ಶ್ರೀಲಂಕಾ ಸ್ಫೋಟ: 7 ಮಂದಿ ಶಂಕಿತರ ಬಂಧನ, ಸಂಜೆಯಿಂದ ಕರ್ಫ್ಯೂ ಜಾರಿ
ಕೊಲಂಬೋ (ಶ್ರೀಲಂಕಾ), ಏಪ್ರಿಲ್ 21: ಶ್ರೀಲಂಕಾದಲ್ಲಿ ಭಾನುವಾರ ವಿವಿಧೆಡೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 207ಕ್ಕೆ ಏರಿಕೆ ಆಗಿದ್ದು, ಈ ಸಂಬಂಧ 7 ಮಂದಿ ಶಂಕಿತರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ಸರಣಿ ಸ್ಫೋಟದ ನಂತರ ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6ರ ತನಕ ಕರ್ಫ್ಯೂ ವಿಧಿಸಲಾಗಿದೆ.
ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಅವರು ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯನ್ನು ನಡೆಸಿದ್ದಾರೆ. "ನಮ್ಮ ಜನರ ಮೇಲೆ ನಡೆದ ಈ ಹೇಡಿ ಕೃತ್ಯವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ಎಲ್ಲ ಶ್ರೀಲಂಕನ್ನರು ಈ ದುಃಖದ ಸನ್ನಿವೇಶದಲ್ಲಿ ಒಗ್ಗಟ್ಟಾಗಿರಬೇಕು ಹಾಗೂ ಬಲವಾಗಿರಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸರಕಾರವು ಅಗತ್ಯ ಕ್ರಮ ತೆಗೆದುಕೊಳ್ಳಲಿದೆ" ಎಂದು ವಿಕ್ರಮ್ ಸಿಂಘೆ ಹೇಳಿದ್ದಾರೆ.
ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವು, 500 ಮಂದಿಗೆ ಗಾಯ
ಈ ದುಷ್ಕೃತ್ಯದ ಹಿಂದೆ ಇರುವವರು ಯಾರು ಹಾಗೂ ಅವರ ಕಾರ್ಯಸೂಚಿ ಏನು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್ ವಿಶೇಷ ತಂಡ ಹಾಗೂ ಸೇನೆಗೆ ಆದೇಶ ನೀಡಿದ್ದೇನೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
ಸೇನೆಯನ್ನು ನಿಯೋಜಿಸಲಾಗಿದೆ. ಸೇನಾ ವಕ್ತಾರರ ಪ್ರಕಾರ, ಕೊಲಂಬೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.