ಯುದ್ಧ ಮುಗಿಯಿತು, ಈಗೇನಿದ್ದರೂ ಮಾತುಕತೆ ಸಮಯ..!
ಛಿದ್ರ ಛಿದ್ರವಾಗಿರುವ ಕಟ್ಟಡಗಳು. ಕಂಡ ಕಂಡಲ್ಲಿ ಬಿದ್ದಿರುವ ಮೃತದೇಹಗಳು. ಅಂದಹಾಗೆ ಇದು ಸ್ಮಶಾನದ ದೃಶ್ಯವಲ್ಲ. ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಕಿತ್ತಾಟದಲ್ಲಿ ಅನಾಥವಾಗಿರುವ ನಗೊರ್ನೊ-ಕರಬಾಖ್ ಪ್ರದೇಶದ ಕರುಣಾಜನಕ ಸ್ಥಿತಿ. 2 ತಿಂಗಳ ಕಾಲ ನಿರಂತರವಾಗಿ ಕಚ್ಚಾಡಿದ್ದ ಅರ್ಮೇನಿಯ-ಅಜೆರ್ಬೈಜಾನ್ ಶಾಂತಿ ಮಂತ್ರ ಜಪಿಸಿ ಯುದ್ಧ ಮುಗಿಸಿವೆ. ಆದರೆ ಯುದ್ಧದಿಂದ ಸಂಭವಿಸಿದ ದುರಂತಗಳು ಹಾಗೂ ನಷ್ಟವನ್ನ ತುಂಬಿಕೊಡುವುದು ಯಾರು ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.
ರಷ್ಯಾ ಮಧ್ಯಸ್ಥಿಕೆಯಲ್ಲಿ ಅರ್ಮೇನಿಯ ಸೇನೆ ನಗೊರ್ನೊ-ಕರಬಾಖ್ ಪ್ರದೇಶ ಬಿಟ್ಟು ದೂರ ಓಡಿದೆ. ಆದರೆ ಅಲ್ಲಿ ಉಂಟಾದ ನಷ್ಟ ಸಾವಿರಾರು ಕೋಟಿ ಮೊತ್ತದಷ್ಟು. ಇದನ್ನು ಸರಿಪಡಿಸಲು ಖುದ್ದು ರಷ್ಯಾ ಸೇನೆ ಎಂಟ್ರಿ ಕೊಟ್ಟಿದೆ. ನವೆಂಬರ್ 9ರಂದು ನಡೆದಿದ್ದ ಈ ಶಾಂತಿ ಒಪ್ಪಂದದ ಅನ್ವಯ ಅರ್ಮೇನಿಯ ಸೇನೆ ಹಾಗೂ ಅರ್ಮೇನಿಯ ನಿವಾಸಿಗಳು ನಗೊರ್ನೊ ಹಾಗೂ ಕರಬಾಖ್ ಪ್ರದೇಶವನ್ನು ಬಿಟ್ಟು ಹೊರಡಬೇಕಿತ್ತು.
ಮುಗ್ಧರ ಬಲಿ ಪಡೆದ ಯುದ್ಧ, ಮೆಹದಿ -ಮೆಲೆಕ್ ದುರಂತ ಪ್ರೇಮ
ಈಗಾಗಲೇ ಬಹುತೇಕ ಆ ಕೆಲಸ ನೆರವೇರಿದ್ದು, ಇದಾದ ಬಳಿಕ ಅಜೆರ್ಬೈಜಾನ್ ಸೇನೆ ನಗೊರ್ನೊ-ಕರಬಾಖ್ ಪ್ರದೇಶವನ್ನು ವಶಕ್ಕೆ ಪಡೆದಿದೆ. ತನ್ನ ವಶಕ್ಕೆ ಪಡೆದ ನಂತರ ಮರುನಿರ್ಮಾಣ ಕೆಲಸಗಳು ಸಾಗಿದ್ದು, ಈ ಕಾರ್ಯಕ್ಕೆ ರಷ್ಯಾ ನೆರವಾಗುತ್ತಿದೆ. ಮತ್ತೊಂದೆಡೆ ತನಗೆ ಉಂಟಾಗಿರುವ ನಷ್ಟವನ್ನು ಸರಿಪಡಿಸಲು ಅರ್ಮೇನಿಯ ವಿರುದ್ಧ ಅಜೆರ್ಬೈಜಾನ್ ಕೋರ್ಟ್ನಲ್ಲಿ ಸುಮಾರು 70 ಸಾವಿರ ಕೋಟಿ ಮೊತ್ತದ ಮೊಕದ್ದಮೆ ಹೂಡಲು ಮುಂದಾಗಿದೆ.
ಅರ್ಮೇನಿಯ ಒಳಗೆ ನುಗ್ಗಿತ್ತು ರಷ್ಯಾ ಸೇನೆ..!
ಈ ಹಿಂದೆಯೇ ರಷ್ಯಾ ಸೇನೆ ಕಾರ್ಯಾಚರಣೆ ಬಗ್ಗೆ ಹಿಂಟ್ ಸಿಕ್ಕಿತ್ತು. ತನ್ನ ಮಾತನ್ನು ಕೇಳದ ಅರ್ಮೇನಿಯ, ಅಜೆರ್ಬೈಜಾನ್ಗೆ ಪಾಠ ಕಲಿಸಲು ರಷ್ಯಾ ಪ್ಲಾನ್ ಮಾಡಿತ್ತು. ಪ್ಲಾನ್ ಪ್ರಕಾರ ರಷ್ಯಾ ಸೇನೆ ಅರ್ಮೇನಿಯ ಒಳಗೆ ನುಗ್ಗಿತ್ತು. ಅರ್ಮೇನಿಯ ಪರಿಸ್ಥಿತಿ ಹತೋಟಿಗೆ ತರುವ ನೆಪದಲ್ಲಿ ಅರ್ಮೇನಿಯದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿತ್ತು. ಬಳಿಕ ಅರ್ಮೇನಿಯ ನಾಯಕರು ಹೆದರಿಕೊಂಡು ಕದನವಿರಾಮ ಘೋಷಿಸಿದ್ದರು. ಅಷ್ಟಕ್ಕೂ 3 ದಶಕಗಳ ಹಿಂದೆ ಅರ್ಮೇನಿಯ-ಅಜೆರ್ಬೈಜಾನ್ ರಷ್ಯಾ ಭಾಗವಾಗಿದ್ದ ದೇಶಗಳು. ಸೋವಿಯತ್ ಒಕ್ಕೂಟದ ಪ್ರಾಂತ್ಯಗಳಾಗಿದ್ದ ಅರ್ಮೇನಿಯ-ಅಜೆರ್ಬೈಜಾನ್ ಸೋವಿಯತ್ ವಿಭಜನೆ ಬಳಿಕ ಬೇರೆ ಬೇರೆ ದೇಶಗಳಾದವು. ಹೀಗಾಗಿ ರಷ್ಯಾ ಈ ಎರಡೂ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ ಎಂಬುದು ವಿರೋಧಿಗಳ ಆರೋಪವಾಗಿದೆ.
ರಷ್ಯಾ ಮಾತಿಗೆ ಒಪ್ಪಿದ್ದೇ ಆಶ್ಚರ್ಯ..!
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಧ್ಯೆ ಯುದ್ಧ ಆರಂಭವಾದ ದಿನದಿಂದಲೇ ವಿಶ್ವದ ಹಲವು ದೇಶಗಳ ನಾಯಕರು ಶಾಂತಿ ಮಾತುಕತೆಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ರಷ್ಯಾ ಜೊತೆ ನಡೆದ ಮಾತುಕತೆಗೆ ಬೆಲೆ ಕೊಟ್ಟು ಯುದ್ಧ ನಿಲ್ಲಿಸುತ್ತಿದ್ದೇವೆ ಎಂದು ಎರಡೂ ರಾಷ್ಟ್ರಗಳು ಹೇಳಿರಬಹುದು. ಆದರೆ ತಿಂಗಳ ಹಿಂದೆಯೂ ಇದೇ ರೀತಿ ಶಾಂತಿ ಒಪ್ಪಂದ ನಡೆದಿತ್ತು. ಖದ್ದು ರಷ್ಯಾ ಅಧ್ಯಕ್ಷ ಪುಟಿನ್ ಆದೇಶದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಉನ್ನತ ಮಟ್ಟದ ಸಭೆ ನಡೆದು ಯುದ್ಧ ನಿಲ್ಲಿಸಲು ಒಪ್ಪಿಸಿದ್ದರು. ಆದರೆ ಹೀಗೆ ಶಾಂತಿ ಮಾತುಕತೆ ನಡೆದು 1 ದಿನ ಕಳೆಯುವ ಒಳಗೆ ಎರಡೂ ರಾಷ್ಟ್ರಗಳು ಮತ್ತೆ ಕಿತ್ತಾಡಿದ್ದವು. ಭೀಕರವಾದ ದಾಳಿ, ಪ್ರತಿದಾಳಿಯೂ ನಡೆದಿತ್ತು. ಈಗ ಮತ್ತೆ ರಷ್ಯಾ ನೇತೃತ್ವದಲ್ಲೇ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಾಯಕರು ಕದನ ವಿರಾಮಕ್ಕೆ ಒಪ್ಪಿದ್ದು, ದಿಢೀರ್ ಯುದ್ಧ ಸ್ಫೋಟಿಸುವ ಸಾಧ್ಯತೆ ಇದೆ.
ತಮ್ಮ ಮನೆಗೆ ಬೆಂಕಿ ಹಚ್ಚುತ್ತಿರುವ ಜನ, ಕಾರಣ ಮಾತ್ರ ಕರುಣಾಜನಕ
ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ. ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ಸಾವಿರಾರು ಅಮಾಯಕ ಜೀವಗಳು ಬಲಿಯಾಗಿವೆ.
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ. ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.