"ಸೇ ನೋ ಟು ಇಂಡಿಯಾ" ಪಾಕಿಸ್ತಾನದ ಹೊಸ ಘೋಷವಾಕ್ಯ!
ಇಸ್ಲಾಮಾಬಾದ್, ಆಗಸ್ಟ್ 09: ಭಾರತದೊಂದಿಗಿನ ಎಲ್ಲಾ ಸಾಂಸ್ಕೃತಿಕ ವಿನಿಮಯಗಳನ್ನೂ ನಿರ್ಬಂಧಿಸಲು ಪಾಕಿಸ್ತಾನ ನಿರ್ಧರಿಸಿದ್ದು, 'ಸೇ ನೋ ಟು ಇಂಡಿಯಾ' ಎಂಬ ಘೋಷವಾಕ್ಯವನ್ನು ಆರಂಭಿಸಿದೆ. ಭಾರತ ಮತ್ತು ಪಾಕಿಸ್ತಾನಗಳು ಜಂಟಿಯಾಗಿ ಹೂಡಿಕೆ ಮಾಡಿದ್ದ ಮನರಂಜನೆ ಸೇರದಂತೆ ಇನ್ನಿತರ ಎಲ್ಲಾ ಉದ್ಯಮಗಳನ್ನೂ ಪಾಕಿಸ್ತಾನ ನಿಷೇಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಭಾರತ ಸರ್ಕಾರದ ನಡೆಯ ವಿರುದ್ಧ ಪಾಕಿಸ್ತಾನ ತನ್ನ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದೆ.
ಸಂಜೋತಾ ಎಕ್ಸ್ ಪ್ರೆಸ್ ಸೇವೆ ಶಾಶ್ವತವಾಗಿ ರದ್ದು! ಯುದ್ಧದ ಮುನ್ಸೂಚನೆಯೇ?
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಕಾತೆ ಸಚಿವಾಲಯ 'ಸೇ ನೋ ಟು ಇಂಡಿಯಾ' ಎಂಬ ಘೋಷ ವಾಕ್ಯವನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನಿ ಪತ್ರಿಕೆ 'ದಿ ಡಾನ್' ವರದಿ ಮಾಡಿದೆ.
ಚಾನೆಲ್ ಗಳಿಗೂ ನಿಷೇಧ
'ಪಾಕಿಸ್ತಾನ್ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ'(ಪೆಮ್ರಾ) ವು ಭಾರತೀಯ ಚಾನೆಲ್ ಗಳನ್ನು ನಿಷೇಧಿಸಲು ಸೂಚನೆ ನೀಡಿದ್ದು, ಭಾರತೀಯ ಡಿಟಿಎಚ್(Direct To Home) ಸಾಧನಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಆದೇಶಿಸಿದೆ.
ಹಿಂದುತ್ವ ಸಿದ್ಧಾಂತದ ವಿರುದ್ಧ ಹೋರಾಟ!
"ಕಾಶ್ಮೀರದ ವಿಷಯದಲ್ಲಿ ಭಾರತ ತೆಗೆದುಕೊಂಡ ನಿರ್ಧಾರ ಅಕ್ರಮ ಮತ್ತು ಏಕಪಕ್ಷೀಯ. ನಾವು ಈ ವಿಷಯವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದೇವೆ. ಹಿಂದುತ್ವ ಸಿದ್ಧಾಂತದ ವಿರುದ್ಧ ಹೋರಾಡುವುದೇ ಈಗ ನಮ್ಮ ಗುರಿ" ಎಂದು ಮಾಹಿತಿ ಮತ್ತು ಪ್ರಸಾರ ಖಾತೆಯ ವಿಶೇಷ ಅಧಿಕಾರಿ ಆಶಿಖ್ ಅವಾನ್ ಹೇಳಿದ್ದಾರೆ.
ಮತ್ತೊಂದು ಪುಲ್ವಾಮಾ ದಾಳಿಯ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್!
ಮಾಧ್ಯಮಗಳ ಹೊಣೆ ದೊಡ್ಡದು
ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾದಾಟ ಮತ್ತು ಸಾಂಸ್ಕೃತಿಕ ಸನ್ನಿವೇಶವನ್ನು ನೋಡಿದರೆ ಭಾರತ ನಮ್ಮ ಮೇಲೆ ಮಾಡುತ್ತಿರುವ ಸಾಂಸ್ಕೃತಿಕ ಆಕ್ರಮಣವನ್ನು ಸೋಲಿಸಲು ಮಾಧ್ಯಮಗಳಿಗೆ ಮಾತ್ರ ಸಾಧ್ಯ ಎಂಬುದು ನನ್ನ ಭಾವನೆ ಎಂದು ಶಿಖ್ ಹೇಳಿದ್ದಾರೆ.
ಭಾರತೀಯ ಸಿನೆಮಾ ಬ್ಯಾನ್
ಪಾಕಿಸ್ತಾನದ ಯಾವುದೇ ಥಿಯೇಟರ್ ಗಳಲ್ಲಿ ಇನ್ನು ಮುಂದೆ ಭಾರತೀಯ ಸಿನೆಮಾಗಳು ಪ್ರಸಾರವಾಗುವುದಿಲ್ಲ. ಹಾಗೆಯೇ ನಾಟಕಗಳು ಮತ್ತು ಭಾರತೀಯ ಧಾರಾವಾಹಿಗಳು ಯಾವುದನ್ನೂ ಪ್ರಸಾರ ಮಾಡುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಇದೇನು ಹೊಸ ವಿಷಯವಲ್ಲ. ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾದಾಗಲೆಲ್ಲ ಇಂಥ ಕ್ರಮ ಕೈಗೊಳ್ಳಲಾಗುತ್ತದೆ. ಫೆಬ್ರವರಿ 14 ರಂದು ಪಾಕಿಸ್ತಾನಿ ಮೂಲದ ಉಗ್ರರು ಭಾರತದ ಪುಲ್ವಾಮಾದಲ್ಲಿ ಉಗ್ರದಾಳಿ ನಡೆಸಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಸಂದರ್ಭದಲ್ಲಿ ಭಾರತವೂ ಇಂಥದೇ ಕ್ರಮ ಕೈಗೊಂಡಿತ್ತು. ನಂತರ ಫೆಬ್ರವರಿ 26 ರಂದು ಭಾರತ ಪಾಕಿಸ್ತಾನದ ಬಾಲಕೋಟ್ ನಲ್ಲಿ ಏರ್ ಸ್ಟ್ರೈಕ್ ನಡೆಸಿದ್ದಾಗಲೂ, 'ಭಾರತ ಏರ್ ಸ್ಟ್ರೈಕ್ ನಡೆಸಿದ್ದೇ ಸುಳ್ಳು' ಎಂದು ಹೇಳುತ್ತಿದ್ದರೂ, ಪಾಕಿಸ್ತಾನ ಭಾರತದ ಮೇಲೆ ಸಾಂಸ್ಕೃತಿಕ ನಿರ್ಬಂಧ ಹೇರಿತ್ತು.