ಶ್ರೀಲಂಕಾದಲ್ಲಿ ರಾಜಪಕ್ಸೆಗೆ ಸೋಲು, ತಮಿಳರಿಂದ ಹರ್ಷೋದ್ಗಾರ
ಕೊಲಂಬೋ, ಜ.9: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದ ಸೋಲು ಖಚಿತವಾದ ಬೆನ್ನಲ್ಲೇ ಅಧ್ಯಕ್ಷ ಸ್ಥಾನದಿಂದ ಮಹಿಂದಾ ರಾಜಪಕ್ಸೆ ಕೆಳಗಿಳಿದಿದ್ದಾರೆ. ಅಧಿಕೃತ ನಿವಾಸವನ್ನು ತೊರೆದಿದ್ದಾರೆ ಎಂದು ಅವರ ಮಾಧ್ಯಮ ವಕ್ತಾರರು ಘೋಷಿಸಿದ್ದಾರೆ.
ಜನ ನೀಡಿರುವ ಆದೇಶಕ್ಕೆ ತಲೆಬಾಗಿ ಅಧ್ಯಕ್ಷ ರಾಜಪಕ್ಸ ಅವರು ಟೆಂಪಲ್ ಟ್ರೀಸ್ ನಿವಾಸವನ್ನು ತೊರೆದಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಅಂತಿಮ ಫಲಿತಾಂಶ ಪ್ರಕಟಣೆಗೂ ಮುನ್ನ ರಾಜಪಕ್ಸೆ ಅವರು ಸಿರಿಸೇನಾ ವಿರುದ್ಧ ಸುಮಾರು 4,00,000ಕ್ಕೂ ಅಧಿಕ ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದಾರೆ. [ರಾಜಪಕ್ಸೆ ಪರ ಪ್ರಚಾರ, ಸಲ್ಲೂ ವಿರುದ್ಧ ತಮಿಳರ ಪ್ರತಿಭಟನೆ]
ತಮಿಳರ ಹರ್ಷ: ರಾಜಪಕ್ಸೆ ಅವರಿಗೆ ಹ್ಯಾಟ್ರಿಕ್ ಗೆಲುವು ಕೈತಪ್ಪಿದ್ದಕ್ಕೆ ತಮಿಳು ಮನೀಲಾ ಕಾಂಗ್ರೆಸ್ ಹಾಗೂ ತಮಿಳುನಾಡಿನ ಕಾಂಗ್ರೆಸ್ ಪಕ್ಷ ಹರ್ಷ ವ್ಯಕ್ತಪಡಿಸಿವೆ. ಶ್ರೀಲಂಕಾದಲ್ಲಿರುವ ತಮಿಳರ ಹಿತ ಕಾಯುವ ಭರವಸೆ ನೀಡಿರುವ ಮೈತ್ರಿಪಾಲ ಸಿರಿಸೇನಾ ಅವರಿಂದ ಉತ್ತಮ ಆಡಳಿತದ ನಿರೀಕ್ಷೆಯಿದೆ ಎಂದು ತಮಿಳು ಮನೀಲ ಕಾಂಗ್ರೆಸ್ ನಾಯಕ ಬಿಎಸ್ ಜ್ಞಾನ ದೇಶಿಕನ್ ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಮಾರು 19 ಜನ ಸ್ಪರ್ಧಿಗಳಿದ್ದರು. ಅದರೆ, ಮುಖ್ಯವಾಗಿ 69 ವರ್ಷ ವಯಸ್ಸಿನ ರಾಜಪಕ್ಸ ಹಾಗೂ 63 ವರ್ಷ ವಯಸ್ಸಿನ ಸಿರಿಸೇನಾ ನಡುವೆ ಪೈಪೋಟಿ ಇತ್ತು. ಶೇ 65 ರಿಂದ 70 ರಷ್ಟು ಮತದಾನ ಕಂಡಿದ್ದ ಚುನಾವಣೆ ಫಲಿತಾಂಶ ಶುಕ್ರವಾರ ಹೊರ ಬಿದ್ದಿದೆ.
ಇನ್ನೂ ಎರಡು ವರ್ಷ ಅಧಿಕಾರ ಅವಧಿ ಇದ್ದರೂ ಅವಧಿಗೆ ಮುನ್ನ ಚುನಾವಣೆ ಘೋಷಿಸಿ ರಾಜಪಕ್ಸೆ ಅವರು ತಮ್ಮ ಸೋಲಿಗೆ ತಾವೇ ಮುನ್ನಡಿ ಬರೆದುಕೊಂಡಿದ್ದಾರೆ. ಶ್ರೀಲಂಕಾದಲ್ಲಿ 2005ರಿಂದ ಅಧಿಕಾರದಲ್ಲಿದ್ದ ರಾಜಪಕ್ಸೆ ತಮಿಳರ ಹಿತಕಾಯದೆ ವಿರೋಧ ಕಟ್ಟಿಕೊಂಡಿದ್ದು ಮುಳುವಾಯಿತು ಎನ್ನಲಾಗಿದೆ.
ದ್ವೀಪರಾಷ್ಟ್ರದಲ್ಲಿ ಪ್ರತ್ಯೇಕ ತಮಿಳು ಈಳಂ ಸ್ಥಾಪನೆ ಆಗ್ರಹಕ್ಕಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ತಮಿಳು ಟೈಗರ್ಸ್ ಗಳ ಹುಟ್ಟು ಅಡಗಿಸಿ ಮತ್ತೊಮ್ಮೆ ರಾಜ್ಯಭಾರ ಮಾಡುವ ಕನಸು ಹೊತ್ತಿದ್ದ ರಾಜಪಕ್ಸಗೆ ನಿರಾಸೆಯಾಗಿದೆ.
ಸ್ವಜನಪಕ್ಷಪಾತ, ಭ್ರಷ್ಟಾಚಾರ, ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ವಿಫಲವಾಗಿದ್ದು ರಾಜಪಕ್ಸೆ ಸೋಲಿಗೆ ಕಾರಣ ಎನ್ನಲಾಗಿದೆ. ರಾಜಪಕ್ಸೆ ಇಬ್ಬರು ಸೋದರರಾದ ಗೊತಭಾಯ, ಬಸಿಲ್ ಪ್ರಮುಖ ಸಚಿವ ಸ್ಥಾನ ಪಡೆದುಕೊಂಡಿದ್ದರು.
ಈಗ ಹೊಸ ಅಧ್ಯಕ್ಷ ಪಟ್ಟಕ್ಕೇರಲು ಸಿದ್ದವಾಗಿರುವ ಸಿರಿಸೇನಾ ಅವರಿಗೆ ಪ್ರಮುಖ ವಿಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಬೆಂಬಲವೂ ಸಿಕ್ಕಿದೆ. ಜೆಎಚ್ ಯು, ಬೌದ್ಧ ಸನ್ಯಾಸಿಗಳ ಗುಂಪು, ತಮಿಳರ ಬೆಂಬಲದೊಂದಿಗೆ ಯಾವ ರೀತಿ ಬದಲಾವಣೆ ತರುತ್ತಾರೋ ಕಾದು ನೋಡಬೇಕಿದೆ.(ಏಜೆನ್ಸೀಸ್)