ಪಾಕಿಸ್ತಾನ: ಮುಂದುವರಿದ ಸೇನೆ-ಪೊಲೀಸ್ ಸಂಘರ್ಷ
ಕರಾಚಿ, ಅಕ್ಟೋಬರ್ 22: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಪೊಲೀಸರು ಮತ್ತು ಸೇನೆಯ ನಡುವೆ ಉಂಟಾಗಿರುವ ಸಂಘರ್ಷ ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಕರಾಚಿಯಲ್ಲಿ ನಡೆದ ಘರ್ಷಣೆಯಲ್ಲಿ ಸುಮಾರು 10 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಸೇನೆ ಹಾಗೂ ಪೊಲೀಸರ ಕಿತ್ತಾಟದ ಆರಂಭಿಕ ಮಾಹಿತಿಗಳ ಹೊರತಾಗಿ ಅಲ್ಲಿನ ಮುಖ್ಯವಾಹಿನಿ ಮಾಧ್ಯಮಗಳು ಸುದ್ದಿಗಳನ್ನು ಬಿತ್ತರಿಸುತ್ತಿಲ್ಲ. ಪಾಕಿಸ್ತಾನ ಸೇನೆ ಮಾಧ್ಯಮಗಳನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಆದರೆ ಈ ಸಂಘರ್ಷದ ಬಗ್ಗೆ ಪ್ರಧಾನಿ ಇಮ್ರಾನ್ ಖಾನ್ ಯಾವುದೇ ಹೇಳಿಕೆ ನೀಡಿಲ್ಲ. ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ತನಿಖೆಗೆ ಆದೇಶಿಸಿದ್ದಾರೆ. ದೇಶದ ಪ್ರಮುಖ 11 ವಿರೋಧಪಕ್ಷಗಳು ಈಗಾಗಲೇ ಆಹಾರದ ಕೊರತೆ ಮತ್ತು ಹಣದುಬ್ಬರದ ಸಮಸ್ಯೆ ನಿಯಂತ್ರಿಸಲು ವಿಫಲವಾದ ಇಮ್ರಾನ್ ಖಾನ್ ಅಧಿಕಾರದಿಂದ ಕೆಳಕ್ಕಿಳಿಯುವಂತೆ ಆಗ್ರಹಿಸಿ ಪ್ರತಿಭಟನಾ ಸಮಾವೇಶಗಳನ್ನು ನಡೆಸುತ್ತಿವೆ. ರಾಜಕೀಯದಲ್ಲಿ ಸೇನೆಯ ಹಸ್ತಕ್ಷೇಪ ನಿಲ್ಲುವಂತೆ ಆಗ್ರಹಿಸುತ್ತಿವೆ.
ಪಾಕಿಸ್ತಾನದಲ್ಲಿ ಪೊಲೀಸ್-ಸೇನೆ ಸಂಘರ್ಷ: ನಾಗರಿಕ ಯುದ್ಧದ ಭೀತಿ
ಸಿಂಧ್ ಪ್ರಾಂತ್ಯದಲ್ಲಿ ಪೊಲೀಸ್ ಮುಖ್ಯಸ್ಥರನ್ನು ಅಪಹರಣ ಮಾಡಿದ್ದಲ್ಲದೆ, ನವಾಜ್ ಷರೀಫ್ ಅಳಿಯ, ಕ್ಯಾಪ್ಟನ್ ಸಫ್ದಾರ್ ಅವಾನ್ ಹಾಗೂ ಬಿಲಾವಲ್ ಭುಟ್ಟೋ ಜರ್ದಾರಿ ಅವರ ವಕ್ತಾರ ಮುಸ್ತಾಫಾ ನವಾಜ್ ಖೋಖರ್ ಅವರನ್ನು ಬಂಧಿಸಲು ಆದೇಶ ಹೊರಡಿಸುವಂತೆ ಒತ್ತಡ ಹೇರಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಸಿಂಧ್ ಪ್ರಾಂತ್ಯದ ಪೊಲೀಸರು ಸಾಮೂಹಿಕ ರಜೆಗೆ ಅರ್ಜಿ ಸಲ್ಲಿಸಿರುವುದು ಸೇನೆ ಜತೆಗಿನ ಸಂಘರ್ಷವನ್ನು ಬಹಿರಂಗಪಡಿಸಿದೆ.
ಸೇನೆಯ ಪ್ರಾಬಲ್ಯ
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಉಂಟಾಗಿರುವ ಕೆಟ್ಟ ರಾಜಕೀಯ ಸನ್ನಿವೇಶ ಇದಾಗಿದೆ. 1947ರಿಂದ ಇಲ್ಲಿಯವರೆಗೂ ಪಾಕಿಸ್ತಾನವನ್ನು ಅರ್ಧದಷ್ಟು ಸಮಯ ಅಲ್ಲಿನ ಸೇನೆಯೇ ಆಳಿದೆ. ವಿದೇಶಿ ಮತ್ತು ರಾಷ್ಟ್ರೀಯ ಭದ್ರತಾ ನೀತಿಗಳಲ್ಲಿ ಸೇನೆಯೇ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಪಾಕಿಸ್ತಾನದ ಸಂವಿಧಾನದ ಅಡಿಯಲ್ಲಿ ಅಲ್ಲಿನ ಸೇನೆ ಹಾಗೂ ನ್ಯಾಯಾಂಗವನ್ನು ಸಾರ್ವಜನಿಕವಾಗಿ ಟೀಕಿಸುವಂತಿಲ್ಲ.
ರಜೆ ತೆಗೆದುಕೊಳ್ಳದಂತೆ ಸೂಚನೆ
ತಮ್ಮ ಅಪಹರಣದ ಪ್ರಕರಣದ ಬಗ್ಗೆ ಸಿಂಧ್ ಪೊಲೀಸ್ ಮುಖ್ಯಸ್ಥ ಮುಷ್ತಾಕ್ ಅಹ್ಮದ್ ಮಹರ್ ನೇರವಾಗಿ ಹೇಳಿಕೆ ನೀಡದೆ ಇದ್ದರೂ, ಸಿಂಧ್ ಪೊಲೀಸರು ಮಾಡಿರುವ ಸರಣಿ ಟ್ವೀಟ್ಗಳು ಸೇನೆ ಹಾಗೂ ಪೊಲೀಸರ ನಡುವಿನ ಕಿತ್ತಾಟವನ್ನು ಬಹಿರಂಗಗೊಳಿಸಿದೆ. ಇದರ ತನಿಖೆಗೆ ಸೇನಾ ಮುಖ್ಯಸ್ಥರು ಆದೇಶಿಸಿರುವುದರಿಂದ ತನಿಖೆ ಮುಗಿಯುವವರೆಗೂ ರಜೆ ತೆಗೆದುಕೊಳ್ಳದಂತೆ ತಮ್ಮ ಕಿರಿಯ ಅಧಿಕಾರಿಗಳಿಗೆ ಮಹರ್ ಸೂಚಿಸಿದ್ದಾರೆ.
ಬೂದು ಪಟ್ಟಿಯಲ್ಲಿಯೇ ಉಳಿಯಲಿದೆ ಪಾಕಿಸ್ತಾನ
ಬೂದು ಪಟ್ಟಿಯಲ್ಲಿಯೇ ಉಳಿಯಲಿದೆ ಪಾಕಿಸ್ತಾನ
ಇಮ್ರಾನ್ ಖಾನ್ ಕಾರಣ
ಇಡೀ ಘಟನೆಗೆ ಸಿಂಧ್ ಸರ್ಕಾರವೇ ಕಾರಣ ಎಂದು ಇಮ್ರಾನ್ ಖಾನ್ ಸರ್ಕಾರದ ಇಬ್ಬರು ಸಚಿವರು ಆರೋಪಿಸಿದ್ದಾರೆ. ಇನ್ನೊಂದೆಡೆ ಈ ಘಟನೆ ಬಗ್ಗೆ ಇಮ್ರಾನ್ ಖಾನ್ ಮೌನವನ್ನು ವಿರೋಧಪಕ್ಷಗಳು ಪ್ರಶ್ನಿಸಿವೆ. ರಾಜಕೀಯಕ್ಕೆ ಸೇನೆಯನ್ನು ಎಳೆಯುವ ಮೂಲಕ ಕೇಂದ್ರ ಹಾಗೂ ಪ್ರಾಂತ್ಯದ ನಡುವೆ ಸಂಘರ್ಷ ಸೃಷ್ಟಿಗೆ ಇಮ್ರಾನ್ ಕಾರಣ ಎಂದು ದೂರಿವೆ.
ಉದ್ದೇಶಪೂರ್ವಕ ಕೆಲಸ
ಇದು ಮುಖ್ಯವಾಗಿ ಪ್ರಧಾನಿ ಇಮ್ರಾನ್ ಖಾನ್ ಅವರ ಜವಾಬ್ದಾರಿ. ಆದರೆ ಅವರು ಎಲ್ಲಿಯೂ ಕಾಣಿಸುತ್ತಿಲ್ಲ. ಇಡೀ ಸಿಂಧ್ ಪೊಲೀಸರ ನೈತಿಕ ಬಲವನ್ನು ಕುಗ್ಗಿಸಲಾಗುತ್ತಿದೆ. ಈ ಪ್ರಾಂತ್ಯದಲ್ಲಿ ತಮ್ಮ ಸರ್ಕಾರ ಆಡಳಿತ ನಡೆಸುತ್ತಿಲ್ಲ ಎಂಬ ಕಾರಣಕ್ಕೆ ಇಮ್ರಾನ್ ಖಾನ್ ಉದ್ದೇಶಪೂರ್ವಕವಾಗಿ ಸೇನೆಯನ್ನು ಛೂಬಿಟ್ಟಿದ್ದಾರೆ ಎಂದು ಪಿಪಿಪಿ ಆರೋಪಿಸಿದೆ.
ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಅವಕಾಶ ಸಾಧ್ಯತೆ: ಮಸೂದೆಗೆ ಒಪ್ಪಿಗೆ ನೀಡಿದ ಪಾಕ್ ಸಮಿತಿ