ಮಹಾ ವಿನಾಶಕ್ಕೆ ಕೌಂಟ್ಡೌನ್, ಹೊತ್ತಿ ಉರಿಯುತ್ತಿದೆ ತಂಪು ಪ್ರದೇಶ..!
ಧ್ರುವ ಪ್ರದೇಶದ ತಪ್ಪಲು ಹಾಗೂ ಜಗತ್ತಿನಲ್ಲೇ ಅತ್ಯಂತ ತಂಪಾದ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದೆ. ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗುತ್ತಿದೆ. ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜೆನ್ ಪೂರೈಕೆ ಆಗುತ್ತಿರುವುದು ಇದೇ ರಷ್ಯಾದ ಕಾಡುಗಳಿಂದ. ಅದರಲ್ಲೂ ರಷ್ಯಾದ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಇದೇ ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್ನ ವ್ಯತಿರಿಕ್ತ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಭೂಮಿಯ ಮೇಲೆ ವಾತಾವರಣ ಬದಲಾವಣೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತಿದ್ದು, ಇದರ ಭಾಗವಾಗಿ ತಂಪಾದ ಪ್ರದೇಶದಲ್ಲೂ ಬೆಂಕಿ ಧಗಧಗಿಸುತ್ತಿದೆ. ಇಷ್ಟೇ ಆಗಿದ್ದರೆ ಇದು ದೊಡ್ಡ ವಿಷಯ ಆಗಿರುತ್ತಿರಲಿಲ್ಲ, ಆದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮಾನವನ ವಿನಾಶಕ್ಕೆ ನಾಂದಿ ಹಾಡಿದಂತಿದೆ.
ಅಮೆಜಾನ್ ಕಾಡಿಗೆ ಬೆಂಕಿ ಇಟ್ಟವರು ಯಾರು..?
ಏಕೆಂದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣು ಭಾರಿ ಪ್ರಮಾಣದಲ್ಲಿ ಕಾರ್ಬನ್ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಇದೀಗ ಹೊತ್ತಿರುವ ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ. ಈಗಾಗಲೇ 250 ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 35ರಷ್ಟು ಹೆಚ್ಚಾಗಿದೆ.
ಚಳಿ ಚಳಿ ತುಂಬಾ ಚಳಿ..!
ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯಗಳಲ್ಲಿ ಒಂದು. ಸೈಬೀರಿಯಾ ಉತ್ತರ ಧ್ರುವ ಪ್ರದೇಶದಿಂದ ಕೇವಲ 6 ಸಾವಿರ ಕಿಲೋಮೀಟರ್ ದೂರದಲ್ಲಿದೆ. ಈಗ ನೀವೆ ಊಹಿಸಿ, ಇಲ್ಲಿ ಚಳಿಯ ಪ್ರಮಾಣ ಹೇಗಿರಬಹುದು ಎಂಬುದನ್ನ. ಇಲ್ಲಿ ವರ್ಷವೆಲ್ಲಾ ಚಳಿಯೇ ಆವರಿಸಿರುತ್ತದೆ. ಅದೆಷ್ಟರಮಟ್ಟಿಗೆ ಎಂದರೆ ಬೇಸಿಗೆ ಬಂದರು ಕೂಡ ಉಷ್ಣಾಂಶ 15 ಡಿಗ್ರಿ ಮೀರುವುದಿಲ್ಲ. ಹಾಗಾದರೆ ಚಳಿಗಾಲವನ್ನು ನೀವೇ ಊಹೆ ಮಾಡಿಕೊಳ್ಳಿ. ಉದಾಹರಣೆಗೆ 1884ರಲ್ಲಿ ದಾಖಲಾಗಿದ್ದ 7.8 ಡಿಗ್ರಿ ಉಷ್ಣಾಂಶ ರಾಜ್ಯ ರಾಜಧಾನಿಯ ಇತಿಹಾಸದಲ್ಲಿ ಅಂತ್ಯಂತ ಕನಿಷ್ಠವಾಗಿದೆ. ಇಷ್ಟು ಚಳಿಗೆ ಇಡೀ ಬೆಂಗಳೂರು ನಡುಗಿ ಹೋಗಿತ್ತು. ಹಾಗೆ ನೋಡಿದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಇದು ಮಾಮೂಲಿ ತಾಪಮಾನ, ಅಲ್ಲಿ ಬೇಸಿಗೆಯಲ್ಲೂ ಇಷ್ಟೇ ಕನಿಷ್ಠ ತಾಪಮಾನ ಇರುತ್ತದೆ. ಹೀಗಾಗಿ ಅಲ್ಲಿನ ಭೂಮಿ ಸದಾ ತೇವದಿಂದ ಕೂಡಿರುತ್ತದೆ.
ಚಳಿಯಲ್ಲೂ ಬೆಂಕಿ ಹೊತ್ತಿಕೊಂಡಿದೆ
ಇಷ್ಟು ಕನಿಷ್ಠ ತಾಪಮಾನ ಇರುವ ಪ್ರದೇಶ ಸೈಬೀರಿಯಾದಲ್ಲೂ ಕಾಡ್ಗಿಚ್ಚು ಹಬ್ಬಿದೆ. ಸೈಬೀರಿಯಾದ ನಗರಗಳ ಮೇಲೆ ಕಾರ್ಬನ್ ಮೋಡಗಳು ರಾರಾಜಿಸುತ್ತಿವೆ. ಲಕ್ಷಾಂತರ ಎಕರೆ ಕಾಡಿಗೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ರಷ್ಯಾ ಸರ್ಕಾರ ಪರದಾಡುತ್ತಿದೆ. ತಾಪಮಾನ ಹೆಚ್ಚಾಗಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತುವುದು ಮಾಮೂಲಿ ಎನ್ನಬಹುದು. ಆದರೆ ಇಲ್ಲಿ ಆಗಿರುವುದು ಉಲ್ಟಾ, ಚಳಿ ಮತ್ತು ತೇವಾಂಶ ಇದ್ದರೂ ಕಾಡು ಧಗಧಗನೆ ಹೊತ್ತಿ ಉರಿಯುತ್ತಿದೆ. ತೇವಾಂಶ ಹೆಚ್ಚಿರುವ ಪರಿಣಾಮ ಭಾರಿ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದೆ.
#StopAdani ಎಂದು ಹೋರಾಟಕ್ಕಿಳಿದ ಗ್ರೇಟಾ ತನ್ ಬರ್ಗ್
ಸಸ್ಯಗಳ ಪಳಿಯುಳಿಕೆ ಇದಕ್ಕೆ ಕಾರಣ
ಆರ್ಕಟಿಕ್ ತಪ್ಪಲು ಪ್ರದೇಶದಲ್ಲಿ ಸದಾ ಕಾಲ ತೇವ ಇರುವ ಹಿನ್ನೆಲೆಯಲ್ಲಿ, ಅಲ್ಲಿನ ವಾತಾವರಣಕ್ಕೆ ಒಗ್ಗುವ ಸಸ್ಯ ಸಂಕುಲ ಹರಡಿಕೊಂಡಿದೆ. ಆದರೆ ಕ್ಲಿಷ್ಟಕರ ಸಂದರ್ಭದಲ್ಲಿ ಬಹುಪಾಲು ಸಸ್ಯಗಳು ಈ ತೇವಾಂಶದಲ್ಲಿ ಕೊಳೆತುಬಿಡುತ್ತವೆ. ಕೊಳೆತ ಸಸ್ಯ ಒಣಗಲು ಅಲ್ಲಿ ಅವಕಾಶವೇ ಇಲ್ಲ. ವರ್ಷವಿಡೀ ಸರಿಯಾಗಿ ಬಿಸಿಲನ್ನೇ ಕಾಣದ ನೆಲದಲ್ಲಿ ಕೊಳೆತ ಸಸ್ಯಗಳ ರಾಶಿ ಲಕ್ಷಾಂತರ ವರ್ಷಗಳಿಂದ ಹರಡಿಕೊಂಡಿದೆ. ಈಗ ಸೈಬೀರಿಯಾ ಭಾಗದಲ್ಲಿ ಬಿದ್ದ ಬೆಂಕಿ ಕಾಡಿನ ಜೊತೆಗೆ, ಕೊಳೆತ ಸಸ್ಯಗಳನ್ನೂ ಸುಡುತ್ತಿದೆ. ಹೀಗಾಗಿ ಸಹಜವಾಗಿ ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ಯಥೇಚ್ಛವಾಗಿ ವಾತಾವರಣಕ್ಕೆ ಸೇರುತ್ತಿದೆ. ಇದು ಹೀಗೆ ಮುಂದುವರಿದರೆ ಓಝೋನ್ ಪದರಕ್ಕೆ ಭಾರಿ ಪ್ರಮಾಣದ ಹಾನಿ ಕಟ್ಟಿಟ್ಟಬುತ್ತಿ.
Recommended Video
ಬಿಸಿ ಹೊಗೆ ಧ್ರುವ ಪ್ರದೇಶದತ್ತ ನುಗುತ್ತಿದೆ..!
ಸೈಬೀರಿಯಾ ಅರಣ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಕಾರ್ಬನ್ ವಿಷ ಮಿಶ್ರಿತ ಗಾಳಿಯನ್ನ ಉತ್ತರ ಧ್ರುವ ಪ್ರದೇಶದ ಕಡೆಗೆ ತಳ್ಳುತ್ತಿದೆ. ಈಗಾಗಲೇ ಉತ್ತರ ಧ್ರುವದಲ್ಲಿ ಬಹುಪಾಲು ಮಂಜು ಕರಗಿಹೋಗಿದೆ. ಈ ಮಧ್ಯೆ ಕಾರ್ಬನ್ ವಿಷ ಹಾಗೂ ಬಿಸಿಗಾಳಿ ಅದೇ ಮಂಜು ಆವರಿತ ಪ್ರದೇಶದ ಕಡೆಗೆ ನುಗ್ಗುತ್ತಿರುವುದು ವಿನಾಶಕ್ಕೆ ನಾಂದಿ ಹಾಡಿದೆ. ಧ್ರುವ ಪ್ರದೇಶದಲ್ಲಿ ಹರಡಿರುವ ಹಿಮ ಮತ್ತಷ್ಟು ಕರಗುವಂತೆ ಈ ಗಾಳಿ ಪ್ರಚೋದಿಸುತ್ತಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಸಮುದ್ರದ ಮಟ್ಟ ಏರಿಕೆಯಾಗುವ ಜೊತೆಗೆ, ಭೂಮಿಯ ತಾಪಮಾನ ಹಿಡಿತಕ್ಕೆ ಸಿಗದಷ್ಟು ಹೆಚ್ಚಬಹುದೆಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.