ಗಲ್ಲಿಗಳಲ್ಲಿ ಮಷಿನ್ ಗನ್, ಟ್ಯಾಂಕರ್: ಮ್ಯಾನ್ಮಾರ್ ಪರಿಸ್ಥಿತಿ ಭಯಾನಕ..!
ಅಲ್ಲಿನ ಜನ ರಾತ್ರಿ ನೆಮ್ಮದಿಯಾಗಿ ಮಲಗಿದ್ರು. ಆದ್ರೆ ಬೆಳಗ್ಗೆ ಎದ್ದು ನೋಡಿದ್ರೆ ಮನೆ ಸಮೀಪವೇ ಯುದ್ಧ ಟ್ಯಾಂಕರ್, ಮಷಿನ್ ಗನ್ಗಳು ಕಾಣಿಸೋದೆ. ಇದನ್ನ ಕಂಡು ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಅಂದಹಾಗೆ ನಾವು ಹೇಳುತ್ತಾ ಇರೋದು ಸೇನಾ ಕ್ಷಿಪ್ರ ಕ್ರಾಂತಿಯಿಂದ ಕಂಗಾಲಾಗಿರುವ ಮ್ಯಾನ್ಮಾರ್ ದೇಶದ ಕುರಿತು.
ಮ್ಯಾನ್ಮಾರ್ ಮಿಲಿಟರಿ ಬಲದೆದುರು ಮಂಡಿಯೂರಿದ ಆಂಗ್ ಸಾನ್ ಸೂಕಿ ಸರ್ಕಾರ ಛಿದ್ರ ಛಿದ್ರವಾಗಿದೆ. ಆಂಗ್ ಸಾನ್ ಸೂಕಿ ಮನೆಯಲ್ಲೇ ಜೈಲು ಕಾಣುತ್ತಿದ್ದಾರೆ. ಈ ನಡುವೆ ಸೇನಾ ಕ್ರಾಂತಿ ಪರ ಹಾಗೂ ವಿರುದ್ಧ ಹೋರಾಟಗಳು ಭುಗಿಲೆದ್ದಿರುವುದು ಮ್ಯಾನ್ಮಾರ್ನ ತತ್ತರಿಸುವಂತೆ ಮಾಡಿವೆ.
ಮ್ಯಾನ್ಮಾರ್ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ, ಯಾಕೆ?
ಆದರೆ ಇದನ್ನು ನೋಡಿ ತಣ್ಣಗೆ ಕೂರೋದಕ್ಕೆ ಮ್ಯಾನ್ಮಾರ್ ಈಗ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. ಮೇಲಾಗಿ ಅಲ್ಲೊಂದು ಸರ್ಕಾರವೇ ಇಲ್ಲ. ಎಲ್ಲವನ್ನೂ ಮಿಲಿಟರಿ ಅಧಿಕಾರಿಗಳು ತಮ್ಮ ಬಿಗಿ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ಮತ್ತು ಹೋರಾಟಗಳನ್ನ ಹತ್ತಿಕ್ಕಲು ಮ್ಯಾನ್ಮಾರ್ ಸೇನೆ ಗಲ್ಲಿ ಗಲ್ಲಿಗಳಿಗೂ ಎಂಟ್ರಿ ಕೊಟ್ಟಿದೆ. ಭಾರಿ ಪ್ರಮಾಣದ ಯುದ್ಧ ಪರಿಕರಗಳನ್ನು ತೋರಿಸಿ ಜನರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದೆ.
ಪ್ರಧಾನಿ, ಸಂಸದರಿಗೆ ಮನೆಯಲ್ಲೇ ಜೈಲು..!
ಈಗಾಗಲೇ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳನ್ನ ಮನೆ ಒಳಗೆ ಲಾಕ್ ಮಾಡಿದೆ ಮ್ಯಾನ್ಮಾರ್ ಸೇನೆ. ಯಾರೂ ಕೂಡ ಹೊರಗೆ ಬಾರದಂತೆ ಜನಪ್ರತಿನಿಧಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ಅವರ ಮನೆಗಳ ಬಳಿ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿರುವುದು ಸೊಲ್ಲೆತ್ತದಂತೆ ಮಾಡಿದೆ. ಇದನ್ನೆಲ್ಲಾ ಕಂಡು ಎಷ್ಟೋ ಜನ ಮನೆಯಿಂದ ಹೊರ ಬರೋದಕ್ಕೂ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಸ್ವತಃ ಮ್ಯಾನ್ಮಾರ್ ಪ್ರಧಾನಿ ಆಂಗ್ ಸಾನ್ ಸೂಕಿಗೆ ಏನಾಗಿದೆ ಅನ್ನೋದನ್ನೂ ಹೊರ ಜಗತ್ತು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಂಟರ್ನೆಟ್ ಇಲ್ಲದೆ ಪರದಾಟ..!
ಸೇನಾ ಕ್ರಾಂತಿಯ ವಿರುದ್ಧ ಮ್ಯಾನ್ಮಾರ್ನಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದು, ದೇಶದ ಇತರ ಭಾಗಗಳಿಗೆ ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಆದರೆ ಇದನ್ನು ತಡೆಯಲು ಮ್ಯಾನ್ಮಾರ್ ಮಿಲಿಟರಿ ತನ್ನ ಬಲವನ್ನು ಬಳಸುತ್ತಿದೆ. ಈಗಾಗಲೇ ಮ್ಯಾನ್ಮಾರ್ನಲ್ಲಿ ಇಂಟರ್ನೆಟ್ ಕಡಿತವಾಗಿದ್ದು, ಜನರನ್ನು ಅತ್ತಿಂದ ಇತ್ತ ಕದಡಲು ಬಿಡುತ್ತಿಲ್ಲ. ಈ ನಡುವೆ ಜನ ಬೀದಿಗಿಳಿದು ಮಿಲಿಟರಿ ಆಡಳಿತದ ವಿರುದ್ಧ ಹೋರಾಟ ತೀವ್ರಗೊಳಸಿದ್ದಾರೆ. ಹೀಗೆ ಮ್ಯಾನ್ಮಾರ್ ಬೂದಿ ಮುಚ್ಚಿದ ಕೆಂಡವಾಗಿದ್ದು, ಹಿಂಸಾಚಾರ ಸ್ಫೋಟಗೊಳ್ಳುವ ಆತಂಕವೂ ಎದುರಾಗಿದೆ. ಆದರೆ ಹೊರ ಜಗತ್ತಿಗೆ ಮ್ಯಾನ್ಮಾರ್ನಲ್ಲಿ ಏನಾಗುತ್ತಿದೆ ಎಂಬ ಸತ್ಯ ಸರಿಯಾಗಿ ತಿಳಿಯದಂತೆ ಮಾಡಿದೆ ಅಲ್ಲಿನ ಮಿಲಿಟರಿ.
ರಕ್ತದ ಕೋಡಿ ಹರಿಸಿದ್ದರು..!
ಅದು 2016ರ ಅಂತ್ಯಕಾಲ. ಜಗತ್ತು ಮ್ಯಾನ್ಮಾರ್ ಕಡೆಗೆ ದಿಟ್ಟಿಸಿ ನೋಡಿತ್ತು. ರೊಹಿಂಗ್ಯಾ ಮುಸ್ಲೀಮರ ಮೇಲೆ ದಿಢೀರ್ ದಾಳಿ ನಡೆದು ನೋಡ ನೋಡುತ್ತಿದ್ದಂತೆ ಸಾವಿರಾರು ರೊಹಿಂಗ್ಯಾಗಳು ಜೀವ ಕಳೆದುಕೊಂಡರು. ಈ ಹೊತ್ತಲ್ಲೇ ಅಮಾನುಷ ಘಟನೆಗಳು ನಡೆದವು. ರೊಹಿಂಗ್ಯಾ ಮುಸ್ಲೀಮರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿತ್ತು. ಹಲವು ಮಹಿಳೆಯರನ್ನ ರೇಪ್ & ಮರ್ಡರ್ ಮಾಡಿದ್ದರು ಎಂಬ ಆಘಾತಕಾರಿ ವಿಚಾರ ಜಗತ್ತನ್ನು ತಲ್ಲಣಗೊಳಿಸಿತ್ತು. 24 ಸಾವಿರ ರೊಹಿಂಗ್ಯಾಗಳು ಗಲಭೆಯಲ್ಲಿ ಹತ್ಯೆಯಾದರೆ, 1 ಮಿಲಿಯನ್ ರೊಹಿಂಗ್ಯಾಗಳು ಮ್ಯಾನ್ಮಾರ್ ಬಿಟ್ಟು ಓಡಿ ಹೋದರು. ಇನ್ನು ನಾಪತ್ತೆಯಾದವರ ಬಗ್ಗೆ ಈಗಲೂ ಸರಿಯಾದ ಲೆಕ್ಕ ಸಿಗುತ್ತಿಲ್ಲ. ಇದನ್ನೆಲ್ಲಾ ಖದ್ದು ಮ್ಯಾನ್ಮಾರ್ ಸೇನೆ ನಡೆಸಿತ್ತು, ಆದರೆ ಆಗ ಅಧಿಕಾರದಲ್ಲಿದ್ದ ಆಂಗ್ ಸಾನ್ ಸೂಕಿ ಸರ್ಕಾರ ಕೈಕಟ್ಟಿ ಕುಳಿತಿತ್ತು ಎಂಬ ಆರೋಪ ಇದೆ.
ಮಿಲಿಟರಿ ಆಡಳಿತ ಶುರು..!
ಮ್ಯಾನ್ಮಾರ್ನಲ್ಲಿ 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದ್ದರೂ ಅದನ್ನ ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಲಾಗಿತ್ತು. ಈ ಕಾರಣಕ್ಕಾಗಿ ಮ್ಯಾನ್ಮಾರ್ ಮಿಲಿಟರಿ ತುರ್ತು ಪರಿಸ್ಥಿತಿ ಹೇರಿದೆ. ದೇಶದಲ್ಲಿ ಮಿಲಿಟರಿ 1 ವರ್ಷದವರೆಗೂ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರನ್ನೂ ನೇಮಿಸಿದೆ. ಮತ್ತೊಂದ್ಕಡೆ ದೇಶದ ಸಂವಹನ ಸಾಧನಗಳನ್ನೂ ಕಂಟ್ರೋಲ್ಗೆ ತೆಗೆದುಕೊಂಡಿದೆ ಸೇನೆ. ಫೋನ್ ಕಾಲ್ ಹೋಗುತ್ತಿಲ್ಲ, ಇಂಟರ್ನೆಟ್ ಸಂಪರ್ಕ ಕೂಡ ಬಂದ್ ಆಗಿದೆ. ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ಅತಿಸೂಕ್ಷ್ಮವಾಗಿದೆ.
‘ಡ್ರ್ಯಾಗನ್ ಚೀನಿ’ ಗ್ಯಾಂಗ್ ಕೈವಾಡ..?`
ಇಂತಹದ್ದೊಂದು ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಚೀನಾ ಜೊತೆಗೆ ಮ್ಯಾನ್ಮಾರ್ ಸುಮಾರು 2 ಸಾವಿರ ಕಿಲೋ ಮೀಟರ್ಗೂ ಹೆಚ್ಚು ವಿಸ್ತಿರ್ಣದ ಗಡಿ ಹಂಚಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಕುತಂತ್ರ ಬುದ್ಧಿ ಬಳಸುತ್ತಿದೆ. ನೇಪಾಳದಲ್ಲೂ ಹೀಗೆ ಮಾಡಿದೆ ಚೀನಾ. ಇದೀಗ ಮ್ಯಾನ್ಮಾರ್ ಸೇನಾ ಕ್ರಾಂತಿಗೂ ಚೀನಾ ಬೆಂಬಲ ಇರಬಹುದು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಮ್ಯಾನ್ಮಾರ್ ಪ್ರಜಾಪ್ರಭುತ್ವ ತತ್ವ ಅಳವಡಿಸಿಕೊಂಡಿರುವ ದೇಶ. ಆದರೆ ಮಾವೋವಾದಿ ಕಮ್ಯೂನಿಸ್ಟ್ ಸಿದ್ಧಾಂತದ ಚೀನಾಗೆ ಇದು ಬಿಲ್ಕುಲ್ ಇಷ್ಟವಿಲ್ಲ.
ಚುನಾವಣೆಯಲ್ಲಿ ಅಕ್ರಮ ನಡೆದಿತ್ತಾ..?
ಮ್ಯಾನ್ಮಾರ್ನಲ್ಲಿ 2020ರ ನವೆಂಬರ್ನಲ್ಲಿ ಚುನಾವಣೆ ನಡೆದಿತ್ತು. 75 ವರ್ಷದ ಸೂಕಿ ನೇತೃತ್ವದಲ್ಲಿ ಅವರ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್ಎಲ್ಡಿ ಪಕ್ಷ 396 ಸ್ಥಾನ ಪಡೆದಿತ್ತು. ಅಂದಹಾಗೆ ಪ್ರಜಾಪ್ರಭುತ್ವದ ಪರ ಗಟ್ಟಿಯಾಗಿ ನಿಂತು ಹೋರಾಟ ನಡೆಸಿದ್ದವರು ಆಂಗ್ ಸಾನ್ ಸೂಕಿ. ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿದ್ದ ಸೂಕಿಗೆ ಇದೀಗ ಹಿನ್ನಡೆಯಾಗಿದೆ. ಸೂಕಿ ಬಂಧನ ಹಲವು ಅನುಮಾನಗಳಿಗೂ ಕಾರಣವಾಗಿದೆ.