ಇಮ್ರಾನ್ ಖಾನ್ ಎದುರಲ್ಲೇ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
Recommended Video
ಬಿಷೆಕ್, ಜೂನ್ 14: ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ (ಎಸ್ಸಿಒ) ಶೃಂಗ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎದುರಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದರು.
ಭಯೋತ್ಪಾದನೆಯನ್ನು ಯಾವೆಲ್ಲ ದೇಶಗಳು ಪೋಷಿಸುತ್ತವೋ ಆ ಎಲ್ಲ ದೇಶಗಳನ್ನೂ ಜಗತ್ತಿನ ಇತರ ದೇಶಗಳು ದೂರ ಇಡಬೇಕು ಎಂದು ಮೋದಿ ಗುಡುಗಿದರು.
ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ
"ಭಯೋತ್ಪಾದಕರಿಗೆ ಯಾವ ದೇಶ ಹಣ ನೀಡುತ್ತದೋ, ಆಶ್ರಯ ನೀಡುತ್ತದೋ, ಕುಮ್ಮಕ್ಕು ನೀಡುತ್ತದೋ ಆ ದೇಶವೇ ಭಯೋತ್ಪಾದಕ ದಾಳಿಗಳಿಗೂ ಹೊಣೆಯಾಗಿರುತ್ತದೆ. ಆದ್ದರಿಂದ ವಿಶ್ವದ ಇತರ ದೇಶಗಳು ಉಗ್ರಗಾಮಿತ್ವಕ್ಕೆ ಬೆಂಬಲ ನೀಡುವ ದೇಶವನ್ನು ದೂರ ಇಡಬೇಕು"- ನರೇಂದ್ರ ಮೋದಿ
ಮೋದಿ ಜೊತೆ ಮಾತುಕತೆಗಾಗಿ ಗೋಗರೆದರೆ ಇಮ್ರಾನ್ ಖಾನ್?
ಶ್ರೀಲಂಕಾ ದಾಳಿಯ ನೆನಪು
"ಸಾಹಿತ್ಯ ಮತ್ತು ಸಂಸ್ಕೃತಿ ನಮ್ಮ ಸಮಾಜಕ್ಕೆ ಒಂದು ಧನಾತ್ಮಕ ಆಯಾಮ ನೀಡಿದೆ, ದಯವಿಟ್ಟು ಯುವಕರಲ್ಲಿ ದ್ವೇಷ ಬಿತ್ತುವುದನ್ನು ನಿಲ್ಲಿಸಿ. ನಾನು ಶ್ರೀಲಂಕಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಸೇಂಟ್ ಆಂಟನಿ ಚರ್ಚ್ ಗೆ ತೆರಳಿದ್ದೆ. ಅಲ್ಲಿ ಭಯೋತ್ಪಾದನೆಯ ಕರಾಳ ಮುಖಕ್ಕೆ ಬಲಿಯಾದ ಮುಗ್ಧರ ಜೀವವನ್ನು ಕಂಡೆ" -ನರೇಂದ್ರ ಮೋದಿ
ಚೀನಾ ಅಧ್ಯಕ್ಷರೊಂದಿಗೂ ಮಾತುಕತೆ
ಗುರುವಾರ ಚೀನಾ ಅಧ್ಯಕ್ಷ ಕ್ಸೈ ಜಿಂಪಿಂಗ್ ಅವರೊಂದಿಗೆ ನರೇಂದ್ರ ಮೋದಿ ಮಾತುಕತೆ ನಡೆಸಿದ್ದರು. ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಆ ದೇಶದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದಿದ್ದರು. ಆದ್ದರಿಂದಲೇ ಇಮ್ರಾನ್ ಖಾನ್ ಅವರು ಭಾರತದೊಂದಿಗೆ ಮಾತುಕತೆ ನಡೆಸಲು ತುದಿಗಾಲಿನಲ್ಲಿದ್ದರೂ ಮೋದಿ ಅದಕ್ಕೆ ಕ್ಯಾರೇ ಎನ್ನದೆ ಮೌನವಾಗಿದ್ದಾರೆ.
ಪ್ರಧಾನಿ ಮೋದಿ-ಇಮ್ರಾನ್ ಖಾನ್ ಎದುರೆದುರು ಬಂದರೂ ಮಾತಿಲ್ಲ ಕತೆ ಇಲ್ಲ!
ಉಭಯ ಕುಶಲೋಪರಿ ವಿನಿಮಯವೂ ಇಲ್ಲ!
ಪುಲ್ವಾಮಾ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಬಿಗುಡಾಯಿಸಿದ್ದು ಎಸ್ ಸಿಒ ಶೃಂಗಸಭೆಯಲ್ಲಾದರೂ ಭಾರತದೊಂದಿಗೆ ಮಾತುಕತೆ ನಡೆಸುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತ ಸೊಪ್ಪು ಹಾಕಿಲ್ಲ. ಆದರೆ ಮಾತುಕತೆಗೆ ಸಿದ್ಧ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಒಂದೇ ಸಭೆಯಲ್ಲಿದ್ದರೂ, ಒಂದೇ ಹಾಲ್ ನಲ್ಲಿ ಔತಣಕೂಟದಲ್ಲಿ ಪಾಲ್ಗೊಂಡರೂ ಮೋದಿ ಮತ್ತು ಇಮ್ರಾನ್ ಖಾನ್ ಪರಸ್ಪರ ಉಭಯಕುಶಲೋಪರಿಯನ್ನೂ ವಿನಿಮಯ ಮಾಡಿಕೊಳ್ಳದಿರುವುದು ಎರಡು ದೇಶಗಳ ನಡುವೆ ಹಳಸಿದ ಸೌಹಾರ್ದ ಸಂಬಂಧಕ್ಕೆ ಕನ್ನಡಿಯಾಗಿದೆ.