ಉಗ್ರರ ಜತೆ ನಂಟು ಆರೋಪ: ಎಲ್ಲ 9 ಮುಸ್ಲಿಂ ಸಚಿವರ ರಾಜೀನಾಮೆ
ಕೊಲಂಬೋ, ಜೂನ್ 4: ಈಸ್ಟರ್ ಹಬ್ಬದ ದಿನದಂದು ಜಗತ್ತನ್ನೇ ಬೆಚ್ಚಿಬೀಳಿಸಿದ ಶ್ರೀಲಂಕಾದ ಸರಣಿ ಬಾಂಬ್ ದಾಳಿ ಜನತೆ ಹಾಗೂ ಸರ್ಕಾರದ ಮೇಲೆ ಇಂದಿಗೂ ಪರಿಣಾಮ ಬೀರುತ್ತಿದೆ.
ದೇಶದಲ್ಲಿ ಮುಸ್ಲಿಮರ ವಿರುದ್ಧದ ಆಕ್ರೋಶ ಹೆಚ್ಚಾಗುತ್ತಿರುವಾಗ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ಎಲ್ಲ ಒಂಬತ್ತು ಸಚಿವರು ಹಾಗೂ ಇಬ್ಬರು ಗವರ್ನರ್ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶ್ರೀಲಂಕಾದಲ್ಲಿ ಭುಗಿಲೆದ್ದ ಮುಸ್ಲಿಂ ವಿರೋಧಿ ದಂಗೆ: ಓರ್ವ ಸಾವು
ಇಬ್ಬರು ಪ್ರಾಂತೀಯ ಗವರ್ನರ್ಗಳು ಮತ್ತು ಒಬ್ಬ ಸಚಿವರಿಗೆ ಈಸ್ಟರ್ ಭಾನುವಾರದಂದು ಚರ್ಚ್ ಹಾಗೂ ಹೋಟೆಲ್ಗಳಲ್ಲಿ ದಾಳಿ ನಡೆಸಿದ ಉಗ್ರರೊಂದಿಗೆ ನಂಟು ಇತ್ತು. ಹೀಗಾಗಿ ಈ ಮೂವರು ಹಿರಿಯ ಅಧಿಕಾರಿಗಳನ್ನು ರಾಷ್ಟ್ರಾಧ್ಯಕ್ಷರು ಕಿತ್ತುಹಾಕದೆ ಇದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ದೇಶದ ಪ್ರಭಾವಿ ಬೌದ್ಧ ಸನ್ಯಾಸಿ ಅಥುರಾಲಿಯೆ ರಥಾನ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಮುಸ್ಲಿಂ ಸಚಿವರೂ ಅಧಿಕಾರ ತ್ಯಜಿಸಲು ನಿರ್ಧರಿಸಿದರು ಎನ್ನಲಾಗಿದೆ.
ಸಂಸತ್ ಸದಸ್ಯರಾಗಿರುವ ರಥಾನ ಹಾಗೂ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಸಲಹೆಗಾರರೂ ಆಗಿದ್ದಾರೆ. ರಥಾನ ಅವರಿಂದ ಆರೋಪ ಒಳಗಾಗದೆ ಇದ್ದರೂ, ಉಳಿದ ಎಂಟು ಮಂದಿ ಅವರು ಆರೋಪ ಮಾಡಿರುವ ಸಚಿವರ ಜತೆಗೆ ತಾವಿದ್ದೇನೆ ಎಂದು ತೋರಿಸಲು ಅವರು ರಾಜೀನಾಮೆ ನೀಡಿದ್ದಾರೆ.
ಶ್ರೀಲಂಕಾ ಸರಣಿ ಸ್ಫೋಟ; ಬಾಂಬರ್ ಗಳ ಹಣ, ಆಸ್ತಿ ವಶಕ್ಕೆ
ನಾಲ್ಕು ದಿನಗಳಿಂದ ನಿರಶನ ನಡೆಸುತ್ತಿದ್ದ ರಥಾನ ಅವರ ಉಪವಾಸವು ಸಚಿವರ ರಾಜೀನಾಮೆ ಹಿನ್ನೆಲೆಯಲ್ಲಿ ಅಂತ್ಯಗೊಂಡಿದೆ.
#Srilanka : Two Muslim governors resign as protests erupt in different places to demand their removal; A Buddhist monk on fast unto death to demand resignation of Muslim politicians. pic.twitter.com/vkShB4c7td
— All India Radio News (@airnewsalerts) 3 June 2019
ತಮ್ಮ ವಿರುದ್ಧ ಉಂಟಾಗಿರುವ ಆಕ್ರೋಶವನ್ನು ಕಡಿಮೆ ಮಾಡುವ ಸಲುವಾಗಿ ರಾಜೀನಾಮೆ ನೀಡುತ್ತಿರುವುದಾಗಿ ಸಚಿವರು ಸೋಮವಾರ ಸಂಜೆ ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮುಸ್ಲಿಂ ಸಮುದಾಯ ಭಯಭೀತಗೊಂಡಿದೆ ಎಂದು ನಗರಾಭಿವೃದ್ಧಿ ಸಚಿವರಾಗಿದ್ದ ರೌಫ್ ಹಕೀಮ್ ತಿಳಿಸಿದ್ದಾರೆ.