ಶ್ರೀಲಂಕಾ; ಪ್ರತಿಭಟನಾಕಾರರ ಶಿಬಿರವನ್ನೇ ಕೆಡವಿದ ಭದ್ರತಾ ಸಿಬ್ಬಂದಿ
ಕೊಲಂಬೋ, ಜುಲೈ 22: ಶ್ರೀಲಂಕಾದ ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ವಿರುದ್ಧ ಶ್ರೀಲಂಕಾ ಅಧ್ಯಕ್ಷೀಯ ಸಚಿವಾಲಯದ ಆವರಣದ ಹೊರಗೆ ಮತ್ತೆ ಪ್ರತಿಭಟನೆ ತೀವ್ರಗೊಂಡಿದೆ. ಸರ್ಕಾರದ ವಿರುದ್ಧ ಕೆರಳಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಶಸ್ತ್ರ ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಕೊಲಂಬೊದಲ್ಲಿರುವ ಶ್ರೀಲಂಕಾದ ಅಧ್ಯಕ್ಷೀಯ ಸಚಿವಾಲಯದ ಆವರಣದ ಹೊರಗೆ ಬ್ಯಾರಿಕೇಡ್ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರನ್ನು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ನಿಯಂತ್ರಿಸಿದರು.
Breaking; ಶ್ರೀಲಂಕಾದ ಅಧ್ಯಕ್ಷರಾಗಿ ವಿಕ್ರಮಸಿಂಘೆ ಅಧಿಕಾರ ಸ್ವೀಕಾರ
ಶ್ರೀಲಂಕಾ ಸರ್ಕಾರದ ವಿರೋಧಿ ಪ್ರತಿಭಟನಾ ಶಿಬಿರಗಳ ಮೇಲೆ ಭದ್ರತಾ ಸಿಬ್ಬಂದಿಯೇ ಶುಕ್ರವಾರ ಬೆಳಗ್ಗೆ ಹೊತ್ತಿಗೆ ದಾಳಿ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಇದೀಗ ಆರೋಪಿಸುತ್ತಿದ್ದಾರೆ. "ರಾನಿಲ್ ವಿಕ್ರಮಸಿಂಘೆ ನಮ್ಮನ್ನು ಹೆದರಿಸುವುದಕ್ಕೆ ಪ್ರಯತ್ನಿಸುತ್ತಿದ್ದು, ಅದಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ. ಆದರೆ ನಾವು ಎಂದಿಗೂ ಪ್ರತಿಭಟನೆಯನ್ನು ಬಿಡುವುದಿಲ್ಲ. ನಮ್ಮ ದೇಶವನ್ನು ಇಂತಹ ಅಸಹ್ಯ ರಾಜಕೀಯದಿಂದ ಮುಕ್ತಗೊಳಿಸಲು ನಾವು ಬಯಸುತ್ತೇವೆ" ಎಂದು ಸಶಸ್ತ್ರ ಪಡೆಗಳ ದಮನದ ನಡುವೆ ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಪ್ರತಿಭಟನಾಕಾರರ ಡೇರೆಗಳನ್ನು ಕೆಡವಿದ ಭದ್ರತಾ ಸಿಬ್ಬಂದಿ
ಶ್ರೀಲಂಕಾ ಅಧ್ಯಕ್ಷೀಯ ಸಚಿವಾಲಯದ ಆವರಣದ ಹೊರಗೆ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯೇ ಪ್ರತಿಭಟನಾಕಾರರ ಡೇರೆಗಳನ್ನು ಕೆಡವಿದ್ದಾರೆ. ದ್ವೀಪರಾಷ್ಟ್ರದಲ್ಲಿ ನೂತನ ಅಧ್ಯಕ್ಷರ ಆಯ್ಕೆಯ ನಂತರವೂ ಮತ್ತೆ ಹಳಿಗೆ ಬರುವುದಕ್ಕೆ ಪರದಾಡುವ ಸ್ಥಿತಿಯಿದ್ದು, ದೇಶದ ಜನರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಭವಿಷ್ಯದ ಬಗ್ಗೆ ಇನ್ನೂ ಅನಿಶ್ಚಿತರಾಗಿದ್ದಾರೆ.
ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಉದ್ದನೆಯ ಸಾಲು
ಈ ಅನಿಶ್ಚಿತತೆ ಮಧ್ಯೆ, ದೇಶಾದ್ಯಂತದ ಶ್ರೀಲಂಕಾದ ಮಂದಿ ಹೊಸ ಪಾಸ್ಪೋರ್ಟ್ ಪಡೆಯಲು ಅಥವಾ ತಮ್ಮ ಹಳೆಯ ಪಾಸ್ಪೋರ್ಟ್ ಅನ್ನು ನವೀಕರಿಸಲು ಕೊಲಂಬೊದ ಪಾಸ್ಪೋರ್ಟ್ ಕಚೇರಿಯಲ್ಲಿ ಸಾಲುಗಟ್ಟಿ ನಿಂತಿದ್ದಾರೆ. "ದೇಶದಲ್ಲಿ ಆಹಾರವಿಲ್ಲ, ಇಂಧನವಿಲ್ಲ ಮತ್ತು ಹಣವಿಲ್ಲ. ನಾವು ಏನು ಮಾಡಬೇಕು, ನಾವು ಹೇಗೆ ಬದುಕಬೇಕು?, ನನ್ನ ಪಾಸ್ಪೋರ್ಟ್ ಪಡೆಯಲು ಮತ್ತು ಉದ್ಯೋಗಕ್ಕಾಗಿ ಕತಾರ್ಗೆ ಹೋಗಲು ನಾನು ಬಂದಿದ್ದೇನೆ. ಇದಕ್ಕಾಗಿ ಮಾತ್ರ ಜನರು ಇಲ್ಲಿಗೆ ಬಂದಿದ್ದಾರೆ," ಎಂದು ಸರದಿಯಲ್ಲಿ ಕಾಯುತ್ತಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ರಾನಿಲ್ ವಿಕ್ರಮಸಿಂಘೆ ಪ್ರಮಾಣವಚನ
ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಸಂಸತ್ತಿನಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಎದುರು ಪ್ರಮಾಣವಚನ ಸ್ವೀಕರಿಸಿದರು. ಬುಧವಾರ ಸಂಸತ್ತಿನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬುಧವಾರದ ಮತದಾನದ ವೇಳೆ, ದೇಶದಲ್ಲಿ ತೀವ್ರ ಆರ್ಥಿಕ ಪ್ರಕ್ಷುಬ್ಧತೆಯ ಮಧ್ಯೆ ನಡೆದ ಚುನಾವಣೆಯಲ್ಲಿ ವಿಕ್ರಮಸಿಂಘೆ 134 ಮತಗಳನ್ನು ಪಡೆದುಕೊಂಡರು.
ದ್ವೀಪರಾಷ್ಟ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರಜೆಗಳು
ದ್ವೀಪರಾಷ್ಟ್ರದಲ್ಲಿ ಉತ್ಪಾದನೆಗೆ ಮೂಲ ಒಳಹರಿವಿನ ಅಲಭ್ಯತೆ, 2022ರ ಮಾರ್ಚ್ ತಿಂಗಳಿನಿಂದ ಕರೆನ್ಸಿಯ ಶೇಕಡಾ 80ರಷ್ಟು ಕುಸಿತ, ವಿದೇಶಿ ಮೀಸಲು ಕೊರತೆ ಮತ್ತು ಅದರ ಅಂತಾರಾಷ್ಟ್ರೀಯ ಸಾಲದ ಬಾಧ್ಯತೆಗಳನ್ನು ಪೂರೈಸುವಲ್ಲಿ ದೇಶದ ವಿಫಲವಾಯಿತು. ಶ್ರೀಲಂಕಾ ಆರ್ಥಿಕತೆ ಬಿಕ್ಕಟ್ಟಿನ ಸುಳಿಗೆ ಸಿಲುಕಿತು. ಇಂಧನ ಕೊರತೆಯ ನಡುವೆ ಪ್ರತಿದಿನ ನೂರಾರು ಜನರು ಪೆಟ್ರೋಲ್ ಬಂಕ್ ಎದುರಿಗೆ ಸಾಲುಗಟ್ಟಿ ನಿಲ್ಲುವುದಕ್ಕೆ ಶುರು ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಕಾರು, ಬೈಕ್ ಅನ್ನು ಬಿಟ್ಟು ಬೈಸಿಕಲ್ ಅನ್ನು ಬಳಸುವುದಕ್ಕೆ ಪ್ರಾರಂಭಿಸಿದರು.
ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶ್ರೀಲಂಕಾ ಮಂದಿ ಈ ಹಿಂದಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರ ಆಕ್ರೋಶ ಕಂಡು ಬೆದರಿದೆ ರಾಜಪಕ್ಸೆ ಮೊದಲು ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದು, ಅಲ್ಲಿಂದ ಸಿಂಗಾಪುರಕ್ಕೆ ತೆರಳಿದರು.
Recommended Video