ಕೌಲಾಲಂಪುರ್ ನಲ್ಲಿ ಮಾವಳ್ಳಿ ಟಿಫಿನ್ಸ್ ರೂಂ ಹೋಟೆಲ್ ಆರಂಭ !
ಕೌಲಾಲಂಪುರ, ಡಿಸೆಂಬರ್ 08 : ಬೆಂಗಳೂರಿನ ಅಚ್ಚುಮೆಚ್ಚಿನ ತಿಂಡಿಯಾದ ಇಡ್ಲಿ-ದೋಸೆ ಹಾಗೂ ಸಿಹಿ ತಿಂಡಿಗಳು ಇನ್ನುಮುಂದೆ ದೂರದ ಮಲೇಷ್ಯಾದ ಕೌಲಾಲಂಪುರ್ ನಲ್ಲೂ ಸಿಗಲಿದೆ.
ದಕ್ಷಿಣ ಭಾರತದ ತಿಂಡಿ-ತಿನಿಸುಗಳು, ಊಟಕ್ಕೆ ಹೆಸರಾದ ಎಂಟಿಆರ್ ತನ್ನ ಶಾಖೆಯನ್ನು ಕೌಲಾಲಂಪುರದಲ್ಲಿ ಡಿಸೆಂಬರ್ 10 ರಂದು ಆರಂಭಿಸಲಿದೆ.
ಎಂಟಿಆರ್ ಅಂದರೆ ಯಾರಿಗೆ ಗೊತ್ತಿಲ್ಲ? ಅದು ಬೆಂಗಳೂರಿನ ಒಂದು ಪ್ರಸಿದ್ಧ ಹೋಟೆಲ್. ಬೆಂಗಳೂರಿನ ಪ್ರತಿ ಪ್ರದೇಶದಲ್ಲೂ ಒಂದಲ್ಲ ಒಂದು ಪ್ರಸಿದ್ಧ ಹೋಟೆಲ್ ಇದೆ. ಅವೆಲ್ಲ ಎಂಟಿಆರ್ ಆಗಿಲ್ಲ. ಹಾಗೆ ನೋಡಿದರೆ ಎಂಟಿಆರ್ ಕೇವಲ ಒಂದು ಹೋಟೆಲ್ ಎನ್ನುವ ಕಾರಣಕ್ಕೆ ಪ್ರಸಿದ್ಧವೂ ಆಗಿಲ್ಲ. ಅದೊಂದು ಅನ್ನಸಂಸ್ಕೃತಿಯ ಕೇಂದ್ರ .
ಸಿಂಗಪುರದಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್
ಹೌದು ದಕ್ಷಿಣ ಭಾರತದ ತಿಂಡಿ-ತಿನಿಸುಗಳು, ಊಟಕ್ಕೆ ಹೆಸರಾದ ಎಂಟಿಆರ್ ತನ್ನ ಶಾಖೆಯನ್ನು ಕೌಲಾಲಂಪುರದಲ್ಲಿ ಡಿಸೆಂಬರ್ 10 ರಂದು ಆರಂಭಿಸಲಿದೆ. ಇದೇ ಭಾನುವಾರ ಕೌಲಾಲಂಪುರದ ಜಲಾನ್ ತಂಬಿಪಿಳ್ಳೆ ಬ್ರಿಕ್ ಫೀಲ್ಡ್ ನಲ್ಲಿ ಎಂಟಿಆರ್ ತನ್ನ ಸೇವೆ ಆರಂಭಿಸಲಿದೆ. ಕನ್ನಡಿಗರು ಎಲ್ಲಾ ಭಾರತೀಯರು ದಕ್ಷಿಣ ಭಾರತದ ತಿನಿಸುಗಳನ್ನು ಸವಿಯಬಹುದು.
ಸ್ವತಂತ್ರ ಭಾರತಕ್ಕೂ ಮುನ್ನ ಬ್ರಿಟಿಷರ ಆಡಳಿತ ಅವಧಿಯಲ್ಲೇ 1924 ರಲ್ಲಿ ಇಬ್ಬರು ಸಹೋದರರು ಸೇರಿಕೊಂಡು ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿ ಬ್ರಾಹ್ಮಣರ ಕಾಫಿ ಕ್ಲಬ್ ಆರಂಭಿಸಿ, ಇಡ್ಲಿ ಹಾಗೂ ಕಾಫಿ ಮಾರಾಟ ಮಾಡುತ್ತಿದ್ದರು.
ಸ್ವಚ್ಛ, ಶುಭ್ರ ಹಾಗೂ ರುಚಿಯಾದ ತಿಂಡಿ ತಿನಿಸುಗಳಿಗೆ ಹೆಸರಾದ ಇಬ್ಬರು ಸಹೋದರರು ಆರಂಭಿಸಿದ ಹೋಟೆಲ್ ಭಾರಿ ಪ್ರಸಿದ್ಧಿ ಹೊಂದಲಾರಂಭಿಸಿತು. ನಂತರ ರೆಸ್ಟೋರೆಂಟ್ ಸ್ವರೂಪ ಪಡೆದುಕೊಂಡು ಮಾವಳ್ಳಿ ಟಿಫನ್ ರೂಮ್ ಎಂದು ಪುನರ್ ನಾಮಕರಣಗೊಂಡಿತು.
ಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನ
1960 ರ ಹೊತ್ತಿಗೆ ಎಂಟಿಆರ್ ಎಂದೇ ಫೇಮಸ್ ಆದ ಹೋಟೆಲ್, ಈಗಿರುವ ಲಾಲ್ ಬಾಗ್ ರಸ್ತೆಗೆ ಸ್ಥಳಾಂತರಗೊಂಡಿತು. ಇಂದು ಹರಿಶ್ಚಂದ್ರ ಮಯ್ಯ ಅವರ ಮಕ್ಕಳಾದ ಹೇಮಾ ಮಾಲಿನಿ, ವಿಕ್ರಂ ಹಾಗೂ ಅರವಿಂದ ಮಲ್ಯ ಮುಂದಾಳತ್ವದಲ್ಲಿ ಸೇವೆ ಮುಂದುವರೆಸಿದೆ.