130 ಕೋಟಿ ಜನರು ಶಕ್ತಿಶಾಲಿ ಸರ್ಕಾರ ರಚಿಸಿದ್ದಾರೆ: ಜಪಾನ್ನಲ್ಲಿ ಮೋದಿ
ಒಸಾಕಾ (ಜಪಾನ್) ಜೂನ್ 27: ನವಭಾರತದ ಕನಸು ಮತ್ತು ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಶ್ರಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಪಾನ್ನ ಕೋಬೆಯಲ್ಲಿರುವ ಹ್ಯೋಗೊ ಪ್ರಿಫೆಕ್ಚರ್ ಗೆಸ್ಟ್ ಹೌಸ್ನಲ್ಲಿ ಗುರುವಾರ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಪಾನಿನಲ್ಲಿ ಜಿ20 ಶೃಂಗಸಭೆ: ಟ್ರಂಪ್ ರನ್ನು ಭೇಟಿಯಾಗಲಿರುವ ಮೋದಿ
1971ರ ಬಳಿಕ ಮೊದಲ ಬಾರಿಗೆ ದೇಶವು ಸರ್ಕಾರವೊಂದಕ್ಕೆ ಆಡಳಿತ ಪರ ಬಹುಮತವನ್ನು ನೀಡಿದೆ. ಈ ವಿಜಯಗಳು ಸತ್ಯದ ಗೆಲುವು, ಭಾರತದ ಪ್ರಜಾಪ್ರಭುತ್ವದ ಗೆಲುವು. ಭಾರತದಲ್ಲಿನ 130 ಕೋಟಿ ಜನರು ನನ್ನ ಮೇಲೆ ಮತ್ತೊಮ್ಮೆ ವಿಶ್ವಾಸ ಇರಿಸಿ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಮೋದಿ ಹೇಳಿದರು.
ಭಾರತದ 5 ಟ್ರಿಲಿಯನ್ ಆರ್ಥಿಕತೆ ಗುರಿಯನ್ನು ಸಾಧಿಸಲು ಜಪಾನ್ ನೆರವು ನೀಡುತ್ತಿದೆ. ಸ್ವಾಮಿ ವಿವೇಕಾನಂದ, ಗುರುದೇವ ರವೀಂದ್ರನಾಥ್ ಟ್ಯಾಗೋರ್, ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ನ್ಯಾ. ರಾಧಾವಿನೋದ್ ಪಾಲ್ ಮತ್ತು ಇನ್ನೂ ಅನೇಕರು ಜಪಾನ್ನೊಂದಿಗಿನ ಭಾರತದ ಬಾಂಧವ್ಯವನ್ನು ಬಲಪಡಿಸಿದರು. ಈ ಕಾರಣದಿಂದಲೇ ಎರಡನೆಯ ವಿಶ್ವಯುದ್ಧದ ಬಳಿಕ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗಿ ಬೆಳೆಯಿತು ಎಂದರು.
ಬಾಹ್ಯಾಕಾಶದಲ್ಲಿ ಭಾರತದ ಮೈಲುಗಲ್ಲು
ನಾವು ಚಂದ್ರಯಾನ-2ಕ್ಕೆ ಸಿದ್ಧರಾಗಿದ್ದೇವೆ. ಮೊದಲ ಮಾನವಸಹಿತ ನೌಕೆ ಗಗನಯಾನ್ಗೆ ಸಿದ್ಧತೆ ನಡೆಸಿದ್ದೇವೆ. ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಗಂಭೀರ ಸಂಶೋಧನೆಗಳನ್ನು ನಡೆಸುತ್ತಿದೆ. ಬಾಹ್ಯಾಕಾಶದಲ್ಲಿ ಭಾರತದ ಬಾವುಟವನ್ನು ಹಾರಿಸಲು ಬಯಸಿದ್ದೇವೆ. ಭಾರತದ್ದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸಹ ಬಯಸಿದ್ದೇವೆ ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ಪಾಲುದಾರ ಜಪಾನ್
ಕಾರ್ ತಯಾರಿಕೆಯಿಂದ ಹಿಡಿದು ಹೆಚ್ಚಿನ ಬುಲೆಟ್ ಟ್ರೈನ್ಗಳ ನಿರ್ಮಾಣದಲ್ಲಿನ ಸಹಕಾರಕ್ಕೆ ಭಾರತ ಮತ್ತು ಜಪಾನ್ ಕೈಜೋಡಿಸಿವೆ. ಭಾರತದ ಅಭಿವೃದ್ಧಿಯಲ್ಲಿ ದಶಕಗಳಿಂದಲೂ ಜಪಾನ್ ಪಾಲುದಾರ ದೇಶವಾಗಿದೆ. ಜಗತ್ತಿನೊಂದಿಗಿನ ಭಾರತದ ಒಪ್ಪಂದಗಳಲ್ಲಿ ಜಪಾನ್ ಮಹತ್ವದ ಪಾತ್ರ ವಹಿಸಿದೆ. ನಮ್ಮದು ಸೌಹಾರ್ದವನ್ನು ಆಧರಿಸಿದ ಸಂಬಂಧ ಮತ್ತು ಪರಸ್ಪರರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂದರು.
'ಇದು ಸ್ವೀಕಾರಾರ್ಹವಲ್ಲ,' ಎಂದು ಮೋದಿ ಜೊತೆ ಮಾತುಕತೆಗೆ ನಿಂತ ಟ್ರಂಪ್
ಪ್ರಧಾನ ಸೇವಕನ ಮೇಲೆ ಹೆಚ್ಚಿನ ನಂಬಿಕೆ
ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂಬ ನಮ್ಮ ಮಂತ್ರವು ಭಾರತದೆಡೆಗಿನ ಜಗತ್ತಿನ ನಂಬಿಕೆಯನ್ನು ಬಲಗೊಳಿಸಿದೆ. ದೇಶದ ಜನರು ಈ ಪ್ರಧಾನ ಸೇವಕನ ಮೇಲೆ ಇನ್ನೂ ಹೆಚ್ಚಿನ ನಂಬಿಕೆ ಪ್ರದರ್ಶಿಸಿದ್ದಾರೆ. ಈ ತೀರ್ಪಿನಲ್ಲಿ ನಿಮ್ಮಲ್ಲಿಯೂ ಅನೇಕರು ಕೊಡುಗೆ ನೀಡಿದ್ದೀರಿ ಎನ್ನುವುದು ನನಗೆ ತಿಳಿದಿದೆ ಎಂದು ಹೇಳಿದರು.
ಚೀನಾವನ್ನು ನಾವು ಹೊರಗಿಟ್ಟರೆ ದೇಶದ 61 ಕೋಟಿ ಮತದಾರರು ಜಗತ್ತಿನ ಯಾವುದೇ ಒಂದು ದೇಶದ ಜನಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇತಿಹಾಸದಲ್ಲಿಯೇ ಈ ಮಟ್ಟದ ಪ್ರಜಾಪ್ರಭುತ್ವದ ಚುನಾವಣೆ ನಡೆದಿರಲಿಲ್ಲ. ಇಂತಹ ಪ್ರಯತ್ನಕ್ಕೆ ಪ್ರತಿ ಭಾರತೀಯನೂ ಹೆಮ್ಮೆ ಪಡಬೇಕು. ಇದು ಪ್ರಜಾಪ್ರಭುತ್ವದೆಡೆಗೆ ಸಾಮಾನ್ಯ ಭಾರತೀಯನ ಬದ್ಧತೆಯ ಸಂಕೇತ ಎಂದು ಹೇಳಿದರು.
ಧಾರ್ಮಿಕ, ಸಾಂಸ್ಕೃತಿಕ ಸಂಬಂಧ
ಕ್ಯೋಟೊದ ಹಬ್ಬವೊಂದರಲ್ಲಿ ಭಾರತದ ರೇಷ್ಮೆಯನ್ನು ಬಳಸಲಾಗುತ್ತದೆ. ಜಪಾನಿನ ಕೆಲವು ಮೂರ್ತಿಗಳು ಭಾರತದ ಏಳು ದೇವರು ಮತ್ತು ದೇವತೆಗಳೊಂದಿಗೆ ನೇರ ಸಂಬಂಧ ಹೊಂದಿವೆ. ಭಾರತದ ಧ್ಯಾನವನ್ನು ಜಪಾನ್ನಲ್ಲಿ 'ಝೆನ್' ಎನ್ನಲಾಗುತ್ತದೆ. ಭಾರತದಲ್ಲಿನ 'ಸೇವೆ' ಜಪಾನ್ನಲ್ಲಿಯೂ 'ಸೇವೆ'ಯಾಗಿದೆ ಎಂದರು.
ಪೊಂಪಿಯೋ-ಮೋದಿ ಭೇಟಿ: ಮಹತ್ವದ ವಿಷಯಗಳ ಕುರಿತು ಚರ್ಚೆ
50 ಸಾವಿರ ಸ್ಟಾರ್ಅಪ್ ಗುರಿ
ಜಪಾನ್ ಯೋಜನೆಯ ಮುದ್ರೆ ಇಲ್ಲದ ಭಾರತದ ಭಾಗವೇ ಇಲ್ಲ. ನಾವು ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ಬಯಸಿದ್ದೇವೆ. ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯ ನಮ್ಮ ಮುಖ್ಯವಾದ ಕ್ಷೇತ್ರಗಳು. ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಸ್ಟಾರ್ಅಪ್ಗಳಿಗೆ ಎಕೋಸಿಸ್ಟಂ ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಬಾಂಧವ್ಯ ವೃದ್ಧಿಗೆ ಅವಕಾಶ
ಜನರಲ್ಲಿ ಹೆಚ್ಚುತ್ತಿರುವ ಆಕಾಂಕ್ಷೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಮೈಲುಗಲ್ಲುಗಳನ್ನು ಹಿಂಬಾಲಿಸುವುದನ್ನು ನಾವು ಮುಂದುವರಿಸುತ್ತೇವೆ. 2014ರಲ್ಲಿ ನಾನು ಪ್ರಧಾನಿಯಾದ ಬಳಿಕ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಸೇರಿ ಭಾರತ-ಜಪಾನ್ ಬಾಂಧವ್ಯವನ್ನು ವೃದ್ಧಿಸಲು ಅವಕಾಶ ದೊರಕಿದೆ. ನಮ್ಮ ರಾಜತಾಂತ್ರಿಕ ಬಾಂಧವ್ಯವನ್ನು ರಾಜಧಾನಿ, ರಾಯಭಾರಿಗಳಾಚೆ ನೇರವಾಗಿ ಜನರೊಂದಿಗೆ ತೆಗೆದುಕೊಂಡು ಹೋಗಿದ್ದೇವೆ ಎಂದರು.