ಕಾಶ್ಮೀರ ನಡೆ ವಿರೋಧಿಸಿದ ಚೀನಾಕ್ಕೆ ಭಾರತದಿಂದ ಖಡಕ್ ಎಚ್ಚರಿಕೆ
ಬೀಜಿಂಗ್, ಆಗಸ್ಟ್ 12: ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ, ಮತ್ತು ವಿಶೇಷವಾಗಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಭಾರತದ ನಡೆಯ ಬಗ್ಗೆ ಚೀನಾ ಕಿಡಿಕಾರಿದ್ದು ಹಳೇ ಸಂಗತಿ. ಆದರೆ ಅದಕ್ಕೆ ಭಾರತ ಇದೀಗ ಖಡಕ್ ಪ್ರತಿಕ್ರಿಯೆ ನೀಡಿದೆ. ಭಾರತದ ಆಂತರಿಕ ವಿಷಯಗಳ ಬಗ್ಗೆ ಚೀನಾ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆ ನೀಡಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಬೀಜಿಂಗ್ ನಲ್ಲಿ ಸೋಮವಾರ ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, "ಭಾರತ ತನ್ನ ದೇಶದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿದ್ದರೂ ಅದು ನಮ್ಮ ಆಂತರಿಕ ವಿಚಾರ. ನಮ್ಮ ನಡುವೆ(ಭಾರತ-ಚೀನಾ) ಭಿನ್ನಾಭಿಪ್ರಾಯವಿರಬಹುದು. ಆದರೆ ಅದು ಸಂಘರ್ಷವಾಗಿ ಬದಲಾಗುವುದಕ್ಕೆ ಅವಕಾಶ ನೀಡಬಾರದು" ಎಂದರು.
ಲಡಾಖ್ ಬಳಿ ಪಾಕ್ ಯುದ್ಧ ವಿಮಾನ, ಎದುರಿಸಲು ಭಾರತವೂ ಸಿದ್ಧ
"ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ಜಾಗತಿಕ ರಾಜಕೀಯದಲ್ಲಿ ಅದರದೇ ಆದ ಮಹತ್ವವಿದೆ. ಅದನ್ನು ಕಾಯ್ದುಕೊಳ್ಳಬೇಕಿದೆ" ಎಂದು ಜೈಶಂಕರ್ ಹೇಳಿದರು.
ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ್ದನ್ನು ಚೀನಾ, 'ಗಂಭೀರವಾಗಿ ಯೋಚಿಸಬೇಕಾದ ವಿಷಯ' ಎಂದು ಕರೆದಿತ್ತು. ಭಾರತ ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದಿತ್ತು. ಆದರೆ 'ಇದು ಭಾರತದ ಆಂತರಿಕ ವಿಷಯವಾಗಿರುವುದರಿಂದ ಭಾರತ ಈ ನಿರ್ಧಾರ ತೆಗೆದುಕೊಳ್ಳಬಹುದು' ಎಂದು ಭಾರತ ಸಮಜಾಯಿಷಿ ನೀಡಿತ್ತು.
ಈದ್ ಸಂಭ್ರಮ ಬೇಡ, ಕಾಶ್ಮೀರಕ್ಕಾಗಿ ಹೋರಾಡಿ: ಪಾಕ್ ಸರ್ಕಾರ
"ಭಾರತ ಯಾವುದೇ ದೇಶದ ಆಂತರಿಕ ವಿಷಯದಲ್ಲಿ ಮೂಗುತೂರಿಸುವುದಕ್ಕೆ ಹೋಗುವುದಿಲ್ಲ. ಜೊತೆಗೆ ಬೇರೆ ದೇಶಗಳೂ ನಮ್ಮ ಆಂತರಿಕ ವಿಷಯದಲ್ಲಿ ತಲೆತೂರಿಸುವುದನ್ನು ಇಷ್ಟ ಪಡುವುದಿಲ್ಲ" ಎಂದು ಸ್ಪಷ್ಟಮಾತುಗಳಲ್ಲಿ ವಿದೇಶಾಂಗ ಇಲಾಖೆ ಹೇಳಿದೆ.