ಅಖಂಡ ಭಾರತದ ಪರ ಇಸ್ಲಾಮಾಬಾದ್ ನಲ್ಲಿ ಬ್ಯಾನರ್; ಪಾಕ್ ನಲ್ಲಿ ಒಬ್ಬ ಅಂದರ್
ಇಸ್ಲಾಮಾಬಾದ್, ಆಗಸ್ಟ್ 7: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ವಿವಿಧೆಡೆ ಭಾರತದ ಪರವಾದ ಬ್ಯಾನರ್ ಗಳು ಕಾಣಿಸಿಕೊಂಡಿವೆ. ಅತಿ ಹೆಚ್ಚು ಭದ್ರತೆ ಇರುವ ರೆಡ್ ಜೋನ್ ಗಳಲ್ಲೂ ಇಂಥ ಬ್ಯಾನರ್ ಗಳು ಕಾಣಿಸಿಕೊಂಡಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಭಾರತದ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿ ಈ ರೀತಿ ಬ್ಯಾನರ್ ಹಾಕಲಾಗಿದ್ದು, ಈ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಬ್ಯಾನರ್ ಗಳಲ್ಲಿ 'ಅಖಂಡ ಭಾರತ'ದ ಚಿತ್ರಗಳನ್ನು ಹಾಕಲಾಗಿದೆ. ಅಂದರೆ, ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನೂ ಒಳಗೊಂಡಂತೆ ಭಾರತವನ್ನು ಚಿತ್ರಿಸಲಾಗಿದೆ. ಇದರ ಜತೆಗೆ ಬಲೂಚಿಸ್ತಾನದ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಮಾತುಗಳು ಸಹ ಇವುಗಳಲ್ಲಿ ಇವೆ.
ವಿಡಿಯೋ: ಪಾಕಿಸ್ತಾನದಲ್ಲೂ 'ಅಖಂಡ ಭಾರತ'ದ ಪೋಸ್ಟರ್ಗಳು!
"ಇಂದು ಜಮ್ಮು ಮತ್ತು ಕಾಶ್ಮೀರ ಪಡೆದಿದ್ದೇವೆ. ನಾಳೆ ಬಲೂಚಿಸ್ತಾನ, ಪಿಒಕೆ ಪಡೆಯುತ್ತೇವೆ. ದೇಶದ ಪ್ರಧಾನಿ ಅಖಂಡ ಭಾರತದ ಕನಸನ್ನು ನನಸು ಮಾಡುತ್ತಾರೆ ಎಂಬ ವಿಶ್ವಾಸ ಇದೆ" ಎಂದು ಸಂಜಯ್ ರಾವತ್ ಹೇಳಿದ್ದರು. ಆ ಸಂದೇಶವು ಬ್ಯಾನರ್ ನಲ್ಲಿ ಇದೆ. ಪ್ರೆಸ್ ಕ್ಲಬ್ ನ ಎದುರು, ಸೆಕ್ಟರ್ F-6 ಹಾಗೂ ಆಬ್ ಪರ ಚೌಕ್ ನಲ್ಲಿ ಮಂಗಳವಾರ ಬ್ಯಾನರ್ ಗಳು ಕಾಣಿಸಿಕೊಂಡಿದ್ದವು.
ಬಹಳ ಕಾಲ ಇವುಗಳು ಯಾರ ಗಮನಕ್ಕೂ ಬಂದಿರಲಿಲ್ಲ. ಆ ನಂತರ ದಾರಿಹೋಕರು ಗಮನಿಸಿ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಬ್ಯಾನರ್ ಗಳನ್ನು ತೆಗೆದಿದ್ದಾರೆ. "ಐದು ಗಂಟೆಗಳು ತಡವಾಗಿ ಬ್ಯಾನರ್ ಗಳನ್ನು ತೆಗೆಯಲಾಗಿದೆ. ಅದುವರೆಗೆ ಏಕೆ ಯಾರ ಗಮನಕ್ಕೂ ಬಂದಿಲ್ಲ ಎಂಬ ಬಗ್ಗೆ ತನಿಖೆ ನಡೆಸಬೇಕು" ಎಂದು ಇಸ್ಲಾಮಾಬಾದ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
ಕಾಶ್ಮೀರಿಗಳ ಬೆಂಬಲಕ್ಕೆ ಯಾವ ಹಂತಕ್ಕೆ ಹೋಗಲು ಸಹ ಸಿದ್ಧ: ಪಾಕ್ ಸೇನೆ
ಮೋಟಾರ್ ಸೈಕಲ್ ನಲ್ಲಿ F-6 ಸೆಕ್ಟರ್ ಗೆ ಮಂಗಳವಾರ ಬೆಳಗ್ಗೆ ಬಂದ ಇಬ್ಬರು ಕಂಬಕ್ಕೆ ಬ್ಯಾನರ್ ಕಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಘಟನೆಯ ದೃಶ್ಯಾವಳಿಗಳು ಸೇಫ್ ಸಿಟಿ ಯೋಜನೆಯ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.