ಶ್ರೀಲಂಕಾಗೆ ಇದೇ ವಾರ ನೂತನ ಪ್ರಧಾನಿ, ಸಂಪುಟ ಆಯ್ಕೆ ಎಂದ ಗೋತಬಯ ರಾಜಪಕ್ಸೆ
ಕೋಲಂಬೋ, ಮೇ 12: ಶ್ರೀಲಂಕಾದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಈ ವಾರವೇ ಹೊಸ ಪ್ರಧಾನಮಂತ್ರಿ ಮತ್ತು ಸಂಪುಟವನ್ನು ನೇಮಿಸಲಾಗುವುದು ಎಂದು ಅಧ್ಯಕ್ಷ ಗೋತಬಯ ರಾಜಪಕ್ಸೆ ಹೇಳಿದ್ದಾರೆ.
"ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಈ ವಾರ ನಾನು ಸಂಸತ್ತಿನಲ್ಲಿ ಬಹುಮತವನ್ನು ಗಳಿಸುವ ಮತ್ತು ದೇಶದ ಜನರ ವಿಶ್ವಾಸವನ್ನು ಗಳಿಸಬಲ್ಲ ಪ್ರಧಾನಿ ಮತ್ತು ಸಂಪುಟವನ್ನು ನೇಮಿಸುತ್ತೇನೆ," ಎಂದು ಹೇಳಿದರು.
Sri Lanka Crisis Live Updates: ಶ್ರೀಲಂಕಾಗೆ ಈ ವಾರ ನೂತನ ಪ್ರಧಾನಿ ಆಯ್ಕೆ
ಸಂವಿಧಾನದ 19ನೇ ತಿದ್ದುಪಡಿಯ ವಿಷಯವನ್ನು ಜಾರಿಗೆ ತರಲು ಸಾಂವಿಧಾನಿಕ ತಿದ್ದುಪಡಿಯನ್ನು ತರಲಾಗುವುದು. ಅದು ಸಂಸತ್ತಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಹೊಸ ಸರ್ಕಾರದ ಪ್ರಧಾನ ಮಂತ್ರಿಗೆ ಹೊಸ ಕಾರ್ಯಕ್ರಮವನ್ನು ರೂಪಿಸಲು ಮತ್ತು ಈ ದೇಶವನ್ನು ಮುಂದೆ ಕೊಂಡೊಯ್ಯುವ ಅವಕಾಶವನ್ನು ನೀಡಲಾಗುವುದು," ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಎಂದು ಅವರು ಹೇಳಿದರು
ಶ್ರೀಲಂಕಾದಲ್ಲಿ ಹೇಗಿದೆ ಪರಿಸ್ಥಿತಿ?:
ಶ್ರೀಲಂಕಾದ ಅಧಿಕಾರಿಗಳು ರಾಜಧಾನಿ ಕೊಲಂಬೊದ ಬೀದಿಗಳಲ್ಲಿ ಶಸ್ತ್ರಸಜ್ಜಿತ ವಾಹನಗಳು ಮತ್ತು ಪಡೆಗಳನ್ನು ನಿಯೋಜಿಸಿದ್ದಾರೆ. ಎರಡು ದಿನಗಳ ನಂತರ ಸರ್ಕಾರದ ಪರವಾದ ಗುಂಪುಗಳು ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ದೇಶಾದ್ಯಂತ ಹಿಂಸಾಚಾರಕ್ಕೆ ಪ್ರಚೋದಿಸಿತ್ತು. ಸೋಮವಾರ ಸಂಜೆ ರಾಷ್ಟ್ರವ್ಯಾಪಿ ಕಟ್ಟುನಿಟ್ಟಾದ ಕರ್ಫ್ಯೂ ಹೊರತಾಗಿಯೂ ನಾಯಕರ ಮನೆಗಳಿಗೆ ಬೆಂಕಿ ಹಚ್ಚುವುದು, ಶಾಂತಿ ಕದಡುವುದು ಹಾಗೂ ವಿಧ್ವಂಸಕ ಕೃತ್ಯಗಳು ಮುಂದುವರಿದವು. ತದನಂತರದ ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಗುಂಡಿನ ಪ್ರಹಾರ ನಡೆಸುವುದಕ್ಕೆ ಭದ್ರತಾ ಪಡೆಗಳಿಗೆ ಆದೇಶಿಸಲಾಗಿತ್ತು.
ದಿವಾಳಿ ಹಂತಕ್ಕೆ ತಲುಪಿದ ಶ್ರೀಲಂಕಾ ಅರ್ಥಿಕತೆ:
ಶ್ರೀಲಂಕಾ ದಿವಾಳಿಯ ಹಂತಕ್ಕೆ ತಲುಪಿದೆ. ಈ ವರ್ಷ 7 ಶತಕೋಟಿ ವಿದೇಶ ಸಾಲಗಳ ಪಾವತಿಯನ್ನು ಸ್ಥಗಿತಗೊಳಿಸಲಾಗಿದ್ದು, 2026ರ ವೇಳೆಗೆ ಅದರ ಮೊತ್ತ 25 ಶತಕೋಟಿ ಡಾಲರ್ ತಲುಪಲಿದೆ. ದೇಶದ ಒಟ್ಟು ವಿದೇಶಿ ಸಾಲವು 51 ಶತಕೋಟಿ ಡಾಲರ್ ಆಗಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದ ಆಮದು ಕಡಿಮೆಯಾಗಿದೆ. ಹೀಗಾಗಿ ಮತ್ತು ಆಹಾರ, ಅಡುಗೆ ಅನಿಲ, ಇಂಧನ ಮತ್ತು ಔಷಧ ಸೇರಿದಂತೆ ಅಗತ್ಯ ವಸ್ತುಗಳಿಗೆ ತೀವ್ರ ಕೊರತೆ ಸೃಷ್ಟಿಯಾಗಿದೆ. ತಿಂಗಳುಗಟ್ಟಲೆ, ಸೀಮಿತ ಸ್ಟಾಕ್ಗಳನ್ನು ಖರೀದಿಸಲು ಜನರು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಹ ವಾತಾವರಣ ಸೃಷ್ಟಿಯಾಗಿದೆ. ಇಂಥ ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸೆ ಸಹೋದರರ ಭ್ರಷ್ಟಾಚಾರ ಮತ್ತು ಆಡಳಿತ ಶೈಲಿಯೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಶ್ರೀಲಂಕಾದಲ್ಲಿ ಪ್ರತಿಭಟನೆಗೆ ಕಾರಣವೇನು?:
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಹುತೇಕ ದಿವಾಳಿಯಾಗಿದ್ದು, ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಮಹಿಂದಾ ರಾಜಪಕ್ಸೆ ಹಾಗೂ ಅಧ್ಯಕ್ಷರಾಗಿರುವ ಗೋತಬಯ ರಾಜಪಕ್ಸೆ ಸಹೋದರರು ರಾಜೀನಾಮೆ ನೀಡುವಂತೆ ಸರ್ಕಾರದ ವಿರೋಧಿ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ, ಕೆಲವು ಗುಂಪುಗಳು ಕಟ್ಟಡ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಹಿಂಸಾತ್ಮಕ ದಾಳಿಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪ್ರಧಾನ ಮಂತ್ರಿಯ ಮಹಿಂದಾ ರಾಜಪಕ್ಸೆ ರಾಜೀನಾಮೆಯಿಂದಾಗಿ ಯಾವುದೇ ಕ್ಯಾಬಿನೆಟ್ ಇಲ್ಲದ ಆಡಳಿತಾತ್ಮಕ ನಿರ್ವಾತ ಸೃಷ್ಟಿಯಾಗಿದೆ. ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ, ಅವರು ಮತ್ತು ಅವರ ಕುಟುಂಬ ಸದಸ್ಯರನ್ನು ಅಧಿಕೃತ ನಿವಾಸದಿಂದ ಸ್ಥಳಾಂತರಿಸಲಾಯಿತು.
ಟ್ರಿಂಕೋಮಲಿಯ ನೌಕಾ ನೆಲೆಯಲ್ಲಿ ಮಹಿಂದಾ ರಾಜಪಕ್ಸೆ ರಕ್ಷಣೆ:
ಕಳೆದ ಸೋಮವಾರ ಬೆಂಬಲಿಗರು ಮಹಿಂದಾ ರಾಜಪಕ್ಸೆರನ್ನು ಕಚೇರಿಯಲ್ಲಿ ಉಳಿಯುವಂತೆ ಒತ್ತಾಯಿಸಲು ಪ್ರಧಾನಿ ಅಧಿಕೃತ ನಿವಾಸದಲ್ಲಿ ಜಮಾಯಿಸಿದರು. ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿ ಕಮಲ್ ಗುಣರತ್ನೆ ಮಾತನಾಡಿ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆರನ್ನು ಈಶಾನ್ಯ ಕರಾವಳಿಯ ಟ್ರಿಂಕೋಮಲಿಯ ನೌಕಾ ನೆಲೆಯಲ್ಲಿ ರಕ್ಷಿಸಲಾಗಿದೆ ಎಂದು ಹೇಳಿದರು.
ಸರ್ಕಾರವನ್ನು ಬೆಂಬಲಿಸುವ ಗುಂಪುಗಳು ತಮ್ಮ ರಾಜೀನಾಮೆಗೆ ಒತ್ತಾಯಿಸಿ ಪ್ರಧಾನಿ ನಿವಾಸ ಮತ್ತು ಅಧ್ಯಕ್ಷರ ಕಚೇರಿಯ ಬಳಿ ಬೀಡುಬಿಟ್ಟಿದ್ದ ಶಾಂತಿಯುತ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದವು. ದೇಶದಾದ್ಯಂತ ಕೋಪಗೊಂಡ ನಾಗರಿಕರು ಸರ್ಕಾರಿ ಬೆಂಬಲಿಗರು ಮತ್ತು ಆಡಳಿತ ಪಕ್ಷದ ರಾಜಕಾರಣಿಗಳ ಮೇಲೆ ದಾಳಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಈವರೆಗಿನ
ಹಿಂಸಾಚಾರದಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. 219 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದರ ಜೊತೆಗೆ 104 ಕಟ್ಟಡಗಳು ಮತ್ತು 60 ವಾಹನಗಳನ್ನು ಸುಟ್ಟು ಹಾಕಲಾಗಿದೆ.
Recommended Video