370 ನೇ ವಿಧಿ ರದ್ದು: ವಿಶ್ವಸಂಸ್ಥೆಯ ಮೊರೆಹೋದ ಪಾಕಿಸ್ತಾನ
ಇಸ್ಲಾಬಾದ್, ಆಗಸ್ಟ್ 06: "ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ" ಎಂದು ದೂರಿ ಪಾಕಿಸ್ತಾನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಭಾರತ ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕಾರ್ಯಪ್ರವೃತ್ತವಾಗಿದ್ದು, ಭಾರತದ ನಡೆಯ ವಿರುದ್ಧ ವಿಶ್ವಸಂಸ್ಥೆಗೆ ದೂರು ಹೇಳಿದೆ.
370ನೇ ವಿಧಿ: ಮೌನ ಮುರಿದ ರಾಹುಲ್ ಗಾಂಧಿಯಿಂದ ಕೇಂದ್ರಕ್ಕೆ ತಪರಾಕಿ
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಪತ್ರ ಬರೆದಿದ್ದು, "ಭಾರತ ಆಕ್ರಮಿತ ಕಾಶ್ಮೀರದಲ್ಲಿ ಗಂಭೀರ ಪರಿಸ್ಥಿತಿ ತಲೆದೂರಿದ್ದು, ಇದರಿಂದ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆಯುಂಟಾಗುತ್ತಿದೆ" ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.
ಆದರೆ ಈ ಕುರಿತು ವಿಶ್ವಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಈ ವರೆಗೆ ಲಭ್ಯವಾಗಿಲ್ಲ.
ಮೋದಿ-ಶಾ ಕಲಂ 370 ರದ್ದು ಮಾಡಲು 5 ಕಾರಣಗಳು
ಭಾರತದ ನಡೆಯನ್ನು ಟೀಕಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್, "ಅಣ್ವಸ್ತ್ರವನ್ನು ಹೊಂದಿದ್ದ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಈ ನಡೆಯಿಂದ ಮತ್ತಷ್ಟು ಹದಗೆಟ್ಟಿದೆ. ಭಾರತದ ನಡೆ ಕಾನೂನಾತ್ಮಕವಾಗಿಯೂ ಸರಿಯಾದುದಲ್ಲ" ಎಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.