ಮನಮೋಹನ್ ಸಿಂಗ್ ಬಗ್ಗೆ ಒಬಾಮಾ ಆತ್ಮಚರಿತ್ರೆಯಲ್ಲಿ ಉಲ್ಲೇಖ
ವಾಶಿಂಗ್ಟನ್, ನವೆಂಬರ್.18: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ "ಪ್ರಾಮಿಸ್ ಲ್ಯಾಂಡ್" ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಅಂಶಗಳು ಅನೇಕ ರಾಷ್ಟ್ರಗಳಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡುತ್ತಿದೆ.
ನವೆಂಬರ್.17ರ ಮಂಗಳವಾರ "ಪ್ರಾಮಿಸ್ ಲ್ಯಾಂಡ್" ಆತ್ಮಚರಿತ್ರೆಯನ್ನು ಬಿಡುಗಡೆಗೊಳಿಸಲಾಯಿತು. ಯುಎಸ್ಎ ಅಧ್ಯಕ್ಷರಾಗಿ ಆಡಳಿತ ನಡೆಸಿದ 2008-12ನೇ ಅವಧಿಯಲ್ಲಿ ತಮ್ಮ ರಾಜಕೀಯ ಅನುಭವ ಮತ್ತು ವಿದೇಶಿ ನಾಯಕರೊಂದಿಗೆ ನಡೆಸಿದ ಸಂವಹನದ ಬಗ್ಗೆ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.
ನಾನು ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕಥೆ ಕೇಳುತ್ತಿದ್ದೆ: ಒಬಾಮ
ಭಾರತದ ಪ್ರಧಾನಮಂತ್ರಿ ಆಗಿ ಕಾರ್ಯ ನಿರ್ವಹಿಸಿದ ಮನಮೋಹನ್ ಸಿಂಗ್ ರನ್ನು "ಅಸಾಮಾನ್ಯ ಬುದ್ಧಿವಂತ ವ್ಯಕ್ತಿ" ಎಂದು ಜ್ಞಾಪಿಸಿಕೊಂಡಿದ್ದಾರೆ. ಇದರ ಜೊತೆ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ಪ್ರಧಾನಿ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ.
"ಸೋನಿಯಾ ಗಾಂಧಿಗೆ ಪ್ರಧಾನಿ ಸ್ಥಾನ ನೀಡಬೇಕಿತ್ತು"
ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಯವರಿಗೆ ಬಿಟ್ಟಕೊಡಬೇಕಿತ್ತು. ಯಾವುದೇ ರಾಷ್ಟ್ರೀಯ ರಾಜಕಾರಣದ ಆಧಾರವಿಲ್ಲದ ಹಿರಿಯ ಸಿಖ್ ಮುಖಂಡರನ್ನು ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಅಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಯಾವುದೇ ಬೆದರಿಕೆಗಳು ಕೂಡಾ ಇರಲಿಲ್ಲ ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ವೈಫಲ್ಯಕ್ಕೆ ಅವರೇ ಕಾರಣ:
ಬರಾಕ್ ಒಬಾಮಾ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಅಂಶಕ್ಕೆ ಬಿಜೆಪಿ ವಕ್ತಾರ ಸಂದೀಪ್ ಪಾತ್ರಾ ವಿರೋಧ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ವೈಫಲ್ಯಕ್ಕೆ ಸ್ವತಃ ರಾಹುಲ್ ಗಾಂಧಿಯವರೇ ಮುಖ್ಯ ಕಾರಣ ಎಂದಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಬೆದರಿಕೆಯೊಡ್ಡುವ ಆಪಾಯವಿದ್ದ ಭೀತಿಯಿಂದ ಮನಮೋಹನ್ ಸಿಂಗ್ ರಿಗೆ ಪ್ರಧಾನಮಂತ್ರಿ ಸ್ಥಾನವನ್ನು ಬಿಟ್ಟುಕೊಡಲಾಗಿತ್ತು ಎಂದು ಬರಾಕ್ ಒಬಾಮಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿಯವರಿಗೆ ಬೇರೆ ಯಾರಿಂದಲೋ ಬೆದರಿಕೆಗಳಿಲ್ಲ. ಬದಲಿಗೆ ರಾಹುಲ್ ಗಾಂಧಿಯವರಿಗೆ ರಾಹುಲ್ ಗಾಂಧಿಯವರಿಂದಲೇ ಬೆದರಿಕೆ ಹೆಚ್ಚಾಗಿದೆ ಎಂದು ಸಂದೀಪ್ ಪಾತ್ರಾ ಟ್ವೀಟ್ ಮಾಡಿದ್ದಾರೆ.