ಮುಸ್ಲಿಂ ವಿರೋಧಿ ಸಂಘರ್ಷ: ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮ ಬ್ಲಾಕ್
ಕೋಲಂಬೋ, ಮೇ 13: ಈಸ್ಟರ್ ಭಾನುವಾರ ನಡೆದ ಸರಣಿ ಬಾಂಬ್ ದಾಳಿಯ ಬಳಿಕ ಶ್ರೀಲಂಕಾದಲ್ಲಿ ಮುಸ್ಲಿಂ ವಿರೋಧಿ ಅಭಿಪ್ರಾಯಗಳು ತೀವ್ರಗೊಳ್ಳುತ್ತಿವೆ. ಈ ದಾಳಿಯ ಬೆನ್ನಲ್ಲೇ ಮಸೀದಿಗಳು ಮತ್ತು ಮುಸ್ಲಿಮರ ಮಾಲೀಕತ್ವದ ಅಂಗಡಿಗಳ ಮೇಲೆ ದಾಳಿಗಳಾಗುತ್ತಿದ್ದು, ಇವುಗಳನ್ನು ಹತ್ತಿಕ್ಕಲು ಶ್ರೀಲಂಕಾ ಸರ್ಕಾರ ಕೆಲವು ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ರವಾನಿಸುವ ಆಪ್ಗಳನ್ನು ಬ್ಲಾಕ್ ಮಾಡಿದೆ.
ಫೇಸ್ಬುಕ್, ವಾಟ್ಸಾಪ್ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಹಾಗೂ ಸಂವಹನ ಆಪ್ಗಳ ಮೇಲೆ ಈ ನಿರ್ಬಂಧ ಜಾರಿಯಾಗಿದೆ.
ಶ್ರೀಲಂಕಾ ದಾಳಿ ಉಗ್ರರು ಬೆಂಗಳೂರಿಗೂ ಬಂದಿದ್ದರು: ಆಘಾತಕಾರಿ ವರದಿ
ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರ ಮೇಲೆ ಹಿಂಸಾಚಾರಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಹೀಗಾಗಿ ದ್ವೇಷಭಾವನೆಗಳನ್ನು ಸಾರುವ ಸಂಗತಿಗಳ ಹರಡುವಿಕೆಗೆ ನಿಯಂತ್ರಣ ಹಾಕಲು ಶ್ರೀಲಂಕಾ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
'ದೇಶದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಾಮಾಜಿಕ ಮಾಧ್ಯಮಗಳನ್ನು ತಾತ್ಕಾಲಿಕವಾಗಿ ಪುನಃ ಬ್ಲಾಕ್ ಮಾಡಲಾಗಿದೆ' ಎಂದು ಮಾಹಿತಿ ಇಲಾಖೆಯ ಪ್ರಧಾನ ನಿರ್ದೇಶಕ ನಲಾಕ ಕಲುವೇವಾ ತಿಳಿಸಿದ್ದಾರೆ.
ಶ್ರೀಲಂಕಾ ಸರಣಿ ಸ್ಫೋಟ; ಬಾಂಬರ್ ಗಳ ಹಣ, ಆಸ್ತಿ ವಶಕ್ಕೆ
ವೈಬರ್, ಐಎಂಓ, ಸ್ನ್ಯಾಪ್ಚಾಟ್, ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ಆಪ್ಗಳನ್ನು ಮುಂದಿನ ಸೂಚನೆವರೆಗೂ ಬ್ಲಾಕ್ ಮಾಡುವಂತೆ ನಿರ್ದೇಶನ ಬಂದಿರುವುದಾಗಿ ಶ್ರೀಲಂಕಾದ ಮುಂಚೂಣಿ ಮೊಬೈಲ್ ಫೋನ್ ಆಪರೇಟರ್ ಡೈಲಾಗ್ ಆಕ್ಸಿಯಾಟ ಪಿಎಲ್ಸಿ ತಿಳಿಸಿದೆ.
ಶ್ರೀಲಂಕಾದ ಪಶ್ಚಿಮ ಕರಾವಳಿಯ ಕ್ರೈಸ್ತರು ಬಹುಸಂಖ್ಯೆಯಲ್ಲಿರುವ ಚಿಲಾ ಪಟ್ಟಣದಲ್ಲಿ ಫೇಸ್ಬುಕ್ನಲ್ಲಿ ಆರಂಭವಾದ ಚರ್ಚೆ ತೀವ್ರಗೊಂಡು ಭಾನುವಾರ ಮುಸ್ಲಿಂ ಮಾಲೀಕತ್ವದ ಅಂಗಡಿಗಳು ಹಾಗೂ ಮಸೀದಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದವು. ಅಲ್ಲದೆ, ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆದಿತ್ತು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
'ಒಂದು ದಿನ ನೀವೆಲ್ಲ ಅಳುತ್ತೀರಿ' ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ 38 ವರ್ಷದ ಹಮೀದ್ ಮೊಹಮ್ಮದ್ ಹಸ್ಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದು ಹಿಂಸಾಚಾರದ ಬೆದರಿಕೆ ಎಂದು ಜನರು ದೂರು ಸಲ್ಲಿಸಿದ್ದರು.
ಮುಸ್ಲಿಂ ಮಾಲೀಕತ್ವದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪುರುಷರ ಗುಂಪೊಂದನ್ನು ಭಾನುವಾರ ಬಂಧಿಸಲಾಗಿದೆ. ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದರಿಂದ ಭಾನುವಾರ ರಾತ್ರಿಯಿಂದಲೇ ಕುರುನೆಗಲಾ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.