ಮಾನವನ ತಪ್ಪುಗಳಿಂದ ವಿನಾಶದತ್ತ ಭೂಮಿ..? ಬಾಹ್ಯಾಕಾಶ ಚಿತ್ರಗಳು ನೀಡಿವೆ ಸುಳಿವು..!
ಭೂಮಿ ಬದಲಾಗುತ್ತಿದೆ, ಭೂಮಿ ಮೊದಲಿನಂತೆ ಇಲ್ಲ, ಎಲ್ಲಾ ಬುಡಮೇಲು ಮಾಡುತ್ತಿರುವುದು ಮಾನವನ ಕೃತ್ಯಗಳು. ಮಳೆಗಾಲ ಬಂದಾಗ ಸರಿಯಾಗಿ ಮಳೆ ಬೀಳುತ್ತಿಲ್ಲ, ಚಳಿಗಾಲ ಬಂದಾಗ ಪದೇ ಪದೆ ಭಾರಿ ಮಳೆ ಸುರಿಯುತ್ತೆ. ಇನ್ನು ಬೇಸಿಗೆಯ ಬಿಸಿ ದುಪ್ಪಟ್ಟಾಗುತ್ತಾ ಸಾಗುತ್ತಿದೆ.
ಇದು ಒಂದು ದೇಶದ ಕಥೆಯಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳು ತಾಪಮಾನ ಏರಿಕೆಯ ಬಿಸಿ ಅನುಭವಿಸುತ್ತಿವೆ. ಅದ್ರಲ್ಲೂ ಭಾರಿ ಪ್ರಮಾಣದ ಹಿಮ ಪದರ ಹೊಂದಿದ್ದ ಧ್ರುವ ಪ್ರದೇಶದಲ್ಲಿ ಹಿಮ ಕರುಗುತ್ತಿದೆ. ಅದು ಎಷ್ಟರಮಟ್ಟಿಗೆ ಎಂದ್ರೆ, ಇನ್ನೇನು ಅಷ್ಟೋ-ಇಷ್ಟೋ ಹಿಮ ಉಳಿದುಕೊಂಡಿದೆ.
ಮನುಷ್ಯನೇ ಸೃಷ್ಟಿಸಿದ ಪ್ರಳಯ! ಅಳಿಸಿ ಹೋಗುತ್ತಾ ಮಾನವರ ಇತಿಹಾಸ?
ಅಂದಹಾಗೆ ನಾಸಾ ಅಧ್ಯಯನದ ಪ್ರಕಾರ 1981ರಿಂದ 2021ರ ನಡುವೆ ಪ್ರತಿ 10 ವರ್ಷದಲ್ಲಿ ಶೇಕಡಾ 13ರಷ್ಟು ಹಿಮ ಕರಗಿದೆ. ದಕ್ಷಿಣ ಧ್ರುವದಲ್ಲಿ ಹಿಮ ಕರಗುವ ಪ್ರಮಾಣ ಕಡಿಮೆ ಇದ್ದರೂ, ಉತ್ತರ ಧ್ರುವದಲ್ಲಿ ತುಂಬಾ ಆತಂಕ ಹುಟ್ಟಿಸಿದೆ. ಒಂದಿಷ್ಟು ರೊಟ್ಟಿ ಚೂರಿನಂತೆ ಅಲ್ಲಿ ಹಿಮ ಉಳಿದುಕೊಂಡಿದೆ. ಮಾನವನ ದುರಾಸೆ ಪರಿಣಾಮ ಮುಂದಿನ 10-20 ವರ್ಷದಲ್ಲಿ ಸಂಪೂರ್ಣ ಹಿಮ ಕರಗುವ ಆತಂಕವಿದೆ.
ಪರಿಸ್ಥಿತಿ ಕೈಮೀರಿ ಹೋಗಿದೆ
‘ಭೂಮಿ' ಜೀವಿಗಳ ವಾಸಕ್ಕೆ ಯೋಗ್ಯವಾದ ಗ್ರಹ. ಆದ್ರೆ ಹೀಗೆ ಭೂಮಿ ರೂಪುಗೊಳ್ಳಲು ಕೋಟ್ಯಂತರ ವರ್ಷ ಬೇಕಾಯಿತು. ಈ ಪರಿಶ್ರಮವನ್ನ ಮನುಷ್ಯ ಕೆಲವೇ ಕೆಲವು ವರ್ಷಗಳಲ್ಲಿ ಹಾಳು ಮಾಡಿದ್ದಾನೆ. ಕೈಗಾರಿಕೆಗಳೂ ಸೇರಿದಂತೆ ಮನುಷ್ಯರು ದಿನನಿತ್ಯ ಲಕ್ಷಾಂತರ ಟನ್ ಕಾರ್ಬನ್ ಹಾಗೂ ಕಾರ್ಬನ್ ಸಂಯುಕ್ತಗಳನ್ನು ಭೂಮಿ ವಾತಾವರಣಕ್ಕೆ ಸೇರಿಸುತ್ತಿದ್ದಾರೆ. ಇದರಿಂದ ಭೂಮಿ ತನ್ನ ಮೊದಲಿನ ಶಕ್ತಿ-ಸಾಮರ್ಥ್ಯ ಕಳೆದುಕೊಂಡಿದೆ. ಈ ಹಿಂದೆ ಸೂರ್ಯನಿಂದ ಬರುವ ವಿಕಿರಣ ಹಾಗೂ ಬಿಸಿಯನ್ನ ಬಾಹ್ಯಾಕಾಶಕ್ಕೆ ಬಿಡುತ್ತಿತ್ತು ಭೂಮಿ. ಜೀವಿಗಳಿಗೆ ಈ ಪ್ರಕ್ರಿಯೆ ಶ್ರೀರಕ್ಷೆಯಾಗಿತ್ತು. ಆದ್ರೆ ಈಗ ಎಲ್ಲಾ ಉಲ್ಟಾ ಆಗಿದೆ, ವಾತಾವರಣದಲ್ಲಿ ಅತಿಯಾದ ಕಾರ್ಬನ್ ಸಂಯುಕ್ತಗಳು ಸೇರಿರುವ ಪರಿಣಾಮ, ಸೂರ್ಯನಿಂದ ಬರುವ ಅಷ್ಟೂ ಬಿಸಿಯನ್ನ ಭೂಮಿ ಹೀರಿಕೊಳ್ಳುತ್ತಿದೆ. ಇದರಿಂದ ಭೂಮಿಯ ವಾತಾವರಣದಲ್ಲಿ ಅಪಾಯಕಾರಿ ವಿಕಿರಣಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ.
ಚೀನಾ ಖಡಕ್ ಕ್ರಮ..!
10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.
ಹಿಮ ಕರಗಿದರೆ ಇವರಿಗೆ ಖುಷಿ
ಇದು ಕಷ್ಟವೆನಿಸಿದರೂ ಸತ್ಯ. ರಷ್ಯಾದ ಸೈಬೀರಿಯಾ ಭಾಗ ಉತ್ತರ ಧ್ರುವ ಪ್ರದೇಶಕ್ಕೆ ಸಮೀಪದಲ್ಲೇ ಇದ್ದು, ತುಂಬಾ ದೊಡ್ಡದಾದ ಪ್ರಾಂತ್ಯವಾಗಿದೆ. ಇಲ್ಲಿನ ಜನರು ಚಳಿಯ ಅಬ್ಬರಕ್ಕೆ ರೋಸಿ ಹೋಗಿದ್ದಾರೆ. ಈ ನಡುವೆ ಕೆಲವು ದಶಕಗಳಿಂದ ಸೈಬೀರಿಯಾ ಭಾಗದಲ್ಲಿ ಬಿಸಿ ಹೆಚ್ಚಾಗುತ್ತಾ ಹೋಗುತ್ತಿದ್ದು, ಹಿಮ ಕಡಿಮೆಯಾಗುತ್ತಿದೆ. ಅಷ್ಟೇ ಏಕೆ ಸೈಬೀರಿಯಾ ತಾಪಮಾನದಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ ನಾವು ಕೂಡ ಎಲ್ಲರಂತೆ ಜೀವನ ನಡೆಸಬಹುದು, ಹಿಮದಿಂದ ಮುಕ್ತಿ ಪಡೆಯಬಹುದು ಎಂಬ ಮಹದಾಸೆ ರಷ್ಯಾ ದೇಶದ ಸೈಬೀರಿಯಾ ಪ್ರಾಂತ್ಯದ ಜನರಿಗೆ ಇದೆ. ಆದರೆ ತಾಪಮಾನ ಏರಿಕೆ ಇತರ ಜೀವಿಗಳಿಗೆ ಕಂಟಕವಾಗುತ್ತಿದೆ.
Recommended Video
ಸಂಕಷ್ಟಕ್ಕೆ ಕೊನೆಯೇ ಇಲ್ವಾ..?
ಜಾಗತಿಕ ತಾಪಮಾನ ಏರಿಕೆ ಹಾಗೂ ಇದರಿಂದ ಉಂಟಾಗುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮೊದಲು ಬಲಿ ಆಗುವುದೇ ದ್ವೀಪ ರಾಷ್ಟ್ರಗಳು. ಏಕೆಂದರೆ ಧ್ರುವ ಪ್ರದೇಶದ ಹಿಮ ಕರಗಿ, ಸಮುದ್ರದ ನೀರಿನ ಮಟ್ಟ ಹೆಚ್ಚಾದ ಸಂದರ್ಭದಲ್ಲಿ ಕರಾವಳಿ ಭಾಗದ ಅದರಲ್ಲೂ ಸಣ್ಣಪುಟ್ಟ ದ್ವೀಪ ರಾಷ್ಟ್ರಗಳ ಜನ ನಲುಗಿ ಹೋಗುತ್ತಾರೆ. ಈ ಬಗ್ಗೆ ವಿಜ್ಞಾನಿಗಳು ಎಚ್ಚರಿಸುತ್ತಾ ಬಂದರೂ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಬರುತ್ತಿಲ್ಲ. ಸಮುದ್ರದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸಹಜವಾಗಿ ಭೂಮಿಯನ್ನ ನುಂಗಿ ಹಾಕುತ್ತಿದೆ. ಈಗಾಗಲೇ ಅದೆಷ್ಟೋ ಸಣ್ಣಪುಟ್ಟ ದ್ವೀಪಗಳು ಹೀಗೆ ಸಮುದ್ರದ ಆರ್ಭಟಕ್ಕೆ ಮುಳುಗಿ ಹೋಗಿರುವ ಉದಾಹರಣೆ ಇದೆ.