ಚುನಾವಣೆ ಹೊತ್ತಲ್ಲೇ ಬಾಂಬ್ಗಳ ಸುರಿಮಳೆ, ಇದು ಯಾರ ಕೈವಾಡ ಗೊತ್ತಾ?
ಮಧ್ಯ ಪ್ರಾಚ್ಯದಲ್ಲಿ ನೆಮ್ಮದಿ ಎಂಬುದೇ ಮಾಯವಾಗಿದ್ದು, ನೆರೆ ದೇಶಗಳೇ ಕಚ್ಚಾಡುತ್ತಿವೆ. ಅದರಲ್ಲೂ ಇರಾನ್ ಹಾಗೂ ಇರಾಕ್ ನಡುವಿನ ದಶಕಗಳ ಕದನ ಇನ್ನೂ ನಿಂತಿಲ್ಲ. ಹೀಗಿರುವಾಗಲೇ ಇರಾನ್ ವಿರುದ್ಧ ಇರಾಕ್ ಗಂಭೀರ ಆರೋಪ ಮಾಡಿದೆ. ಇನ್ನೇನು ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ನಮ್ಮ ದೇಶದಲ್ಲಿ ಇರಾನ್ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಇರಾಕ್ನ ಭದ್ರತಾ ಅಧಿಕಾರಿಗಳು ಆರೋಪಿಸಿದ್ದಾರೆ.
ಕಳೆದ 1 ವಾರದಿಂದ ಇರಾಕ್ನಲ್ಲಿ ಮೇಲಿಂದ ಮೇಲೆ ಬಾಂಬ್ ಸ್ಫೋಟಗಳು ಸಂಭವಿಸುತ್ತಿವೆ. ಜನ ಜೀವ ಕೈಲಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದರ ಹಿಂದೆ ಇರಾನ್ ಪ್ರಚೋದಿತ ಉಗ್ರರ ಕೈವಾಡ ಇದೆ ಎಂದು ಇರಾಕ್ ಆರೋಪಿಸಿದೆ.
ಸದ್ದಾಂ ಹುಸೇನ್ ಹಾಗೂ ಅಮೆರಿಕ ನಡುವೆ ಜಟಾಪಟಿ ನಡೆದು, ಯುದ್ಧ ಘೋಷಣೆ ಆದ ಬಳಿಕ ಅಂದರೆ 2 ದಶಕಗಳಿಂದಲೂ ಇರಾಕ್ನಲ್ಲಿ ನೆಮ್ಮದಿ ಮಾಯವಾಗಿದೆ. ಕೆಲವು ವರ್ಷಗಳಿಂದ ಇಲ್ಲಿ ಪರಿಸ್ಥಿತಿ ಸುಧಾರಿಸುತ್ತಿತ್ತು, ಆದರೆ ಇರಾಕ್ ಸಂಸತ್ ಚುನಾವಣೆ ಹತ್ತಿರವಾಗುತ್ತಿರುವಾಗ ಹಿಂಸೆ ಭುಗಿಲೆದ್ದಿದೆ.
ಸದ್ದಾಂ ಕಾಲದಿಂದಲೂ ಶತ್ರುಗಳು..!
ಇರಾನ್ ಹಾಗೂ ಇರಾಕ್ ಅದೆಷ್ಟು ಬದ್ಧ ಶತ್ರುಗಳು ಎಂದರೆ, ಒಬ್ಬರನ್ನ ಕಂಡರೆ ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ಅತ್ತ ಸದ್ದಾಂ ಹುಸೇನ್ ಇರಾಕ್ನ ಮೇಲೆ ನಿಯಂತ್ರಣ ಸಾಧಿಸಿ, ಇರಾನ್ ವಿರುದ್ಧ ಕೆಂಡ ಕಾರುತ್ತಿದ್ದ. 1980-88ರ ನಡುವೆ ಎರಡೂ ರಾಷ್ಟ್ರಗಳ ನಡುವೆ ಭೀಕರ ಕಾಳಗ ನಡೆದಿತ್ತು. ಆದರೆ ಸದ್ದಾಂ ಹುಸೇನ್ ಬದುಕಿದ್ದಾಗ ಇರಾಕ್ ಮೇಲುಗೈ ಸಾಧಿಸುತ್ತಿತ್ತು. ಆದರೆ ಸದ್ದಾಂ ಸತ್ತ ಬಳಿಕ ಪರಿಸ್ಥಿತಿ ಬದಲಾಗಿ ಹೋಗಿದೆ. ಇರಾಕ್ ಮೇಲೆ ಅಮೆರಿಕ ದಂಡೆತ್ತಿ ಬಂದಿತ್ತು, ಬಳಿಕ ಇರಾನ್ ಕೂಡ ಇರಾಕ್ನ ಕೆಲ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿ ಸೇನೆ ನಿಯೋಜಿಸಿದೆ. ಎರಡೂ ರಾಷ್ಟ್ರಗಳ ನಡುವೆ ದ್ವೇಷದ ಕಿಚ್ಚು ಹಾಗೇ ಉಳಿದಿದೆ.
ಇರಾನ್ ಸೇನಾ ಮುಖ್ಯಸ್ಥನ ಹತ್ಯೆ
ಇರಾನ್ ಸೇನಾ ಮುಖ್ಯಸ್ಥನಾಗಿದ್ದ ಖಾಸಿಂ ಸುಲೈಮಾನಿಯನ್ನ ಕಳೆದ ವರ್ಷ ಅಮೆರಿಕ ಹತ್ಯೆಗೈದಿತ್ತು. ಇರಾಕ್ ರಾಜಧಾನಿ ಬಾಗ್ದಾದ್ನಲ್ಲಿ ಇರಾನ್ ಸೇನಾ ಮುಖ್ಯಸ್ಥನ ಹತ್ಯೆ ನಡೆದ ಬಳಿಕ ಇರಾನ್ ಮತ್ತಷ್ಟು ರೊಚ್ಚಿಗೆದ್ದಿದೆ. ಇದು ಕೂಡ ಇರಾಕ್ ವಿರುದ್ಧ ಇರಾನ್ ಕೆಂಡವಾಗಲು ಕಾರಣ. ಇರಾನ್ಗೆ ಇಸ್ರೇಲ್ ಹೊರತುಪಡಿಸಿದರೆ ಇರಾನ್ ದೊಡ್ಡ ಶತ್ರು. ಹೀಗಾಗಿ ಇರಾಕ್ನ ಆಂತರಿಕ ನೆಮ್ಮದಿ ಕೆಡಿಸಲು ಇರಾನ್ನ ನಾಯಕರು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಇರಾನ್ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಹೊರ ಹೋದರೆ ಫಿನಿಷ್..!
ಇರಾಕ್ನಲ್ಲಿ ಯಾವಾಗ ಎಲ್ಲಿ ಬಾಂಬ್ ಸಿಡಿಯುತ್ತೋ, ಜನರ ಪ್ರಾಣಪಕ್ಷಿ ಯಾವಾಗ ಹಾರಿ ಹೋಗುತ್ತೋ ಎಂಬುದು ಗೊತ್ತೇ ಆಗಲ್ಲ. ಇರಾಕ್ನಲ್ಲಿ ಉಗ್ರರ ಉಪಟಳ ತೀವ್ರವಾಗಿದ್ದು, ಕಂಡ ಕಂಡ ಕಡೆ ಬಾಂಬ್ಗಳನ್ನ ಸ್ಫೋಟಿಸುತ್ತಿದ್ದಾರೆ. ಇತ್ತೀಚೆಗೆ ಮಾರ್ಕೆಟ್ ಒಂದರಲ್ಲಿ ರಕ್ತದೋಕುಳಿ ನಡೆಸಿ, ಹತ್ತಾರು ಜನರನ್ನ ಕೊಂದಿದ್ದರು. ಜನರು ಹೆಚ್ಚಾಗಿ ಓಡಾಡುವ ಪ್ರದೇಶಗಳನ್ನೇ ಟಾರ್ಗೆಟ್ ಮಾಡುವ ಉಗ್ರರು, ಇರಾಕ್ನಲ್ಲಿ ಮುಗ್ಧರ ಜೀವ ತೆಗೆಯುತ್ತಿದ್ದಾರೆ. ಆದರೆ ವಿದೇಶಿ ಶಕ್ತಿಗಳು ಈ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂಬ ಆರೋಪವಿದೆ.
ಮಾನವ ಹಕ್ಕುಗಳ ಉಲ್ಲಂಘನೆ..?
ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಇರಾಕ್ನಲ್ಲಿ ಬೇಳೆ ಬೇಯಿಸಿಕೊಂಡಿದ್ದೇ ಹೆಚ್ಚು. ಸದ್ದಾಂ ಹುಸೇನ್ ವಿರುದ್ಧ ಯುದ್ಧಕ್ಕೆ ಹೋದ ಅಮೆರಿಕ ಹತ್ತಾರು ವರ್ಷ ಅಲ್ಲೇ ಠಿಕಾಣಿ ಹೂಡಿತ್ತು. ಆಗ ಅನೇಕ ಬಾರಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಈಗಲೂ ಇರಾಕ್ನಲ್ಲಿ ಅಮೆರಿಕ ಸೇನೆ ಬೀಡುಬಿಟ್ಟಿದೆ. ಇದೇ ವಿಚಾರಕ್ಕೆ ಇರಾಕ್ನ ಕಂಡರೆ ಇರಾನ್ ರೊಚ್ಚಿಗೇಳುತ್ತಿದೆ. ಅವಕಾಶ ಸಿಕ್ಕರೆ ಸಾಕು ದಾಳಿಗೆ ಮುಂದಾಗುತ್ತಿದೆ. ಆದರೆ ಬಲಾಢ್ಯರ ಜಗಳದ ನಡುವೆ ಅಮಾಯಕರ ಜೀವ ಹೋಗುತ್ತಿರುವುದು ಮಾತ್ರ ದುರಂತದ ಸಂಗತಿ.