಗಳನ್ನು ಸ್ವೀಕರಿಸಿದ್ದಾರೆ ಎಂದು ಅದರ ವಕ್ತಾರ ನಿಹಾಲ್ ತಲ್ದುವಾ ಶುಕ್ರವಾರ ತಿಳಿಸಿದ್ದಾರೆ.
ಇದುವರೆಗೆ 669 ಮಾಹಿತಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 31 ಹಾನಿಗೆ ಸಂಬಂಧಿಸಿದ ದೂರುಗಳಾಗಿವೆ ಎಂದು ಪೊಲೀಸ್ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ ಎಂದು ಕೊಲಂಬೊ ಪೇಜ್ ವರದಿ ಮಾಡಿದೆ. ಬಿಕ್ಕಟ್ಟಿನ ಪೀಡಿತ ದ್ವೀಪ ರಾಷ್ಟ್ರದಲ್ಲಿ ಭುಗಿಲೆದ್ದಿರುವ ಈ ಹಿಂಸಾಚಾರದ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯವನ್ನು ಒದಗಿಸುವುದಕ್ಕಾಗಿ ಈ ರೀತಿಯಲ್ಲಿ ಮಾಹಿತಿ ನೀಡಿದ ಸಾರ್ವಜನಿಕರಿಗೆ ತಲ್ದುವಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಶ್ರೀಲಂಕಾ ಬಿಕ್ಕಟ್ಟು; ಸರಕಾರ, ರಾಜಪಕ್ಸೆ ಹೆಸರೆತ್ತದೆಯೇ ಭಾರತದ ಪ್ರತಿಕ್ರಿಯೆ
ಶ್ರೀಲಂಕಾ 1948 ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ ಭಾರೀ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ವಿದೇಶಿ ಮೀಸಲು ಕೊರತೆಯು ಇಂಧನ, ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ದೀರ್ಘ ಕೊರತೆಗೆ ಕಾರಣವಾಗಿದೆ. ಆದರೆ ವಿದ್ಯುತ್ ಕಡಿತ ಮತ್ತು ಗಗನಕ್ಕೇರಿರುವ ಆಹಾರದ ಬೆಲೆಗಳು ನಾಗರಿಕರ ಕೋಪವನ್ನು ಹೆಚ್ಚಿಸಿವೆ. ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಇದರಿಂದ ಕಳೆದ ಗುರುವಾರ ನಿರಾಶೆಗೊಂಡ ಪ್ರತಿಭಟನಾಕಾರರು ಶ್ರೀಲಂಕಾದ ಅಧ್ಯಕ್ಷ ಕಾರ್ಯದರ್ಶಿ ಕಚೇರಿಯ ಹೊರಗೆ ಜಮಾಯಿಸಿದರು.
ಕೋಪಗೊಂಡ ಪ್ರತಿಭಟನಾಕಾರರು ದ್ವೀಪ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಪ್ರದರ್ಶನವನ್ನು ನಡೆಸುತ್ತಿರುವಾಗ ಪ್ರತಿಭಟನೆ ಏಕಾಏಕಿ ಹಿಂಚಾಸಾರಕ್ಕೆ ತಿರುಗಿದೆ. ಹೀಗಾಗಿ ಶ್ರೀಲಂಕಾ ಅಧ್ಯಕ್ಷರ ಕಚೇರಿ ಹಾಗೂ ಮನೆಯ ಬಳಿ ವ್ಯಾಪಕ ಭದ್ರತೆಯನ್ನು ಇರಿಸಲಾಯಿತು.
ಇದಕ್ಕೂ ಮೊದಲು, ಶ್ರೀಲಂಕಾ ಕೊಲಂಬೊದ 'ಗಾಲ್ ಫೇಸ್'ನಲ್ಲಿರುವ ಅಧ್ಯಕ್ಷೀಯ ಸಚಿವಾಲಯದ ಮುಂದೆ ಬೃಹತ್ ಪ್ರತಿಭಟನೆಗಳನ್ನ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಿಂಸಾತ್ಮಕ ಘರ್ಷಣೆಯಲ್ಲಿ 100ಕ್ಕೂ ಹೆಚ್ಚು ಭಿನ್ನಮತೀಯರು ಗಾಯಗೊಂಡರು. ಇದರ ಪರಿಣಾಮವಾಗಿ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಯಿತು.
ಶ್ರೀಲಂಕಾದ ಪ್ರಧಾನಿಯವರ ನಿವಾಸದ ಬಳಿ ಸರ್ಕಾರದ ಪರ ಗುಂಪು ಮತ್ತು ಸರ್ಕಾರದ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯ ನಂತರ ಹಲವಾರು ಸಂಸದರ ಮನೆಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವಾರು ಹಿಂಸಾತ್ಮಕ ಘಟನೆಗಳಿಗೆ ದೇಶವು ಸಾಕ್ಷಿಯಾಯಿತು. ಇದು ಆಗಿನ ಪ್ರಧಾನಿ ಮಹಿಂದ ರಾಜಪಕ್ಸೆ ರಾಜೀನಾಮೆಗೆ ಕಾರಣವಾಯಿತು. ಸುದ್ದಿ ಸಂಸ್ಥೆ ANI ಪ್ರಕಾರ, ಕರ್ಫ್ಯೂ ಉಲ್ಲಂಘನೆ, ಸಾರ್ವಜನಿಕರ ಮೇಲೆ ದಾಳಿ ಮತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿ ಮಾಡುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ದೇಶದಲ್ಲಿ 200 ಜನರನ್ನು ಬಂಧಿಸಲಾಗಿದೆ.
Recommended Video