ರೊಹಿಂಗ್ಯಾ ಮುಸ್ಲಿಮರಿಂದ ಆಗಸ್ಟ್ನಲ್ಲಿ 99 ಹಿಂದೂಗಳ ಹತ್ಯೆ
ಕಳೆದ ವರ್ಷದ ಆಗಸ್ಟ್ನಲ್ಲಿ ರೊಹಿಂಗ್ಯಾ ಮುಸ್ಲಿಂ ಗುಂಪು ಹಿಂದೂಗಳ ಸಾಮೂಹಿಕ ಹತ್ಯಾಕಾಂಡ ನಡೆಸಿರುವುದಕ್ಕೆ ಪುರಾವೆಗಳನ್ನು ಕಲೆಹಾಕಿರುವುದಾಗಿ ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳಿದೆ.
ಖಾ ಮೌಂಗ್ ಸೀಕ್ ಎಂಬ ಗ್ರಾಮದ ಸಮೀಪ ರೊಹಿಂಗ್ಯಾ ಮುಸ್ಲಿಮರು ಸುಮಾರು 99 ಹಿಂದೂಗಳನ್ನು ಕೊಂದುಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಬಾಂಗ್ಲಾದಲ್ಲಿ ರೊಹಿಂಗ್ಯಾ ಶಿಬಿರಕ್ಕೆ ಬೆಂಕಿ: ನಾಲ್ವರು ಸಾವು
ಗ್ರಾಮ ಹಾಗೂ ಬಾಂಗ್ಲಾದೇಶದ ಗಡಿ ಭಾಗದಲ್ಲಿ ನಡೆಸಿದ ಹತ್ತಾರು ಸಂದರ್ಶನಗಳನ್ನು, ವಿಧಿವಿಜ್ಞಾನ ತಜ್ಞರು ವಿಶ್ಲೇಷಿಸಿದ ಛಾಯಾಚಿತ್ರಗಳ ಪುರಾವೆಗಳ ಆಧಾರದಲ್ಲಿ ಅರಕನ್ ರೊಹಿಂಗ್ಯಾ ಸಾಲ್ವೇಷನ್ ಆರ್ಮಿ (ಎಆರ್ಎಸ್ಎ) ಬಂಡುಕೋರರು ಹಿಂದೂಗಳು ಮತ್ತು ಇತರೆ ಸಮುದಾಯಗಳ ಮೇಲೆ ಅಮಾನುಷ ದಾಳಿಯಿಂದ ಹೇಗೆ ಭೀತಿ ಹುಟ್ಟಿಸಿದ್ದರು ಎಂಬುದನ್ನು ಬಹಿರಂಗಪಡಿಸಲಾಗಿದೆ.
ಎಆರ್ಎಸ್ಎ ಉತ್ತರ ರಖಿನೆ ಪ್ರದೇಶದಲ್ಲಿ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಗಳು ಕರಾಳ ಇತಿಹಾಸವಾಗಿದ್ದು, ಅವು ಹೆಚ್ಚು ವರದಿಯಾಗಿರಲಿಲ್ಲ. ನಮ್ಮ ಇತ್ತೀಚಿನ ತನಿಖೆಗಳು ಅವುಗಳ ಮೇಲೆ ಬೆಳಕು ಚೆಲ್ಲಿವೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಬಿಕ್ಕಟ್ಟು ಸ್ಪಂದನಾ ನಿರ್ದೇಶಕಿ ತಿರಾನಾ ಹಸನ್ ತಿಳಿಸಿದ್ದಾರೆ.
2017ರ ಆಗಸ್ಟ್ 25ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಆರ್ಎಸ್ಎ ಉತ್ತರ ಮೌಂಗ್ಡಾ ಪಟ್ಟಣದ ಖಾ ಮೌಂಗ್ ಸೀಕ್ ಗ್ರಾಮಗಳ ಸಮೂಹದಲ್ಲಿರುವ ಅಹ್ ನೌಕ್ ಖಾ ಮೌಂಗ್ ಸೀಕ್ ಎಂಬ ಹಳ್ಳಿಯಲ್ಲಿರುವ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿತ್ತು.
ಮುಸ್ಲಿಮರು ಹೆಚ್ಚಿರುವ ರೊಹಿಂಗ್ಯಾ ಗ್ರಾಮ ಮತ್ತು ಬೌದ್ಧರು ಹೆಚ್ಚಿರುವ ರಖಿನೆ ಗ್ರಾಮಗಳ ಸಮೀಪದಲ್ಲೇ ಹಿಂದೂಗಳು ವಾಸಿಸುತ್ತಿದ್ದರು.
ಕಪ್ಪು ಬಟ್ಟೆ ಧರಿಸಿದ ಸಶಸ್ತ್ರಧಾರಿಗಳು ಮತ್ತು ಸ್ಥಳೀಯ ರೊಹಿಂಗ್ಯಾ ಗ್ರಾಮಸ್ಥರು ಅಲ್ಲಿದ್ದ ಹಿಂದೂ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಸುತ್ತವರೆದಿದ್ದರು. ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ದೋಚಿದ್ದರು. ಬಳಿಕ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಗ್ರಾಮದ ಹೊರವಲಯಕ್ಕೆ ಮೆರವಣಿಗೆ ಮಾಡಿಸಿದ್ದರು.
ಅಲ್ಲಿ, ಪುರುಷರನ್ನು ಮಹಿಳೆಯರು ಮತ್ತು ಮಕ್ಕಳಿಂದ ಪ್ರತ್ಯೇಕಗೊಳಿಸಿದ್ದರು. ಕೆಲವೇ ಗಂಟೆಗಳಲ್ಲಿ 53 ಹಿಂದೂ ಪುರುಷರನ್ನು ಹತ್ಯೆ ಮಾಡಿದ್ದರು.
ಎಂಟು ಹಿಂದೂ ಮಹಿಳೆಯರು ಮತ್ತು ಎಂಟು ಮಕ್ಕಳನ್ನು ಅಪಹರಿಸಲಾಗಿತ್ತು. ಅವರು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಲು ಒಪ್ಪಿದ್ದರಿಂದ ಬಿಟ್ಟುಬಿಡಲಾಯಿತು. ಕೆಲವು ದಿನಗಳ ಬಳಿಕ ಉಳಿದವರನ್ನು ಬಲವಂತವಾಗಿ ಬಂಡುಕೋರರು ತಮ್ಮೊಂದಿಗೆ ಬಾಂಗ್ಲಾದೇಶಕ್ಕೆ ಕರೆದೊಯ್ದಿದ್ದರು.
2017ರ ಅಕ್ಟೋಬರ್ನಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳ ಸಹಮತದೊಂದಿಗೆ ಅವರನ್ನು ಮ್ಯಾನ್ಮಾರ್ಗೆ ಗಡಿಪಾರು ಮಾಡಲಾಗಿತ್ತು.
ಈ ಹತ್ಯಾಕಾಂಡದಿಂದ ತಪ್ಪಿಸಿಕೊಂಡಿದ್ದ 22 ವರ್ಷದ ಮಹಿಳೆ ಬಿನ್ ಬಾಲಾ, 'ಬಂಡುಕೋರರು ಚಾಕು ಮತ್ತು ಉದ್ದನೆಯ ಕಬ್ಬಣದ ರಾಡುಗಳನ್ನು ಹಿಡಿದುಕೊಂಡಿದ್ದರು. ನಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿದ್ದರು ಮತ್ತು ಕಣ್ಣಿಗೆ ಬಟ್ಟೆ ಕಟ್ಟಿದ್ದರು. ನೀವೇನು ಮಾಡುತ್ತಿದ್ದೀರಿ ಎಂದು ಅವರನ್ನು ಕೇಳಿದೆ. ಅದಕ್ಕೆ ನೀವು ಮತ್ತು ರಖಿನೆಗಳು ಒಂದೇ. ನೀವು ಬೇರೆ ಧರ್ಮಕ್ಕೆ ಸೇರಿದವರು. ಇಲ್ಲಿ ವಾಸಿಸುವಂತಿಲ್ಲ ಎಂದರು.
ಅವರು ರೊಹಿಂಗ್ಯಾ ಭಾಷೆ ಮಾತನಾಡುತ್ತಿದ್ದರು. ನಮ್ಮ ಬಳಿ ಯಾವ ಯಾವ ವಸ್ತುಗಳಿವೆ ಕೇಳಿದರು. ಬಳಿಕ ಹೊಡೆದರು. ಹೀಗಾಗಿ ನಾನು ನನ್ನ ಚಿನ್ನಾಭರಣ ಮತ್ತು ಹಣವನ್ನೆಲ್ಲಾ ಕೊಟ್ಟುಬಿಟ್ಟೆ' ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ಗೆ ತಿಳಿಸಿದರು.