ಮಾರಿದರು, ಅತ್ಯಾಚಾರ ಎಸಗಿದರು: 'ನೊಬೆಲ್ ಶಾಂತಿ' ಪುರಸ್ಕೃತೆಯ ದಾರುಣ ಕಥೆ
ಬಾಗ್ದಾದ್, ಅಕ್ಟೋಬರ್ 5: ಆಕೆಯ ವಯಸ್ಸು ಆಗ ಅಂದಾಜು 19. ಇರಾಕ್ ದೇಶದ ಸಿಂಜಾರ್ ಪ್ರಾಂತ್ಯದ ಕೋಚೋ ಎಂಬ ಗ್ರಾಮದಲ್ಲಿ ಹುಟ್ಟಿದ ಆಕೆಯದು ಯಜಿದಿ ಸಮುದಾಯದ ದೊಡ್ಡ ಕೂಡು ಕುಟುಂಬ. ಎಲ್ಲರೂ ಕುರ್ದಿಶ್ ಭಾಷೆ ಮಾತನಾಡುವವರು. ಸಿರಿಯಾದ ಗಡಿಯಲ್ಲಿರುವ ಹಳ್ಳಿ ಅದು. ಆಗಿನ್ನೂ ಆಕೆ ವಿದ್ಯಾರ್ಥಿನಿ. ಓದು, ಕುಟುಂಬದ ಹೊರತಾಗಿ ಬೇರೇನೂ ಅಷ್ಟಾಗಿ ತಿಳಿಯದ ವಯಸ್ಸು.
2014ರ ಆಗಸ್ಟ್ನಲ್ಲಿ ಆಕೆ, ಆಕೆಯ ಕುಟುಂಬ ಮತ್ತು ಇಡೀ ಗ್ರಾಮ ಬೆಚ್ಚಿಬಿದ್ದಿತು. ಯಜಿದಿ ಸಮುದಾಯವನ್ನು ಸುತ್ತುವರಿದಿದ್ದ ಇಸ್ಲಾಮಿಕ್ ಸ್ಟೇಟ್ನ ಉಗ್ರರು 600ಕ್ಕೂ ಹೆಚ್ಚು ಜನರನ್ನು ಬರ್ಬರವಾಗಿ ಕೊಂದು ಹಾಕಿದರು. ಕೊಲೆಯಾದವರಲ್ಲಿ ಆಕೆಯ ಸಹೋದರರು ಮತ್ತು ಮಲಸಹೋದರರೂ ಸೇರಿದ್ದರು. ಪುರುಷರನ್ನು ಮನಸೋಇಚ್ಛೆ ಗುಂಡಿಕ್ಕಿ ಕೊಂದ ಉಗ್ರರು, ಯುವತಿಯರನ್ನು ಮತ್ತು ಮಹಿಳೆಯರನ್ನು ಗುಲಾಮಗಿರಿಗಾಗಿ ಹೊತ್ತೊಯ್ದರು.
ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ
ಹೀಗೆ ಇರಾಕ್ನಲ್ಲಿನ ಐಎಸ್ ಉಗ್ರರು ಹೊತ್ತೊಯ್ದು ಸೆರೆಯಲ್ಲಿಟ್ಟ 6,700ಕ್ಕೂ ಹೆಚ್ಚು ಯಜಿದಿ ಮಹಿಳೆಯರಲ್ಲಿ ನಾದಿಯಾ ಮುರದ್ ಒಬ್ಬರು. ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರದ ಗೌರವನ್ನು ಹಂಚಿಕೊಂಡಿರುವ ನಾದಿಯಾ ಮುರದ್ ಅವರ ಬದುಕು ಬಲು ದುರಂತಮಯ. ಅಷ್ಟೇ, ಸಾಹಸಮಯ ಮತ್ತು ಸಿನಿಮೀಯ ಕೂಡ.
|
ಹಿಂಸಿಸಿದರು, ಅತ್ಯಾಚಾರ ಎಸಗಿದರು
ಕೋಚೋ ಗ್ರಾಮದಿಂದ ಅಪಹರಣಕ್ಕೆ ಒಳಗಾದ ಮುರದ್, ತನ್ನಂದೆ ಬಂಧನಕ್ಕೆ ಒಳಗಾದ ಸಾವಿರಾರು ಮಹಿಳೆಯರ ಜತೆ ಬಂದು ಬಿದ್ದಿದ್ದು ಉಗ್ರರ ಸ್ವರ್ಗವಾಗಿದ್ದ ಮೊಸುಲ್ ನಗರಕ್ಕೆ. ಅಲ್ಲಿ ಗುಲಾಮಗಿರಿಗೆ ಆಕೆಯನ್ನು ನೂಕಲಾಯಿತು. ಉಗ್ರರು ಮೈಗೆ ಉರಿಯುವ ಸಿಗರೇಟ್ ಚುಚ್ಚಿ ಹಿಂಸಿಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮೇಲಿಂದ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ಅತ್ಯಂತ ಯಾತನಾಮಯ ಬದುಕು ಅವರದ್ದಾಗಿತ್ತು.
ಕ್ಯಾನ್ಸರ್ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ
Array |
ಮದುವೆಯಾದ ಉಗ್ರ
ಇತರೆ ಬಂಧಿತ ಯಜಿದಿಗಳಂತೆಯೇ ಉಗ್ರನೊಬ್ಬ ಮುರದ್ ಅವರನ್ನು ಮದುವೆಯಾದ. ಆತ ಮನಬಂದಂತೆ ಥಳಿಸುತ್ತಿದ್ದ. ಮೇಕಪ್ ಹಚ್ಚಿಕೊಳ್ಳುವಂತೆ, ಬಿಗಿಯಾದ ಉಡುಪುಗಳನ್ನು ಧರಿಸುವಂತೆ ಬಲವಂತ ಮಾಡುತ್ತಿದ್ದ. ತಮ್ಮನ್ನು ಅಪಹರಿಸಿದಾಗ ಮೊದಲು ಅವರು ಮಾಡಿದ ಕೆಲಸವೆಂದರೆ ಎಲ್ಲರನ್ನೂ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದು ಎಂದು ಮುರದ್ 2016ರಲ್ಲಿ ಭಾಷಣವೊಂದರಲ್ಲಿ ಹೇಳಿಕೊಂಡಿದ್ದರು.
ಅರ್ಥಶಾಸ್ತ್ರದ ನೊಬೆಲ್ ರೇಸಿನಲ್ಲಿ ರಘುರಾಮ್ ರಾಜನ್ ಮುಂದು!
Array |
ನೆರಮನೆಯವರ ಸಹಾಯ
ಆದರೆ, ಬಂಧನದಲ್ಲಿ ಇರಿಸಿಕೊಂಡಾತ ಒಮ್ಮೆ ಮನೆಗೆ ಬೀಗ ಹಾಕದೆ ಹೋಗಿದ್ದು, ಮುರದ್ಗೆ ವರದಾನವಾಯಿತು. ಹಿಂಸೆಯಿಂದ ಕಂಗೆಟ್ಟಿದ್ದ ಅವರು, ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಲ್ಲಿಂದ ಪಾರಾದರು.
ಉಗ್ರನ ಮನೆಯಿಂದ ತಪ್ಪಿಸಿಕೊಂಡ ಮುರದ್ ಅವರಿಗೆ ನೆರೆಮನೆಯ ಕುಟುಂಬವೊಂದು ಸಹಾಯ ಮಾಡಿತು. ಇಸ್ಲಾಮಿಕ್ ಸ್ಟೇಟ್ ಉಗ್ರರ ನಿಯಂತ್ರಣದಲ್ಲಿದ್ದ ಪ್ರದೇಶದಿಂದ ಯಾರ ಕಣ್ಣಿಗೂ ಕಾಣಿಸದಂತೆ ಅವರನ್ನು ಹೊರಕ್ಕೆ ಸಾಗಿಸುವಲ್ಲಿ ಯಶಸ್ವಿಯಾಯಿತು. ಹೀಗೆ ಉಗ್ರರ ಹಿಡಿತದಿಂದ ತಪ್ಪಿಸಿಕೊಂಡು ಬಂದ ಮುರದ್, ಮೈಲುಗಟ್ಟಲೆ ನಡೆದು ಉತ್ತರ ಇರಾಕ್ನ ದುಹೋಕ್ನಲ್ಲಿನ ನಿರಾಶ್ರಿತರ ಶಿಬಿರ ಸೇರಿಕೊಂಡರು. ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು, ತನ್ನ ತಾಯಿ ಮತ್ತು ಸಹೋದರರನ್ನು ಉಗ್ರರು ನಿರ್ದಯವಾಗಿ ಕೊಂದಿದ್ದಾರೆ ಎನ್ನುವುದು.
ಅಣ್ವಸ್ತ್ರ ವಿರೋಧಿ ಆಂದೋಲನಕ್ಕೆ 2017 ನೊಬೆಲ್ ಶಾಂತಿ ಪ್ರಶಸ್ತಿ
|
'ಅವರ್ ಪೀಪಲ್ಸ್' ಆಂದೋಲನ
ಅಲ್ಲಿಂದ ಮುರದ್ ಹೋರಾಟ ಶುರುವಾಯಿತು. ಪುರುಷರನ್ನು ಸಾಯಿಸಿ, ಚಿಕ್ಕ ಮಕ್ಕಳನ್ನು 'ಹೋರಾಟಗಾರರು' ಎಂದು ಶಸ್ತ್ರಾಸ್ತ್ರ ತರಬೇತಿ ನೀಡುವ ಮತ್ತು ಸಾವಿರಾರು ಮಹಿಳೆಯರ ಜೀವನವನ್ನು ಬಲಾತ್ಕಾರದ ಕಾರ್ಮಿಕರು ಹಾಗೂ ಲೈಂಗಿಕ ಗುಲಾಮರನ್ನಾಗಿಸುವ ಉಗ್ರರ ಕ್ರೌರ್ಯವನ್ನು ಖಂಡಿಸಿದರು. ಯಜಿದಿ ಸಂಸ್ಥೆಯೊಂದರ ನೆರವಿನಿಂದ ಜರ್ಮನಿಯಲ್ಲಿದ್ದ ತನ್ನ ಸಹೋದರಿಯನ್ನು ಕೂಡಿಕೊಂಡರು. 'ಅವರ್ ಪೀಪಲ್ಸ್' ಎಂಬ ಚಳವಳಿ ರೂಪಿಸಿದರು.
ಅತ್ಯಂತ ಸೂಕ್ಷ್ಮ ಮತ್ತು ಮಿದುಭಾಷಿ ಮುರದ್, ಈಗ ಜಾಗತಿಕ ದನಿಯಾಗಿದ್ದಾರೆ. ತಮ್ಮ ಜನರಿಗೆ ನ್ಯಾಯ ಒದಗಿಸಲು, ಉಗ್ರರು ನಡೆಸುವ ಹತ್ಯಾಕಾಂಡಗಳ ವಿರುದ್ಧ ಆಂದೋಲನಗಳನ್ನು ರೂಪಿಸುತ್ತಿದ್ದಾರೆ.
|
ಸುಖರೊವ್ ಮಾನವ ಹಕ್ಕು ಪುರಸ್ಕಾರ
ಮುರದ್ ಮತ್ತು ಅವರ ಸ್ನೇಹಿತೆ ಲಾಮಿಯಾ ಹಾಜಿ ಬಶರ್ ಇಬ್ಬರೂ ಈಗಲೂ ಉಗ್ರರ ಹಿಡಿತದಲ್ಲಿ ಇದ್ದಾರೆ ಎಂದು ಭಾವಿಸಲಾಗಿರುವ ಸುಮಾರು 3,000 ಯಜಿದಿ ಮಹಿಳೆಯರ ಪರ ಹೋರಾಟ ಮುಂದುವರಿಸಿದ್ದಾರೆ. ಈ ಇಬ್ಬರ ಹೋರಾಟಕ್ಕೆ 2016ರ ಯುರೋಪಿಯನ್ ಸುಖರೊವ್ ಮಾನವ ಹಕ್ಕು ಪುರಸ್ಕಾರವನ್ನು ಜಂಟಿಯಾಗಿ ನೀಡಲಾಗಿತ್ತು.
ಲೆಬನಾನ್-ಬ್ರಿಟಿಷ್ ವಕೀಲೆ ಮತ್ತು ಹೋರಾಟಗಾರ್ತಿ ಅಮಲ್ ಕ್ಲೂನೀ ಅವರ ಬೆಂಬಲದಿಂದ 2017ರಲ್ಲಿ 'ದಿ ಲಾಸ್ಟ್ ಗರ್ಲ್' ಕೃತಿಯನ್ನು ರಚಿಸಿದರು.
|
ಗುಲಾಮರ ಮಾರುಕಟ್ಟೆ
ಇಸ್ಲಾಮಿಕ್ ಉಗ್ರರು ಅಪಹರಿಸಿದ ಮಹಿಳೆಯರು ಮತ್ತು ಬಾಲಕಿಯರನ್ನು ಉಗ್ರರು ಮಾರಾಟ ಮಾಡಲು ಗುಲಾಮರ ಮಾರುಕಟ್ಟೆಯನ್ನೇ ಆಯೋಜಿಸುತ್ತಾರೆ. ಜತೆಗೆ ತಮ್ಮ ಧರ್ಮವನ್ನು ತ್ಯಜಿಸುವಂತೆ ಯಜಿದಿ ಮಹಿಳೆಯರಿಗೆ ಹಿಂಸಿಸುತ್ತಾರೆ.
ಕರ್ಮಠ ಧರ್ಮಪಾಲಕರು ಎಂದು ಹೇಳಿಕೊಳ್ಳುವ ಉಗ್ರರು, ಯಜಿದಿಗಳು ಅಸಂಪ್ರದಾಯಸ್ಥರು ಎಂದೇ ಪರಿಗಣಿಸಿದ್ದಾರೆ. ಹೀಗಾಗಿ ಪುರುಷರನ್ನು ಮುಲಾಜಿಲ್ಲದೆ ಸಾಯಿಸುತ್ತಾರೆ. ಮಕ್ಕಳು, ಮಹಿಳೆಯರನ್ನು ಮತಾಂತರ ಮಾಡಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ.
ಸಿಕ್ಕ ಜತೆಗಾರ
ಈ ವರ್ಷದ ಆಗಸ್ಟ್ನಲ್ಲಿ ಅವರು ತಮ್ಮ ಜತೆಗಾರ ಯಜಿದಿ ಹೋರಾಟಗಾರ ಅಬಿದ್ ಶಮ್ದೀನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಪ್ರಕಟಿಸಿದರು.
'ನಮ್ಮ ಜನರ ಸಂಕಷ್ಟಗಳು ನಮ್ಮನ್ನು ಒಂದುಗೂಡಿಸಿವೆ ಮತ್ತು ಈ ಹಾದಿಯಲ್ಲಿಯೇ ನಾವು ಒಟ್ಟಿಗೆ ಮುಂದುವರಿಯುತ್ತೇವೆ' ಎಂದು ಅವರು ಹೇಳಿಕೊಂಡಿದ್ದಾರೆ.
ಅತ್ಯಾಚಾರಗಳು ಯುದ್ಧದ ಅಸ್ತ್ರವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ತಮ್ಮ ಭಾಷಣದಲ್ಲಿ ಅವರು ಹೇಳಿದ್ದರು. 2015ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಾಯಭಾರಿಯಾದ ಅವರು, ನಿರಾಶ್ರಿತರು ಮತ್ತು ಮಾನವಕಳ್ಳಸಾಗಣೆಯ ಕುರಿತು ಸುದೀರ್ಘ ಭಾಷಣ ಮಾಡಿದ್ದರು.