ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಶಾಲೆಗೆ ಬರಬೇಡಿ ಎನ್ನುತ್ತಿರುವುದೇ ಭಯಾನಕ: ಮಲಾಲ ಟ್ವೀಟ್
ಬೋಪಾಲ್, ಫೆಬ್ರವರಿ 9: "ಹೆಣ್ಣುಮಕ್ಕಳು ಹಿಜಾಬ್ನಲ್ಲಿ ಶಾಲೆಗೆ ಬರಬೇಡಿ ಎಂದು ನಿರಾಕರಿಸುತ್ತಿರುವ ಬೆಳವಣಿಗೆಯು ತೀರಾ ಭಯಾನಕವಾಗಿದೆ," ಎಂದು ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಹೊತ್ತಿಕೊಂಡಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದದ ಕಿಡಿ ರಾಜ್ಯ-ರಾಷ್ಟ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಯನ್ನು ಹುಟ್ಟು ಹಾಕುತ್ತಿದೆ. ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿ ತಿಳಿಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಮೂರು ದಿನಗಳವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
Recommended Video
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝಾಯಿ
ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಘಟನೆ ನಂತರ ರಾಜ್ಯದಲ್ಲಿ ವಿವಾದ ಹುಟ್ಟಿಕೊಂಡಿತು. ಕಳೆದ ತಿಂಗಳು ಹುಟ್ಟಿಕೊಂಡ ವಿವಾದ ಮಂಗಳವಾರದ ಹೊತ್ತಿಗೆ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಆಕ್ರೋಶದ ಕಿಡಿಯನ್ನು ಹೊತ್ತಿಸಿತು. ಕೆಲವು ಬಲಪಂಥೀಯ ಸಂಘಟನೆಗಳು ಶಾಲಾ ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಹಿಜಾಬ್ ವಿವಾದದ ಬಗ್ಗೆ ಮಲಾಲ ಟ್ವೀಟ್:
"ಶಿಕ್ಷಣ ಮತ್ತು ಹಿಜಾಬ್ ನಡುವೆ ಯಾವುದು ಬೇಕು ಎಂಬ ಬಗ್ಗೆ ಆಯ್ಕೆ ಮಾಡಿಕೊಳ್ಳುವಂತೆ ಕಾಲೇಜುಗಳು ನಮ್ಮನ್ನು ಒತ್ತಾಯಿಸುತ್ತಿವೆ. ಹೆಣ್ಣುಮಕ್ಕಳು ಹಿಜಾಬ್ನಲ್ಲಿ ಶಾಲೆಗೆ ಬರಬಾರದು ಎಂದು ನಿರಾಕರಿಸುತ್ತಿರುವ ಬೆಳವಣಿಗೆಯು ತೀರಾ ಭಯಾನಕವಾಗಿದೆ. ಮಹಿಳೆಯರು ಧರಿಸುವ ಬಟ್ಟೆಯು ಹೆಚ್ಚಾಗಿರಬೇಕು ಅಥವಾ ಕಡಿಮೆ ಆಗಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಗಳು ಮುಂದುವರಿಯುತ್ತಿವೆ. ಭಾರತೀಯ ನಾಯಕರು ಮುಸ್ಲಿಂ ಮಹಿಳೆಯರನ್ನು ಕಡೆಗಣಿಸುವುದನ್ನು ನಿಲ್ಲಿಸಬೇಕು," ಎಂದು ಮಲಾಲ ಟ್ವೀಟ್ ಮಾಡಿದ್ದಾರೆ.
“College is forcing us to choose between studies and the hijab”.
— Malala (@Malala) February 8, 2022
Refusing to let girls go to school in their hijabs is horrifying. Objectification of women persists — for wearing less or more. Indian leaders must stop the marginalisation of Muslim women. https://t.co/UGfuLWAR8I
ಮಧ್ಯಪ್ರದೇಶ, ಪುದುಚೇರಿಯಲ್ಲೂ ಹಿಜಾಬ್ ವಿವಾದ:
ಕರ್ನಾಟಕದ ಹಿಜಾಬ್ ವಿವಾದ ಮಧ್ಯಪ್ರದೇಶದಲ್ಲೂ ಸುದ್ದಿ ಆಗಿದ್ದು, ಪ್ರೌಢಶಿಕ್ಷಣ ಸಚಿವ ಇಂದರ್ ಸಿಂಗ್ ಪರಮರ್ ಶಾಲೆಗಳಲ್ಲಿ ಶಿಸ್ತು ಮತ್ತು ಸಮವಸ್ತ್ರಕ್ಕೆ ಗೌರವ ನೀಡುವಂತೆ ಹೇಳಿದ್ದಾರೆ. ಹಿಜಾಬ್ ಮೇಲಿನ ನಿರ್ಬಂಧವನ್ನು ಬೆಂಬಲಿಸಿರುವ ಸಚಿವರು, ಶಾಲೆಗಳಲ್ಲಿ ಶಿಸ್ತು ಪಾಲನೆಗೆ ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ. "ಹಿಜಾಬ್ ಎಂಬುದು ಸಮವಸ್ತ್ರದ ಭಾಗವಲ್ಲ, ಶಾಲೆಗಳಲ್ಲಿ ಅದನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಜನರು ಸಂಪ್ರದಾಯವನ್ನು ತಮ್ಮ ಮನೆಯಲ್ಲಿ ಪಾಲಿಸಬೇಕೇ ವಿನಃ ಶಾಲೆಗಳಲ್ಲಿ ಅಲ್ಲ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಧರಿಸುವಂತೆ ನಾವು ಶಿಸ್ತು ಪಾಲನೆ ಮಾಡಬೇಕಿದೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಸುಮಾರು 1.25 ಲಕ್ಷ ಸರ್ಕಾರಿ ಶಾಲೆಗಳನ್ನು ಹೊಂದಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಶಾಲಾ ಸಮವಸ್ತ್ರ ಒದಗಿಸಲಾಗಿದೆ. ಒಂದರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ರಾಜ್ಯ ಸರ್ಕಾರ ಹಣ ನೀಡುತ್ತದೆ.
ಪುದುಚೇರಿಯಲ್ಲೂ ಸುದ್ದಿಯಾದ ಹಿಜಾಬ್ ವಿವಾದ:
ಪುದುಚೇರಿಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯು ತಲೆಗೆ ಸ್ಕಾರ್ಫ್ ಅನ್ನು ಧರಿಸಿರುವುದಕ್ಕೆ ವಿರೋಧಿಸಿದ್ದಾರೆ ಎಂಬ ಬಗ್ಗೆ ವಿದ್ಯಾರ್ಥಿಗಳ ಗುಂಪು ಮತ್ತು ಇತರೆ ಸಂಘಟನೆಗಳು ಶಿಕ್ಷಣ ನಿರ್ದೇಶನಾಲಯದ ವಕ್ತಾರರಿಗೆ ದೂರು ನೀಡಿವೆ ಎಂದು ವಕ್ತಾರರು ತಿಳಿಸಿದ್ದಾರೆ. ಅಸಲಿಗೆ ವಾಸ್ತವದಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಶಾಲೆಯಿಂದ ಮಾಹಿತಿ ಕೇಳಿದ್ದೇವೆ. ಅದನ್ನು ತಿಳಿದ ನಂತರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದು, ಈಗ ಆಕ್ಷೇಪಣೆ ಏಕೆ ಬಂದಿತು ಎಂದು ಎಡ-ಪಂಥೀಯ ಬೆಂಬಲಿತ ವಿದ್ಯಾರ್ಥಿ ಫೆಡರೇಶನ್ ಆಫ್ ಇಂಡಿಯಾದ ಸ್ಥಳೀಯ ಮುಖ್ಯಸ್ಥರು ಪ್ರಶ್ನಿಸಿದ್ದಾರೆ. ವೀರಂಪಟ್ಟಿನಂ, ಎಂಬಾಲಂ ಮತ್ತು ತಿರುಕನೂರ್ನ ಕೆಲವು ಶಾಲೆಗಳು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ನಡೆಸಿದ ರೀತಿಯ ಕಸರತ್ತನ್ನು ಪ್ರೋತ್ಸಾಹಿಸುತ್ತಿವೆ ಎಂಬ ದೂರುಗಳು ಬಂದಿವೆ ಎಂದು ಅವರು ದೂಷಿಸಿದ್ದಾರೆ.
2012ರಲ್ಲಿ ಮಲಾಲ ಮೇಲೆ ಫೈರಿಂಗ್:
ಪಾಕಿಸ್ತಾನದಲ್ಲಿ ಜನಿಸಿದ ಮಲಾಲ ಜಾಗತಿಕ ಮಟ್ಟದಲ್ಲಿ ಮಹಿಳಾ ಶಿಕ್ಷಣದ ಹಕ್ಕಿನ ಬಗ್ಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 2012ರಲ್ಲಿ ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಮಲಾಲ ಮೇಲೆ ತಾಲಿಬಾನ್ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಅಂದು ಮಲಾಲರನ್ನು ಬರ್ಮಿಂಗ್ ಹ್ಯಾಮ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ನೀಡಿದ ಚಿಕಿತ್ಸೆ ಯಶಸ್ವಿಯಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತು. ತದನಂತರ ಹೆಣ್ಣು ಮಗುವಿಗೆ ಶಿಕ್ಷಣಕ್ಕಾಗಿ ತಮ್ಮ ಹೋರಾಟ ಮುಂದುವರೆಸಿದರು.
ಪ್ರತಿಯೊಬ್ಬ ಹೆಣ್ಣು ತಮ್ಮ ಆಯ್ಕೆಯ ಶಿಕ್ಷಣವನ್ನು ಪಡೆಯುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಮಲಾಲ ಟ್ರಸ್ಟ್ ಅನ್ನು ಸ್ಥಾಪಿಸಿದರು. ತಂದೆ ನೆರವಿನಿಂದ ಚಾರಿಟಿ ತೆರೆದರು. ಅವರ ಕೆಲಸವನ್ನು ಗುರುತಿಸಿ, 2014ರ ಡಿಸೆಂಬರ್ ತಿಂಗಳಿನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದು, 2020ರಲ್ಲಿ ಪದವಿ ಪಡೆದರು.