"ಚೀನಾದ ಗಡಿ ಅತಿಕ್ರಮಣದ ಹಿಂದೆ 40 ವರ್ಷದ ಇತಿಹಾಸ"
ನವದೆಹಲಿ, ಜನವರಿ.19: ಭಾರತದ ಗಡಿಯಲ್ಲಿ ಚೀನಾ ಆತಿಕ್ರಮಣಶಾಲಿ ನೀತಿ ಅನುಸರಿಸುತ್ತಿರುವುದು ಇತ್ತೀಚಿನ ಘಟನೆಯಲ್ಲ. ಕಳೆದ 1980ರಿಂದಲೇ ನಡೆಯುತ್ತಿರುವ ಬೆಳವಣಿಗೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಪಿರ್ ಗಾವೋ ದೂಷಿಸಿದ್ದಾರೆ.
ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಚಿತ್ರಗಳಲ್ಲಿ ಸೆರೆಯಾಗಿದೆ. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ಭಾರತದ 4.5 ಕಿಲೋ ಮೀಟರ್ ವ್ಯಾಪ್ತಿಯ ಗಡಿಯನ್ನು ಚೀನಾ ಸೇನೆ ಅತಿಕ್ರಮಿಸಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಪಿರ್ ಗಾವೋ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಾಕಾಶದ ಚಿತ್ರ ತೆರೆದಿಟ್ಟ ಸತ್ಯ!
1980ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿ ಆಗಿದ್ದ ಸಂದರ್ಭದಲ್ಲಿ ಚೀನಾದ ಸೇನೆಯು ದೇಶದ ಗಡಿಯನ್ನು ಅತಿಕ್ರಮಿಸಿಕೊಳ್ಳುವುದಕ್ಕೆ ಮುಂದಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರವು ತೋರಿದ ಅಸಡ್ಡೆ ಪರಿಣಾಮದಿಂದಾಗಿ ಇಂದು ಗಡಿಯಲ್ಲಿನ ಚಿತ್ರಣವು ಬದಲಾಗುವಂತಾಗಿದೆ ಎಂದು ತಪಿರ್ ಗಾವೋ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಆರೋಪ
"1980ರಿಂದಲೂ ಚೀನಾದವರು ಗಡಿಯಲ್ಲಿ ರಸ್ತೆ ಕಾಮಗಾರಿಯನ್ನು ನಡೆಸುತ್ತಲೇ ಬಂದಿದ್ದಾರೆ. ಅವರು ಲೊಂಗ್ಜುದಿಂದ ಮಾಜಾವರೆಗೂ ರಸ್ತೆ ಕಾಮಗಾರಿ ನಡೆಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಅವಧಿಯಲ್ಲಿ ತವಾಂಗ್ ನಲ್ಲಿರುವ ಸಮ್ದೊರೊಂಗ್ ಚು ಕಣಿವೆಯನ್ನು ಅತಿಕ್ರಮಿಸಿಕೊಂಡಿತು. ಚೀನಾ ಲಿಬರೇಷನ್ ಆರ್ಮಿಯನ್ನು ಹಿಮ್ಮೆಟ್ಟಿರುವ ಕಾರ್ಯಾಚರಣೆ ಆರಂಭಿಸುವುದಕ್ಕೆ ಅಂದಿನ ಭಾರತೀಯ ಸೇನಾ ಮುಖ್ಯಸ್ಥರು ಅನುಮತಿ ಕೋರಿದರು. ಆದರೆ, ರಾಜೀವ್ ಗಾಂಧಿಯವರು ಅಂದು ಭಾರತೀಯ ಸೇನೆಗೆ ಅನುಮತಿ ನೀಡಿರಲಿಲ್ಲ" ಎಂದು ಬಿಜೆಪಿ ಸಂಸದ ತಪಿರ್ ಗಾವೋ ದೂಷಿಸಿದ್ದಾರೆ.
"ಚೀನಾವು ಹೊಸ ಗ್ರಾಮ ರಚಿಸಿಕೊಂಡಿದ್ದು ಹೊಸ ವಿಚಾರವಲ್ಲ"
ಭಾರತದ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮವನ್ನು ನಿರ್ಮಿಸಿಕೊಂಡಿರುವುದು ಹೊಸ ವಿಚಾರವೇನಲ್ಲ ಎಂದು ಬಿಜೆಪಿ ಸಂಸದ ತಪಿರ್ ಗಾವೋ ತಿಳಿಸಿದ್ದಾರೆ. ಗ್ರಾಮ, ಮನೆ ಮತ್ತು ರಸ್ತಗಳಷ್ಟೇ ಅಲ್ಲ. ಭಾರತದ ಮ್ಯಾಕ್ ಮೆಹಾನ್ ಗಡಿಗೆ ಹೊಂದಿಕೊಂಡಿರುವ ಬಿಸಾ ಮತ್ತು ಮಾಜಾ ನಡುವೆ ಚೀನಾ ತನ್ನ ಸೇನೆ ಶಿಬಿರಗಳನ್ನು ಕೂಡಾ ಸ್ಥಾಪಿಸಿಕೊಂಡಿದೆ ಎಂದು ತಪಿರ್ ಗಾವೋ ಹೇಳಿದ್ದಾರೆ.
"ಗಡಿಯಲ್ಲಿನ ಸ್ಥಿತಿಗೆ ಅಂದಿನ ಕಾಂಗ್ರೆಸ್ ಸರ್ಕಾರ ಕಾರಣ"
"ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ನೀತಿಯಲ್ಲಿನ ದೋಷಗಳಿಂದ ಪರಿಸ್ಥಿತಿ ಹದಗೆಟ್ಟಿದೆ. ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಗಡಿಯಲ್ಲಿನ ಹಳೆ ಮಾರ್ಗಗಳನ್ನು ಪುನಶ್ಚೇತನಗೊಳಿಸಲಿಲ್ಲ. ಈ ಹಿನ್ನೆಲೆ ಭಾರತದ ಗಡಿಯಲ್ಲಿದ್ದ 3-4 ಕಿಲೋ ಮೀಟರ್ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿತು. ಇಂದು ಗಡಿ ಪ್ರದೇಶದಲ್ಲಿ ಚೀನಾದ ಹೊಸ ಗ್ರಾಮ ತಲೆ ಎತ್ತಿರುವುದು ಹೊಸ ವಿಷಯವೇನಲ್ಲ ಎಂದು ತಪಿರ್ ಗಾವೋ ತಿಳಿಸಿದ್ದಾರೆ.
ಭಾರತೀಯ ಗಡಿಯಲ್ಲಿ ಗ್ರಾಮ ನಿರ್ಮಿಸಿದ ಚೀನಾ
ಹಿಮಾಲಯದ ಪರ್ವತಗಳ ಪೂರ್ವ ಭಾಗದಲ್ಲಿ ಗಡಿ ವಿಚಾರಕ್ಕೆ ದಶಕಗಳ ಕಾಲದಿಂದಲೂ ಸಂಘರ್ಷ ಮತ್ತು ಹೋರಾಟಗಳು ನಡೆಯುತ್ತಿವೆ. ಅರುಣಾಚಲ ಪ್ರದೇಶ ಸುಬನ್ಸಿರಿ ಜಿಲ್ಲೆ ಮೇಲ್ಭಾಗದಲ್ಲಿರುವ ಹಾಗೂ ತ್ಸಾರಿ ಚು ನದಿಗೆ ಹೊಂದಿಕೊಂಡಂತೆ ಈ ಗ್ರಾಮವನ್ನು ರಚಿಸಿಕೊಳ್ಳಲಾಗಿದೆ. ಇದೇ ಗಡಿ ಪ್ರದೇಶವು ದಶಕಗಳ ಕಾಲದಿಂದಲೂ ಭಾರತ ಮತ್ತು ಚೀನಾದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ವಿವಾದ ಇತ್ಯರ್ಥಕ್ಕೂ ಮೊದಲೇ ಚೀನಾ ಅಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತಿದೆ.
ನವೆಂಬರ್.01, 2020 ಮತ್ತು 2019ರ ಆಗಸ್ಟ್.26ರ ಭಾವಚಿತ್ರಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಕಳೆದ 2019ರಲ್ಲಿ ಯಾವುದೇ ರೀತಿ ಕಾಮಗಾರಿಯಿಲ್ಲದೇ ಬಣಗುಡುತ್ತಿದ್ದ ಪ್ರದೇಶದ ಚಿತ್ರಣ ಇದೀಗ ಸಂಪೂರ್ಣ ಬದಲಾದಂತಿದೆ. ಅಂದರೆ ಒಂದು ವರ್ಷದಲ್ಲಿಯೇ ಚೀನಾ ಗಡಿಯಲ್ಲಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆಯಾ ಎಂಬ ಅನುಮಾನಗಳನ್ನು ಇದೊಂದು ಚಿತ್ರವು ಹುಟ್ಟು ಹಾಕುತ್ತಿದೆ
ವಿದೇಶಾಂಗ ಸಚಿವಾಲಯದ ಸ್ಪಷ್ಟನೆಯಲ್ಲಿ ಏನಿದೆ?
ಭಾರತದ ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ಬಗ್ಗೆ ಚಿತ್ರಗಳ ಸಹಿತವಾಗಿ ರಾಷ್ಟ್ರೀಯ ಸುದ್ದಿ ವಾಹಿನಿ ಎನ್ ಡಿ ಟಿವಿ ಕೇಳಿದ ಪ್ರಶ್ನೆಗೆ ದೇಶದ ವಿದೇಶಾಂಗ ಸಚಿವಾಲಯವು ಉತ್ತರ ನೀಡಿತ್ತು. "ಗಡಿ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿಗಳ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ಗಡಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ" ಎಂದು ಉತ್ತರಿಸಿತ್ತು.
"ಭಾರತ-ಚೀನಾ ಗಡಿಯಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಸಂಬಂಧಿಸಂತೆ ರಾಜ್ಯ ಸರ್ಕಾರ ಕೂಡಾ ಹಲವು ರೀತಿ ಕಾಮಗಾರಿಗಳನ್ನು ನಡೆಸುತ್ತಿದೆ. ಗಡಿ ಪ್ರದೇಶದಲ್ಲಿ ರಸ್ತೆ ಮತ್ತು ಸೇತುವೆ ಸೇರಿದಂತೆ ಇತರೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಗಡಿಯಲ್ಲಿನ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವುದಕ್ಕೆ ಸರ್ಕಾರವು ಬದ್ಧವಾಗಿದೆ" ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿತ್ತು.
ಇತಿಹಾಸ ಹೇಳುವ ತ್ಸಾರಿ ಚು ನದಿ?
ಕಳೆದ 1959ರಿಂದಲೂ ಭಾರತ ಮತ್ತು ಚೀನಾ ನಡುವಿನ ಸಂಘರ್ಷಕ್ಕೆ ಇದೇ ತ್ಸಾರಿ ಚು ನದಿಯು ಕಾರಣವಾಗಿತ್ತು. ಅಂದು ನವದೆಹಲಿಯಿಂದ ಚೀನಾ ರಾಜಧಾನಿ ಬೀಜಿಂಗ್ ಗೆ ಔಪಚಾರಿಕ ಟಿಪ್ಪಣಿಯೊಂದನ್ನು ಕಳುಹಿಸಲಾಗಿತ್ತು. ಅದರಲ್ಲಿ "ಯಾವುದೇ ಸೂಚನೆಗಳಿಲ್ಲದೇ ಚೀನಾದ ಯೋಧರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು. ಆ ಪೈಕಿ 12 ಗುಂಡುಗಳು ಪ್ರಬಲವಾಗಿದ್ದು, ಎಂಟು ಮಂದಿ ಭಾರತೀಯ ಯೋಧರು ತಪ್ಪಿಸಿಕೊಂಡಿದ್ದರು" ಎಂದು ಉಲ್ಲೇಖಿಸಲಾಗಿತ್ತು.