ರಾಜ್ ನಾಥ್ ಸಿಂಗ್ ರಫೇಲ್ ಪೂಜೆಗೆ ಪಾಕ್ ಸೇನಾ ವಕ್ತಾರ ಬೆಂಬಲ
ಇಸ್ಲಾಮಾಬಾದ್, ಅಕ್ಟೋಬರ್ 11: ಫ್ರಾನ್ಸ್ ನಲ್ಲಿ ರಫೇಲ್ ಯುದ್ಧ ವಿಮಾನಕ್ಕೆ 'ಆಯುಧ ಪೂಜೆ' ಮಾಡಿ, ಭಾರೀ ಟೀಕೆ ಎದುರಿಸುತ್ತಿದ್ದಾರೆ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್. ಆದರೆ ಗುರುವಾರ ಪಾಕಿಸ್ತಾನದ ಸೇನಾ ವಕ್ತಾರ ಅಸೀಫ್ ಘಫೂರ್, "ಇದರಲ್ಲಿ ತಪ್ಪೇನಿಲ್ಲ" ಎಂದಿದ್ದಾರೆ. "ರಫೇಲ್ ಪೂಜೆಯಲ್ಲಿ ಏನೂ ತಪ್ಪಿಲ್ಲ, ಆಯಾ ಧರ್ಮದ ಆಧಾರದಲ್ಲಿ ಇದು ಆಗುತ್ತದೆ." ಎಂದು ಹೇಳಿದ್ದಾರೆ.
"ರಫೇಲ್ ಪೂಜೆಯಲ್ಲಿ ತಪ್ಪಿಲ್ಲ. ಅದು ಆಯಾ ಧರ್ಮದ ಅನುಸಾರ ನಡೆಯುತ್ತದೆ. ಮತ್ತು ಅದನ್ನು ಗೌರವಿಸಬೇಕು. ದಯವಿಟ್ಟು ನೆನಪಿಟ್ಟುಕೊಳ್ಳಿ, ಇದು ಬರೀ ಯಂತ್ರ ಅಲ್ಲ. ಆದರೆ ಇದರಲ್ಲಿ ಸ್ಪರ್ಧಾತ್ಮಕತೆ, ಪ್ಯಾಷನ್ ವಿಷಯ ಇದ್ದು, ಮನುಷ್ಯರೇ ಆ ಯಂತ್ರವನ್ನು ನಿರ್ವಹಿಸುತ್ತಾರೆ. ನಮ್ಮ ಪಾಕಿಸ್ತಾನ ವಾಯು ಸೇನೆಯ ಶಹೀನ್ಸ್ ಬಗ್ಗೆ ಹೆಮ್ಮೆ ಇದೆ" ಎಂದು ಘಫೂರ್ ಗುರುವಾರ ಟ್ವೀಟ್ ಮಾಡಿದ್ದಾರೆ.
ತಿಲಕವಿಟ್ಟು, ಓಂ ಬರೆದು ರಫೇಲ್ ಸೇರ್ಪಡೆ: ತರ್ಕಕ್ಕೆ ನಿಲುಕದ ಇದರ ಹಿಂದಿನ ಔಚಿತ್ಯ!
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನ ಮಾನವನ್ನು ರದ್ದುಗೊಳಿಸಿದ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಿಗುವಿನ ವಾತಾವರಣ ಇದೆ. ಇಂಥ ಸನ್ನಿವೇಶದಲ್ಲಿ ಘಫೂರ್ ಈ ಹೇಳಿಕೆ ನೀಡಿದ್ದಾರೆ. ಫ್ರಾನ್ಸ್ ನಿರ್ಮಿತ ಮೂವತ್ತಾರು ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದು ವಿಮಾನದ ಡೆಲಿವರಿಯನ್ನು ಅಕ್ಟೋಬರ್ ಎಂಟನೇ ತಾರೀಕು ಪಡೆದಿದ್ದು, ಅಂದು ವಿಜಯ ದಶಮಿ ಇತ್ತು. ಆ ಕಾರಣಕ್ಕೆ 'ಆಯುಧ ಪೂಜೆ' ಮಾಡಿದ್ದರು.
ರಫೇಲ್ ಯುದ್ಧ ವಿಮಾನದ ಮೇಲೆ 'ಓಂ' ಬರೆದು, ಹೂವು ಹಾಕಿ, ತೆಂಗಿನಕಾಯಿ ಮತ್ತು ನಿಂಬೆಹಣ್ಣು ಒಡೆದು ದೃಷ್ಟಿ ನಿವಾರಣೆ ಪೂಜೆ ಮಾಡಿದ್ದರು ರಾಜ್ ನಾಥ್ ಸಿಂಗ್. ಇದಾದ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು 'ತಮಾಷೆ' ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದರು.
ಇಂಥ ಯುದ್ಧ ವಿಮಾನದಲ್ಲಿ ಪ್ರಯಾಣಿಸುವ ಕನಸನ್ನೂ ಕಂಡಿರಲಿಲ್ಲ: ರಾಜನಾಥ್ ಸಿಂಗ್
ಇನ್ನು ಕಾಂಗ್ರೆಸ್ ನ ಮತ್ತೊಬ್ಬ ನಾಯಕ ಉದಿತ್ ರಾಜ್, ಭಾರತದಲ್ಲಿ 'ಮೂಢನಂಬಿಕೆ' ಕೊನೆಯಾದ ದಿನ ದೇಶದಲ್ಲಿ ಸ್ವಂತ ಯುದ್ಧ ವಿಮಾನಗಳ ತಯಾರಿಕೆ ಶುರು ಆಗುತ್ತದೆ ಎಂದಿದ್ದಾರೆ.