ಪಾಕಿಸ್ತಾನದಲ್ಲಿ ಜಾಗತಿಕ ಉಗ್ರ ಮಸೂದ್ ಅಜರ್ ನಾಪತ್ತೆ ಪ್ರಹಸನ
ಇಸ್ಲಾಮಾಬಾದ್, ಫೆಬ್ರವರಿ 17: ಜಾಗತಿಕ ಉಗ್ರ ಮಸೂದ್ ಅಜರ್ ಹಾಗೂ ಆತನ ಕುಟುಂಬ ಪಾಕಿಸ್ತಾನದಲ್ಲಿ ನಾಪತ್ತೆಯಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಪಾಕಿಸ್ತಾನ ಸೇನೆಯ ವಶದಲ್ಲಿದ್ದ ಮಸೂದ್ ಅಜರ್ ಹಾಗೂ ಆತನ ಕುಟುಂಬ ಕಳೆದ ಕೆಲ ದಿನಳಗಳಿಂದ ನಾಪತ್ತೆಯಾಗಿದೆ. ಮಸೂದ್ ಅಜರ್ ಬಗ್ಗೆ ಯಾವುದೇ ಸುಳಿವಿಲ್ಲ ಎಂದು ಪಾಕಿಸ್ತಾನದ ಸೇನೆ ಹೇಳಿಕೊಂಡಿದೆ.
ಜೈಷ್ ಉಗ್ರ ಸಂಘಟನೆ ಈಗ ಮಸೂದ್ ಅಜರ್ ಕೈಲಿಲ್ಲ
ಪಾಕಿಸ್ತಾನದ ವಿರುದ್ಧ ಎಫ್ಎಟಿಎಫ್ನ (ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಸಭೆ ನಡೆಯಲಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ.
ಪಾಕಿಸ್ತಾನಕ್ಕೆ ಹಿನ್ನಡೆಯಾಗಲಿದೆಯೇ?
ಪುಲ್ವಾಮಾ ದಾಳಿ ಸೇರಿ ಭಾರತದಲ್ಲಿನ ಸಾಕಷ್ಟು ವಿಧ್ವಂಸಕ ಚಟುವಟಿಕೆಗಳ ಮಾಸ್ಟರ್ ಮೈಂಡ್ ಆಗಿರುವ ಮಸೂದ್ ಅಜರ್ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಿದೆ. ಆ ಬಳಿಕ ಮಸೂದ್ ಅಜರ್ ಪಾಕಿಸ್ತಾನ ಸೇನೆಯ ವಶದಲ್ಲಿದ್ದ. ಆದರೆ ಕೆಲ ದಿನಗಳಿಂದ ಮಸೂದ್ ಅಜರ್ ಹಾಗೂ ಆತನ ಕುಟುಂಬದ ಸದಸ್ಯರು ಸೇನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.
ಪ್ಯಾರಿಸ್ನಲ್ಲಿ ನಿರ್ಣಾಯಕ ಸಭೆ
ಅಜರ್ ಹುಡುಕಾಟ ನಡೆಯುತ್ತಿದೆ ಎಂದು ಸೇನೆ ಹೇಳಿಕೊಂಡಿದ್ದರೂ ಇದು ಪಾಕಿಸ್ತಾನದ ನಾಟಕ ಎಂದು ಖಚಿತವಾಗಿದೆ. ಮುಂದಿನ ವಾರ ಪ್ಯಾರಿಸ್ನಲ್ಲಿ ಎಫ್ಟಿಎಫ್ ನಿರ್ಣಾಯಕ ಸಭೆ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಗಳೂ ನಡೆದಿದೆ. ಈ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವುದು ಅಥವಾ ಕಂದು ಬಣ್ಣದ ಪಟ್ಟಿಯಲ್ಲೇ ಮುಂದುವರೆಸುವ ಬಗ್ಗೆ ತೀರ್ಮಾನವಾಗಲಿದೆ. ಮಸೂದ್ ಅಜರ್ ನಾಪತ್ತೆಯನ್ನು ಮುಂದಿಟ್ಟುಕೊಂಡು ಭಾರತವು ಪಾಕಿಸ್ತಾನದ ವಿರುದ್ಧ ವಾದ ಮಂಡಿಸಲು ಮುಂದಾಗಿದೆ.
ಅಜರ್ನನ್ನು ಹುಡುಕಿಕೊಡಲೇ ಎಂಬ ಭಾರತ
ಮಸೂದ್ ಅಜರ್ ನಾಪತ್ತೆಯಾಗಿದ್ದಾನೆ ಎಂದು ನಾಟಕೀಯ ಹತಾಶೆ ಭಾವನೆ ತೋರುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಮಸೂದ್ ಎಲ್ಲಿದ್ದಾನೆ ಎಂಬ ಮಾಹಿತಿ ನೀಡಲೇ?, ಆತನನ್ನು ಬಂಧಿಸಿ ಭಾರತದ ವಶಕ್ಕೆ ನೀಡುತ್ತೀರಾ ಎಂದು ಪಾಕಿಸ್ತಾನವನ್ನು ಭಾರತ ಕಟುವಾಗಿ ಪ್ರಶ್ನಿಸಿದೆ. ಆದರೆ ಇದಕ್ಕೆ ಪಾಕಿಸ್ತಾದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ನಿಲುವು ಇದರಿಂದ ಸ್ಪಷ್ಟವಾಗಿದೆ ಎಂದು ಭಾರತ ಹೇಳಿದೆ.
ಪುಲ್ವಾಮಾ ದಾಳಿ ಸಂಚುಕೋರ
2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆದಿದ್ದ ಆತ್ಮಾಹುತಿ ದಾಳಿಗೆ ಮಸೂದ್ ಅಜರ್ ಪ್ರಮುಖ ಸಂಚುಕೋರನಾಗಿದ್ದ. ಪಾಕಿಸ್ತಾನದಲ್ಲಿ ಕುಳಿತುಕೊಂಡು ದಾಳಿ ನಡೆಸಿರುವ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಈ ಕುರಿತ ತನಿಖಾ ವರದಿಯನ್ನು ಕೂಡ ಪಾಕಿಸ್ತಾನ ಹಾಗೂ ವಿಶ್ವಸಂಸ್ಥೆಗೆ ಭಾರತ ಹಸ್ತಾಂತರಿಸಿತ್ತು.