ಮಾತು ತಪ್ಪಿದ ತಾಲಿಬಾನ್: ಗುಂಡಿನ ದಾಳಿಗೆ ಹಲವರು ಬಲಿ
ಕಾಬೂಲ್, ಆ. 19: ಹಲವಾರು ಅಫ್ಘಾನ್ ನಗರಗಳಲ್ಲಿ ಜನರು ಅಫ್ಘಾನಿಸ್ತಾನದ ರಾಷ್ಟ್ರ ಧ್ವಜವನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ತಾಲಿಬಾನ್ ಆ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಕೊಟ್ಟ ಮಾತನ್ನು ತಪ್ಪಿದೆ.
ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್ನ ಸರ್ಕಾರಿ ಮಾಧ್ಯಮ ಮತ್ತು ಮಾಹಿತಿ ಕೇಂದ್ರದಲ್ಲಿ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿತು. ದೇಶವನ್ನು ಉದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, "ನೆರೆಹೊರೆಯ ರಾಷ್ಟ್ರಗಳ ವಿರುದ್ಧ ದುಷ್ಕೃತ್ಯ ಎಸಗಲು ನಮ್ಮ ನೆಲವನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದೇವೆ. ಅಂತರಾಷ್ಟ್ರೀಯ ಸಮುದಾಯವು ನಮ್ಮ ಸರ್ಕಾರವನ್ನು ಗುರುತಿಸಬೇಕು. ನಾವು ಎಲ್ಲರಿಗೂ ಸುರಕ್ಷತೆಯನ್ನು ಒದಗಿಸುವುದಾಗಿ ಭರವಸೆ ನೀಡುತ್ತೇವೆ," ಎಂದು ಮುಜಾಹಿದ್ ಹೇಳಿದ್ದರು.
ಅಫ್ಘಾನ್ ಖಜಾನೆ ಹೊತ್ತು ಪಲಾಯನವಾದ ಅಧ್ಯಕ್ಷ ಅಬುಧಾಬಿಯಲ್ಲಿ
ಆದರೆ ಅಫ್ಘಾನಿಸ್ತಾನದಲ್ಲಿ ಶಾಂತಿಯ ಭರವಸೆಯ ಹೊರತಾಗಿಯೂ, ಗುರುವಾರ ಅಸದಾಬಾದ್ ನಗರದಲ್ಲಿ ರಾಷ್ಟ್ರೀಯ ಧ್ವಜವನ್ನು ಬೀಸಿದ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಗುಂಡು ಹಾರಿಸಿದೆ. ಇದರಿಂದಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ, ಹಾಗೆಯೇ ಹಲವಾರು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
Recommended Video
ತಾಲಿಬಾನ್ ವಿರುದ್ದದ ಪ್ರತಿಭಟನೆಯ ಮೊದಲ ಭಾಗವಾಗಿ ಅಸದಾಬಾದ್ನಲ್ಲಿ ಪ್ರತಿಭಟನಾಕಾರರು ತಾಲಿಬಾನ್ ಧ್ವಜವನ್ನು ಕಿತ್ತುಹಾಕಿದ್ದಾರೆ. ಬಳಿಕ ರಾಷ್ಟ್ರ ಧ್ವಜವನ್ನು ಬೀಸಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಆಕ್ರೋಶಕ್ಕೆ ಒಳಗಾದ ತಾಲಿಬಾನ್ ಪ್ರತಿಭಟನಕಾರರ ಮೇಲೆ ಗುಂಡಿನ ಪ್ರಹಾರ ನಡೆಸಿದೆ ಎಂದು ಹೇಳಲಾಗಿದೆ. ಇನ್ನು ಸಾವನ್ನಪ್ಪಿದ ಜನರು ತಾಲಿಬಾನ್ನ ಗುಂಡಿನ ದಾಳಿಯಿಂದಾಗಿಯೇ ಸಾವನ್ನಪ್ಪಿದ್ದಾರೆಯೇ ಅಥವಾ ಕಾಲ್ತುಳಿತದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆಯೇ ಎಂದು ಈವರೆಗೂ ಸ್ಪಷ್ಟವಾಗಿಲ್ಲ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ.
ಈ ಬಗ್ಗೆ ಸ್ಥಳದಲ್ಲಿದ್ದ ಮೊಹಮ್ಮದ್ ಸಲೀಂ ಎಂಬವರು ರಾಯಿಟರ್ಸ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಒಮ್ಮೆಲೇ ನೂರಾರು ಮಂದಿ ಬೀದಿಗೆ ಬಂದರು. ಮೊದಲಿಗೆ ನಾನು ಹೆದರುತ್ತಿದ್ದೆ ಹಾಗೂ ನನಗೆ ಹೋಗಲು ಇಷ್ಟವಿರಲಿಲ್ಲ, ಆದರೆ ನನ್ನ ನೆರೆಹೊರೆಯವರೊಬ್ಬರು ಆ ಗುಂಪಿನಲ್ಲಿ ಸೇರಿಕೊಂಡಿದ್ದನ್ನು ನೋಡಿದಾಗ ನಾನು ಕೂಡಾ ನನ್ನ ಮನೆಯಲ್ಲಿರುವ ಧ್ವಜವನ್ನು ಹೊರತೆಗೆದೆ," ಎಂದಿದ್ದಾರೆ.
ಅಫ್ಘಾನ್ ವಶಪಡಿಸಿಕೊಂಡ ಬಳಿಕ ತಾಲಿಬಾನ್ ಮೊದಲ ಸುದ್ದಿಗೋಷ್ಠಿ
ಆದರೆ ತಾಲಿಬಾನ್ ಗುಂಡಿನ ದಾಳಿ ನಡೆಸಿದ್ದು, ಆಗ ಜನರು ಭಯಭೀತರಾಗಿ ಓಡಿದ್ದಾರೆ. ಈ ಸಂದರ್ಭದಲ್ಲಿ ತಾಲಿಬಾನ್ನ ಗುಂಡೇಟಿಗೆ ಹಾಗೂ ಕಾಲ್ತುಲಿತದಿಂದಾಗಿ ಹಲವಾರು ಮಂದು ಸಾವನ್ನಪ್ಪಿದ್ದಾರೆ ಎಂದು ಕುನಾರ್ ಪ್ರಾಂತ್ಯದ ರಾಜಧಾನಿಯಾದ ಪೂರ್ವ ನಗರದ ಈ ಮೊಹಮ್ಮದ್ ಸಲೀಂ ಮಾಹಿತಿ ನೀಡಿದ್ದಾರೆ.
ಆದರೆ ಈ ಘಟನೆಯ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಸ್ಥಳೀಯ ಮಾಧ್ಯಮಗಳು ಪೂರ್ವ ನಗರವಾದ ಜಲಾಲಾಬಾದ್ ಮತ್ತು ಪಕ್ತಿಯಾ ಪ್ರಾಂತ್ಯದ ಜಿಲ್ಲೆಯಲ್ಲಿ ಇದೇ ರೀತಿಯ ಪ್ರತಿಭಟನೆಗಳ ಬಗ್ಗೆ ವರದಿ ಮಾಡಿದೆ. ಆದರೆ ಹಿಂಸಾಚಾರದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಅಫ್ಘಾನಿಸ್ತಾನವು ಪ್ರತಿ ವರ್ಷ ಆಗಸ್ಟ್ 19 ರಂದು ಬ್ರಿಟಿಷ್ ನಿಯಂತ್ರಣದಿಂದ ಸ್ವಾತಂತ್ರ್ಯ ಲಭಿಸಿದ ದಿನವಾಗಿ ಆಚರಿಸುತ್ತದೆ. ಈ ದಿನವನ್ನು ಅನೇಕ ಮಂದಿ ಸ್ಲಾಮಿಸ್ಟ್ ಮೂಲಭೂತವಾದಿ ಗುಂಪಿನ ವಿರುದ್ಧ ಪ್ರತಿಭಟಿಸಲು ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಬುಧವಾರ ಅಸದಾಬಾದ್ ಮತ್ತು ಇನ್ನೊಂದು ಪೂರ್ವ ನಗರವಾದ ಖೋಸ್ಟ್ನಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿದೆ. ಪ್ರತಿಭಟನಾಕಾರರು ಕೆಲವು ಕಡೆಗಳಲ್ಲಿ ತಾಲಿಬಾನ್ನ ಬಿಳಿ ಧ್ವಜವನ್ನು ಕಿತ್ತು ರಾಷ್ಟ್ರ ಧ್ವಜವನ್ನು ಹಾಕಿದ್ದಾರೆ ಎಂದು ಹೇಳಲಾಗಿದೆ.
ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಪಲಾಯನವಾದ ಬಳಿಕ ಅಫ್ಘಾನಿಸ್ತಾನದ 'ಕಾನೂನುಬದ್ಧ ಉಸ್ತುವಾರಿ ಅಧ್ಯಕ್ಷ' ನಾನು ಎಂದು ತಮ್ಮ ಹಕ್ಕು ಚಲಾಯಿಸಲು ಮುಂದೆ ಬಂದಿದ್ದ ಅಫ್ಘಾನಿಸ್ತಾನ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಕೂಡಾ ಈ ರಾಷ್ಟ್ರಧ್ವಜವನ್ನು ಹೊತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. "ರಾಷ್ಟ್ರಧ್ವಜವನ್ನು ಹೊತ್ತುಕೊಂಡು ಗೌರವದಿಂದ ನಿಂತವರಿಗೆ ಗೌರವ ಸಲ್ಲಿಸಿ" ಎಂದು ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿದ್ದಾರೆ. ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಸಂವಿಧಾನದಲ್ಲಿ ಉಲ್ಲೇಖ ಮಾಡಲಾಗಿರುವ ಅಂಶಗಳನ್ನು ಉಲ್ಲೇಖ ಮಾಡಿ, ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷರ ಅನುಪಸ್ಥಿತಿ, ತಪ್ಪಿಸಿಕೊಳ್ಳುವಿಕೆ, ರಾಜೀನಾಮೆ ಅಥವಾ ಸಾವಿನ ಸಂದರ್ಭದಲ್ಲಿ, ಉಪಾಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗುತ್ತಾರೆ ಎಂದು ಹೇಳಿದ್ದರು.
(ಒನ್ ಇಂಡಿಯಾ)