ನಮಗೆ ನೆರೆ 'ಹೊರೆ'ಯಾಗಿದ್ದಾರೆ, ಏಕಾಂಗಿಯಾಗಿಯೇ ಹೋರಾಡುತ್ತೇವೆ: ಝೆಲೆನ್ಸ್ಕಿ
ಕೀವ್, ಏಪ್ರಿಲ್ 18 : ಉಕ್ರೇನ್ ಮೇಲೆ ರಷ್ಯಾ ತನ್ನ ದಾಳಿಯನ್ನ ಹೆಚ್ಚಿಸಿದ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಾವು ನಮ್ಮ ನೆರೆಹೊರೆಯ ದೇಶದವರನ್ನ ನಂಬುವುದಿಲ್ಲ, ನಮಗೆ ನೆರವು ನೀಡುತ್ತೇವೆ ಎಂದು ಹೇಳುವ ಯಾವುದೇ ಭರವಸೆಯ ಮಾತುಗಳ ಮೇಲೆ ನಂಬಿಕೆಯಿಡುವುದಿಲ್ಲ. ನಮ್ಮ ಜನ, ನಮ್ಮ ಸೇನೆ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ಸಿಎನ್ಎನ್ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಮ್ಮ ಮೇಲಿನ ನಂಬಿಕೆ, ನಮ್ಮ ಜನರ ಮೇಲಿನ ನಂಬಿಕೆ, ನಮ್ಮ ಯೋಧರ ಮೇಲಿನ ನಂಬಿಕೆ ಇವುಗಳ ಮೇಲೆ ಮಾತ್ರ ನಮ್ಮ ನಂಬಿಕೆ ಇದೆ. ಬೇರೆ ದೇಶದ ಮೇಲಿನವರ ಮೇಲೆ ಯಾವುದೇ ನಂಬಿಕೆ, ಭರವಸೆಯಿಲ್ಲ. ಈ ಸಮರದ ವಿರುದ್ದ ನಾವೇ ಕೊನೆಯವರೆಗೂ ಹೋರಾಡುತ್ತೇವೆ," ಅಂತ ಝೆಲೆನ್ಸ್ಕಿ ಹೇಳಿಕೆ ನೀಡಿದ್ದಾರೆ.
ರಷ್ಯಾ ದಾಳಿಗೆ 3000 ಯೋಧರು ಸಾವು,10 ಸಾವಿರಕ್ಕೂ ಹೆಚ್ಚು ಮಂದಿಗೆ ಗಾಯ: ಝೆಲೆನ್ಸ್ಕಿ
ಅಲ್ಲದೆ ಪ್ರತಿಯೊಬ್ಬರು ಈ ಯುದ್ಧದ ಬಗ್ಗೆ ಕೇವಲ ಮಾತನಾಡಿದ್ದಾರೆ ಅಷ್ಟೇ. ಆದರೆ ಯಾರಿಗೂ ಈ ಯುದ್ಧದ ವಿರುದ್ದ ಹೋರಾಡುವ ಧೈರ್ಯವಿಲ್ಲ. ಆದ್ರೆ ನಮ್ಮ ಸೇನೆ ನಿರಂತರವಾಗಿ ಹೋರಾಟ ಮಾಡುತ್ತಿದೆ. ಸದ್ಯಕ್ಕೆ ಕೀವ್ ಮೇಲೆ ದಾಳಿ ಮಾಡುವುದನ್ನ ರಷ್ಯಾ ಕೈ ಬಿಟ್ಟಿದೆ. ಆದ್ರೆ ಇದರ ಅರ್ಥ ಮತ್ತೆ ದಾಳಿ ಮಾಡುವುದಿಲ್ಲ ಎಂಬ ಅರ್ಥವಲ್ಲ. ಬದಲಾಗಿದೆ ಡಾನ್ಬಾಸ್ ವಶಪಡಿಸಿಕೊಳ್ಳುವ ಸಲುವಾಗಿ ಮತ್ತೆ ಕೀವ್ ಮೇಲೆ ದಾಳಿ ನಡೆಸುವ ಎಲ್ಲಾ ಸಾಧ್ಯತೆಗಳು ಇದೆ ಅಂತ ಝೆಲೆನ್ಸ್ಕಿ ಹೇಳಿದ್ದಾರೆ.
ಡೊನ್ಬಾಸ್ ಪ್ರದೇಶವನ್ನ ವಶಪಡಿಸಿಕೊಳ್ಳದಂತೆ ಉಕ್ರೇನ್ ಪಡೆ ರಷ್ಯಾ ಮಿಲಿಟರಿಯೊಂದಿಗೆ ಹೋರಾಟ ಮಾಡುತ್ತದೆ. ಎಂದಿಗೂ ಕೂಡ ಉಕ್ರೇನ್ನ ಪೂರ್ವ ಭಾಗದಲ್ಲಿರುವ ಯಾವುದೇ ಪ್ರದೇಶವನ್ನು ರಷ್ಯಾಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಈ ಯುದ್ಧ ಅಂತ್ಯವಾಗುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇವೆ. ಈವರೆಗೂ ಉಕ್ರೇನ್ ಪೂರ್ವ ಭಾಗದಲ್ಲಿರುವ ಡೊನ್ಟೆಸ್ಕ್, ಡೊನ್ಬಾಸ್, ಲುಹಾನ್ಸ್ಕ್ ದಲ್ಲಿ ರಷ್ಯಾ ಪಡೆಯನ್ನ ತಡೆಯುವಲ್ಲಿ ನಮ್ಮ ಉಕ್ರೇನಿಯನ್ ಸೇನೆ ನಿರಂತರವಾಗಿ ಕಾರ್ಯನ್ಮೋಖವಾಗಿದೆ. ಸದ್ಯ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದ ನಿಯಮಗಳನ್ನ ಧಿಕ್ಕರಿಸಿದ್ದಲ್ಲದೆ ಈ ಯುದ್ಧವನ್ನ ವಿರೋಧಿಸಿ ತನ್ನ ಮಿತ್ರ ರಾಷ್ಟ್ರಗಳೇ ರಷ್ಯಾ ಜೊತೆ ಇದ್ದ ವ್ಯಾಪಾರ ವಹಿವಾಟನ್ನ ನಿರ್ಬಂಧಿಸಿದ್ದರೂ ಕೂಡ ಪುಟಿನ್ ಮಾತ್ರ ಈ ಯುದ್ಧದ ವಿಜಯ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ವಿಜಯಕ್ಕಾಗಿ ಉಕ್ರೇನ್ನ ಡೊನ್ಬಾಸ್ ಪ್ರದೇಶವನ್ನ ವಶಕ್ಕೆ ಪಡೆದುಕೊಳ್ಳಲು ಸಂಚು ರೂಪಿಸಿದ್ದಾರೆ ಅಂತ ಝೆಲೆನ್ಸ್ಕಿ ಕಿಡಿಕಾರಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ ಇಂದಿಗೆ 53 ದಿನಗಳೂ ಕಳೆದಿವೆ. ಆದ್ರೂ ಸಹ ಪುಟಿನ್ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸುವುದನ್ನ ಮಾತ್ರ ನಿಲ್ಲಿಸಿಲ್ಲ. ಉಕ್ರೇನ್ನ ಪ್ರಮುಖ ನಗರಗಳಾದ, ಮರಿಯುಪೋಲ್, ಮೈಕೋಲೇವ್, ಕೀವ್, ಖಾರ್ಕೀವ್, ಪ್ರದೇಶಗಳನ್ನೇ ಹೆಚ್ಚು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಸದ್ಯ ರಷ್ಯಾದ ದಾಳಿಗೆ ಉಕ್ರೇನ್ ಅಕ್ಷರಶಃ ನಲುಗಿ ಹೋಗಿದೆ. ಲಕ್ಷಾಂತರ ಜನರು ಜೀವ ರಕ್ಷಣೆಗಾಗಿ ಉಕ್ರೇನ್ ಬಿಟ್ಟು, ಅಕ್ಕಪಕ್ಕದ ನೆರೆ ರಾಷ್ಟ್ರಗಳಿಗೆ ಮಹಾವಲಸೆ ಹೋಗುತ್ತಿದ್ದಾರೆ. ಸಾವಿರಾರು ಜನರು ಈ ಯುದ್ಧದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ತಮ್ಮವರನ್ನ ಕಳೆದುಕೊಂಡು ಅನಾಥರಾಗಿದ್ದಾರೆ.
ಹಾಗಿದ್ದರೂ ಸಹ ರಷ್ಯಾ ಮಾತ್ರ ತನ್ನ ದಾಳಿಯನ್ನ ನಿಲ್ಲಿಸಿಲ್ಲ. ನಾಗರಿಕರನ್ನೇ ಗುರಿಯಾಗಿಸಿ ದಾಳಿಯನ್ನ ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಉಕ್ರೇನ್ ಕೂಡ ಪ್ರತಿದಾಳಿ ನಡೆಸುತ್ತಿದ್ದು, ರಷ್ಯಾ ಮಿಲಿಟರಿಗೆ ಸಾಕಷ್ಟು ನಷ್ಟವನ್ನ ಉಂಟು ಮಾಡಿದೆ. ಸುಮಾರು 20 ಸಾವಿರ ಯೋಧರನ್ನ ಉಕ್ರೇನ್ ಸೇನೆ ಹತ್ಯೆಗೈಯುವ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ.