ಎಲ್ಲೆಲ್ಲೂ ಮುಖಭಂಗ, ICJ ಯಲ್ಲಿ ಯುದ್ಧಸಾರಲು ಹೊರಟ ಪಾಕಿಸ್ತಾನ!
ಇಸ್ಲಾಮಾಬಾದ್, ಆಗಸ್ಟ್ 20: ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ)ದ ಮೊರೆ ಹೋಗಲಿದೆ ಎಂದು ಮೂಲಗಳು ತಿಳಿಸಿವೆ.
"ನಾವು ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ಯುತ್ತೇವೆ" ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮ್ಮೂದ್ ಖುರೇಶಿ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಉದ್ವಿಗ್ನತೆ ಶಮನಗೊಳಿಸಿ: ಮೋದಿ, ಇಮ್ರಾನ್ಗೆ ಟ್ರಂಪ್ ಕರೆ
ಎಲ್ಲಾ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿಯೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅದು ಹೇಳಿದೆ.
ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಉಭಯ ದೇಶಗಳೂ ನೆದರ್ಲೆಂಡ್ ನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಯದಲ್ಲಿ ಮುಖಾಮುಖಿಯಾದ ಒಂದು ತಿಂಗಳೊಳಗೇ ಈ ಬೆಳವಣಿಗೆ ಸಂಭವಿಸಿದೆ.
ಈ ಕುರಿತು ಭಾರತದ ಪ್ರತಿಕ್ರಿಯೆ ಏನು ಎಂಬ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಪಾಕ್ ನಿರ್ಧಾರಕ್ಕೆ ಕಾರಣವೇನು?
ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತದ ನಡೆಯನ್ನು ಯಾವ ದೇಶಗಳೂ ವಿರೋಧಿಸಿಲ್ಲ. ರಷ್ಯಾ ನೇರವಾಗಿಯೇ ಭಾರತಕ್ಕೆ ಬೆಂಬಲ ಘೋಷಿಸಿದೆ. ಚೀನಾ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದನ್ನು ಬಿಟ್ಟರೆ ಮತ್ಯಾರೂ ಪಾಕಿಸ್ತಾನದ ಅಹವಾಲನ್ನು ಕೇಳಿಸಿಕೊಳ್ಳುವ ಗೋಜಿಗೂ ಹೋಗಿಲ್ಲ! ಇನ್ನು ಅಮೆರಿಕವೂ ತಟಸ್ಥವಾಗಿಯೇ ಉಳಿದಿವೆ. ವಿಶ್ವದ ನಾನಾ ದೇಶಗಳ ಮುಂದೆ ತನ್ನ ಅಳಲನ್ನು ತೋಡಿಕೊಂಡರೂ ಯಾವ ಪ್ರಯೋಜನವೂ ಆಗದ್ದನ್ನು ಮನಗಂಡ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗುವ ಪ್ರಯತ್ನದಲ್ಲಿದೆ.
ವಿಶ್ವಸಂಸ್ಥೆಯಲ್ಲೂ ಮುಖಭಂಗ
ಮುಚ್ಚಿದ ಬಾಗಿಲಿನ ಸಭೆ ನಡೆಸಬೇಕು ಎಂಬ ಪಾಕಿಸ್ತಾನದ ಮನವಿಗೆ ಸ್ಪಂದಿಸಿದ ವಿಶ್ವಸಂಸ್ಥೆ ಸಭೆ ನಡೆಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ಆಗಸ್ಟ್ 17 ರಂದು ನಡೆದಿತ್ತು. ಚೀನಾವನ್ನು ಹೊರತುಪಡಿಸಿ ಬೇರೆ ಯಾವ ದೇಶಗಳೂ ಪಾಕಿಸ್ತಾನದ ಬೆಂಬಲಕ್ಕೆ ನಿಲ್ಲಲಿಲ್ಲ. ಇದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿತ್ತು.
ಪಾಕ್ ಆಕ್ರೋಶಕ್ಕೆ ಕಾರಣವೇನು?
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು. ಆದರೆ ಕಾಶ್ಮೀರದ ವಿಷಯದಲ್ಲಿ ಭಾರತ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಭಾರತದ ನಡೆಯಿಂದ ಕಾಶ್ಮೀರಿಗಳ ಸ್ವತಂತ್ರ ಕಸಿದಂತಾಗಿದೆ. ಕಣಿವೆಯಲ್ಲಿ ಇದರಿಂದ ಹಿಂಸಾಚಾರ ಮತ್ತಷ್ಟು ಹೆಚ್ಚುತ್ತದೆ ಎಂಬುದು ಪಾಕಿಸ್ತಾನದ ಆರೋಪ. ಆದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದ್ದು, ಅದರ ವಿಷಯದಲ್ಲಿ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಹಕ್ಕು ತನಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯ, ಅದರಲ್ಲಿ ಪಾಕಿಸ್ತಾನ ಮೂಗುತೂರಿಸುವ ಅಗತ್ಯವಿಲ್ಲ ಎಂದು ಭಾರತ ಖಡಕ್ ಆಗಿ ವಾರ್ನಿಂಗ್ ನೀಡಿತ್ತು.
ಮೋದಿ-ಖಾನ್ ಗೆ ಟ್ರಂಪ್ ಮನವಿ
ಎರಡು ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ದೂರು ನೀಡಿದ್ದರು. ಆದರೆ ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲವನ್ನೇನೂ ನೀಡದೆ, ನಂತರ ಉಭಯ ರಾಷ್ಟ್ರಗಳೂ ಉದ್ವಿಗ್ನತೆಯನ್ನು ಶನಗೊಳಿಸಿಕೊಳ್ಳಬೇಕು ಎಂದಷ್ಟೇ ಬಹಿರಂಗವಾಗಿ ಹೇಳಿಕೆ ನೀಡಿದರು. ಈ ಎಲ್ಲಾ ಬೆಳವಣಿಗೆಯಿಂದ ತನ್ನ ಬೆಂಬಲಕ್ಕೆ ಯಾರೊಬ್ಬರೂ ಇಲ್ಲ ಎಂಬುದನ್ನು ಅರಿತ ಪಾಕಿಸ್ತಾನ ಇದೀಗ ಕೊನೆಯ ಪ್ರಯತ್ನ ಎಂಬಂತೆ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದೆ.