ವ್ಯಾಕ್ಸಿನ್ ವಿಚಾರದಲ್ಲೂ ಚೀನಾ ದ್ರೋಹ? ಶ್ರೀಲಂಕಾ ರೊಚ್ಚಿಗೆದ್ದಿದ್ದು ಯಾಕೆ?
ಚೀನಾ ವಿರುದ್ಧ ಜಗತ್ತು ಮತ್ತೊಮ್ಮೆ ರೊಚ್ಚಿಗೆದ್ದಿದೆ. ಅದರಲ್ಲೂ ಬ್ರಿಟನ್ ಹಾಗೂ ನಾರ್ವೆ ಮೂಲದ ತಜ್ಞರು ಕೊರೊನಾ ವೈರಸ್ ಚೀನಾ ಲ್ಯಾಬ್ನಲ್ಲೇ ತಯಾರಾಗಿತ್ತು ಎಂಬ ಆರೋಪ ಮಾಡಿದ ಮೇಲೆ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ. ಇಷ್ಟರಲ್ಲೇ ಮತ್ತೊಂದು ವಿವಾದ ಭುಗಿಲೆದ್ದಿದ್ದು, ಚೀನಾ ಮೋಸ ಮಾಡ್ತು ಅಂತಾ ಶ್ರೀಲಂಕಾ ತನ್ನ ಬೇಸರ ಹೊರಹಾಕಿದೆ.
Recommended Video
ಸಿನೋಫಾರ್ಮ್ ಕೊರೊನಾ ಲಸಿಕೆಯನ್ನು ಚೀನಾ ಸ್ನೇಹಿತ ರಾಷ್ಟ್ರಗಳಿಗೆ ರಫ್ತುಮಾಡಿದೆ. ಈ ಪಟ್ಟಿಯಲ್ಲಿ ಬಾಂಗ್ಲಾ ಮತ್ತು ಶ್ರೀಲಂಕಾ ಕೂಡ ಇದೆ. ಬಾಂಗ್ಲಾದೇಶ ಈಗಾಗಲೇ 1.5 ಕೋಟಿ ಡೋಸ್ಗೆ ಆರ್ಡರ್ ನೀಡಿದೆ, ಹಾಗೇ ಶ್ರೀಲಂಕಾ ಕೂಡ ಭಾರಿ ಪ್ರಮಾಣದಲ್ಲಿ ಸಿನೋಫಾರ್ಮ್ ಕೊರೊನಾ ವ್ಯಾಕ್ಸಿನ್ನ ಖರೀದಿ ಮಾಡಲು ಮುಂದಾಗಿದೆ.
ಆದರೆ ಚೀನಾ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ಬೆಲೆಯಲ್ಲಿ ವ್ಯಾಕ್ಸಿನ್ ಮಾರುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅತ್ತ ಬಾಂಗ್ಲಾದೇಶಕ್ಕೆ ಲಸಿಕೆಯನ್ನ 10 ಅಮೆರಿಕನ್ ಡಾಲರ್ಗೆ ಮಾರಾಟ ಮಾಡಿದರೆ, ಇತ್ತ ಶ್ರೀಲಂಕಾಗೆ 15 ಅಮೆರಿಕನ್ ಡಾಲರ್ ಬೆಲೆ ಫಿಕ್ಸ್ ಮಾಡಿದೆಯಂತೆ. ಹೀಗಾಗಿ ಚೀನಾ ವಿರುದ್ಧ ಲಂಕನ್ನರು ರೊಚ್ಚಿಗೆದ್ದಿದ್ದು, ಬೆಲೆ ವ್ಯತ್ಯಾಸದ ಬಗ್ಗೆ ವಿವಾದ ಭುಗಿಲೆದ್ದಿದೆ.
5 ಡಾಲರ್ ವ್ಯತ್ಯಾಸ..!
ಚೀನಾದ ಸಿನೊಫಾರ್ಮ್ ಕೋವಿಡ್-19 ವ್ಯಾಕ್ಸಿನ್ನ ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಅನುಮತಿ ನೀಡಿತ್ತು. ಇದರಿಂದ ಚೀನಾ ಲಸಿಕೆಗೆ ದೊಡ್ಡ ರಿಲೀಫ್ ಸಿಕ್ಕಿತ್ತು. WHO ಅನುಮೋದನೆ ಸಿಕ್ಕಿರುವ ಬೆನ್ನಲ್ಲೇ ಚೀನಾ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಹಲವು ರಾಷ್ಟ್ರಗಳು ಲಸಿಕೆಗೆ ಮುಗಿಬಿದ್ದಿವೆ. ಹೀಗೆ ಶ್ರೀಲಂಕಾ ಹಾಗೂ ಬಾಂಗ್ಲಾ ಕೂಡ ಲಸಿಕೆ ಖರೀದಿ ಮಾಡುತ್ತಿವೆ. ಆದರೆ ಬೆಲೆಯಲ್ಲಿ ಬರೋಬ್ಬರಿ 5 ಡಾಲರ್ ವ್ಯತ್ಯಾಸ ಇರುವುದು ವಿವಾದ ಭುಗಿಲೇಳುವಂತೆ ಮಾಡಿದೆ. ಈವರೆಗೂ ಚೀನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಬಡವರ ಪಾಡು ಹೇಗೆ..?
ಜಗತ್ತಿನಾದ್ಯಂತ ಒಂದೊಂದು ಲಸಿಕೆಗೆ ಒಂದೊಂದು ಬೆಲೆ ಇದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದೆ. ಲಸಿಕೆ ಬೆಲೆಯಲ್ಲಿ ಏಕರೂಪತೆ ಕಾಯ್ದುಕೊಳ್ಳುವ ಚರ್ಚೆ ನಡೆದಿದ್ದು, ಬಡರಾಷ್ಟ್ರಗಳಿಗೆ ಲಸಿಕೆ ಸುಲಭವಾಗಿ ದೊರೆಯಲಿ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶ. ಕೊರೊನಾ ಅಬ್ಬರಿಸುತ್ತಿರುವ ಹೊತ್ತಲ್ಲಿ ಇದು ಅನಿವಾರ್ಯ ಕೂಡ. ಆ ಕಡೆ ಶ್ರೀಮಂತ ರಾಷ್ಟ್ರಗಳು ದುಬಾರಿ ಬೆಲೆ ಕೊಟ್ಟು ತನ್ನ ಪ್ರಜೆಗಳಿಗೆ ವ್ಯಾಕ್ಸಿನ್ ಹಾಕುತ್ತಿದ್ದರೆ, ಇತ್ತ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿ ಬಡರಾಷ್ಟ್ರಗಳಿವೆ.
ರೋಗ ನಿರೋಧಕ ಶಕ್ತಿ
ಕೊರೊನಾ ಲಸಿಕೆಯಿಂದ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಇರಲಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಕಸ್ಮಾತ್ ಕೊರೊನಾ ತಗುಲಿದ್ದರೂ ಅಥವಾ ಲಸಿಕೆ ಪಡೆದಿದ್ದರೂ ಹಲವು ವರ್ಷಗಳ ಕಾಲ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಲಿದೆ. ಹೀಗಾಗಿಯೇ ವ್ಯಾಕ್ಸಿನ್ ಹಾಕಿಸಬೇಕಿರುವುದು ಈಗಿನ ತುರ್ತು. ತುರ್ತು ಸಂದರ್ಭವನ್ನ ಲಾಭದ ಉದ್ದೇಶದಿಂದ ನೋಡಬೇಡಿ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ. ಆದರೆ ಲಸಿಕೆ ತಯಾರಿಕಾ ಸಂಸ್ಥೆಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದನ್ನ ಕಾದು ನೋಡಬೇಕಿದೆ. ಬಡ ರಾಷ್ಟ್ರಗಳಿಗೆ ಅಗ್ಗದ ಬೆಲೆಯಲ್ಲಿ, ಆದಷ್ಟು ಬೇಗ ಲಸಿಕೆ ದೊರೆಯಬೇಕಿದೆ.
ಪೋಲಿಯೋ ರೀತಿ ಹೋರಾಟ
ಕೊರೊನಾ ವಿರುದ್ಧ ಪೋಲಿಯೋ ರೀತಿಯ ಹೋರಾಟ ನಡೆಯಬೇಕು ಎಂಬ ಮಾತು ಕೂಡ ಕೇಳಿಬರುತ್ತಿವೆ. ಇಡೀ ಜಗತ್ತು ಹೇಗೆ ಪೋಲಿಯೋ ವೈರಸ್ ವಿರುದ್ಧ ಒಂದಾಗಿ ಹೋರಾಡಿತ್ತೋ ಅದೇ ರೀತಿ ಡೆಡ್ಲಿ ಕೊರೊನಾ ವಿರುದ್ಧವೂ ಹೋರಾಡಬೇಕಿದೆ. ವ್ಯಾಕ್ಸಿನ್ ವಿಚಾರದಲ್ಲಿ ಲಾಭಕ್ಕಿಂತ ಮಾನವರ ಉಳಿವಿನ ಪ್ರಶ್ನೆ ಅಡಗಿದೆ. ಈ ಎಲ್ಲಾ ಗೊಂದಲವನ್ನೂ ಬಗೆಹರಿಸಿಕೊಂಡು ಕೊರೊನಾ ತೊಲಗಿಸಬೇಕಿದೆ. ಆಫ್ರಿಕಾ ಮತ್ತು ಏಷ್ಯಾದ ಸಾಕಷ್ಟು ಬಡರಾಷ್ಟ್ರಗಳು ಪ್ರಜೆಗಳಿಗೆ ತುತ್ತು ಅನ್ನ ಹುಟ್ಟಿಸಲು ಪರದಾಡುವಾಗ, ವ್ಯಾಕ್ಸಿನ್ಗಾಗಿ ಸಾವಿರಾರು ಕೋಟಿ ಹಣ ಸುರಿಯಲು ಸಾಧ್ಯವಿಲ್ಲ ಎಂಬುದು ತಜ್ಞರ ವಾದ. ಹೀಗಾದ್ರೆ ವ್ಯಾಕ್ಸಿನ್ ಸಿಗದೆ ಬಡರಾಷ್ಟ್ರಗಳ ಜನ ಕೊರೊನಾ ಕೂಪದಲ್ಲಿ ನರಳುವಂತಾಗುತ್ತದೆ.