ಭಾರತಕ್ಕೆ ಒಮ್ಮೆಯಾದರೂ ಬನ್ನಿ ಜಪಾನಿ ಯುವಕರಿಗೆ ಪ್ರಧಾನಿ ಮೋದಿ ಕರೆ
ಟೋಕಿಯೋ, ಮೇ 23: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ಜಪಾನೀ ಯುವಸಮುದಾಯಕ್ಕೆ ಭಾರತಕ್ಕೆ ಭೇಟಿ ನೀಡುವಂತೆ ಕೇಳಿಕೊಂಡಿದ್ದಾರೆ. ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಪಾನ್ ದೇಶದ ಬಗ್ಗೆ ಸ್ವಾಮಿ ವಿವೇಕಾನಂದರು ಹೊಂದಿದ್ದ ಅಭಿಮಾನವನ್ನು ಪ್ರಸ್ತಾಪಿಸಿ, ಭಾರತಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕೆಂದು ಜಪಾನೀ ಯುವಜನತೆಗೆ ಕರೆ ನೀಡಿದ್ದಾರೆ.
ಭಾರತದ ಯುವಕರು ತಮ್ಮ ಜೀವಿತದಲ್ಲಿ ಒಮ್ಮೆಯಾದರೂ ಜಪಾನ್ ದೇಶಕ್ಕೆ ಭೇಟಿ ನೀಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಅದೇ ಭಾವನೆಯಲ್ಲಿ ನಾವು ಜಪಾನ್ ಯುವಕರಿಗೆ ಭಾರತಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಟೋಕಿಯೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ತಂತ್ರಜ್ಞಾನ ಆಧರಿತ ಭವಿಷ್ಯ:
ತನ್ನ ಪುರಾತನ ಇತಿಹಾಸ ಮತ್ತು ಸಾಧನೆ ಬಗ್ಗೆ ಭಾರತೀಯರಿಗೆ ಎಷ್ಟು ಹೆಮ್ಮೆ ಇದೆಯೋ, ತಂತ್ರಜ್ಞಾನ ಆಧರಿತ ಮತ್ತು ಕೌಶಲ್ಯ ಆಧರಿತ ಭವಿಷ್ಯದ ಬಗ್ಗೆಯೂ ಅಷ್ಟೇ ನಿರೀಕ್ಷೆ ಹೊಂದಿದ್ದಾರೆ. ಜನರ ನೇತೃತ್ವದ ಆಡಳಿತವು ಪ್ರಜಾತಂತ್ರದಲ್ಲಿ ಜನರಿಗಿರುವ ನಂಬಿಕೆಯನ್ನು ಹೆಚ್ಚಿಸುತ್ತಲೇ ಇದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಕೊರಿಯಾ ಅಣ್ವಸ್ತ್ರ ಧಮ್ಕಿ ನಡುವೆ ಜಪಾನ್ಗೆ ಬಂದಿಳಿದ ಬೈಡನ್
ಮೋದಿ ಮೋದಿ, ಜೈ ಶ್ರೀರಾಮ್ ಘೋಷಣೆ:
ಇದಕ್ಕೂ ಮುನ್ನ ನರೇಂದ್ರ ಮೋದಿ ಭಾಷಣಕ್ಕೆ ಎದ್ದು ನಿಲ್ಲುತ್ತಿದ್ದಂತೆಯೇ ಸಭಾಂಗಣದಲ್ಲಿ ನೆರೆದಿದ್ದವರು 'ಮೋದಿ ಮೋದಿ', 'ಜೈ ಶ್ರೀರಾಮ್' ಘೋಷಣೆಗಳನ್ನು ಕೂಗುತ್ತಾ ಹರ್ಷ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇದರಿಂದ ವಿಸ್ಮಿತಗೊಂಡ ಪ್ರಧಾನಿಗಳು, "ನಾನು ಜಪಾನ್ ದೇಶಕ್ಕೆ ಬಂದಾಗೆಲ್ಲಾ ಇಲ್ಲಿನ ಜನರ ಅಪಾರ ಪ್ರೀತಿ ಪಡೆಯುತ್ತೇನೆ. ಇಲ್ಲಿರುವ ನೀವು ಕೆಲವರು ಹಲವು ವರ್ಷಗಳಿಂದ ಜಪಾನ್ನಲ್ಲಿ ನೆಲಸಿದ್ದು, ಇಲ್ಲಿಯ ಮಣ್ಣಿನ ಸಂಸ್ಕೃತಿಗೆ ಹೊಂದಿಕೊಂಡಿದ್ದೀರಿ. ಆದರೂ ಕೂಡ ಭಾರತೀಯ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ನಿಮಗಿರುವ ಬದ್ಧತೆ ಹೆಚ್ಚುತ್ತಲೇ ಇದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತೀಯರು ನಮ್ಮ ಕರ್ಮಭೂಮಿಗೆ ಮನಃಪೂರ್ವಕವಾಗಿ ಒಲವು
"ನಾವು ಭಾರತೀಯರು ನಮ್ಮ ಕರ್ಮಭೂಮಿಗೆ ಮನಃಪೂರ್ವಕವಾಗಿ ಒಲವು ತೋರುತ್ತೇವೆ. ಆದರೂ ಕೂಡ ಮಾತೃಭೂಮಿಗಿರುವ ನಮ್ಮ ಪ್ರೀತಿ ಮಾತ್ರ ಅಳಿಸಿಹೋಗಲ್ಲ. ನಮ್ಮ ತಾಯ್ನೆಲದಿಂದ ದೂರ ಮಾತ್ರ ಹೋಗಲು ಸಾಧ್ಯವಾಗುವುದಿಲ್ಲ. ಇದು ನಮ್ಮ ದೊಡ್ಡ ಶಕ್ತಿ" ಎಂದಿದ್ಧಾರೆ.
ಭಾರತದಲ್ಲಿ ಜನನಾಯಕತ್ವದ ಆಡಳಿತ ವ್ಯವಸ್ಥೆ ಗಳಿಸಿರುವ ಯಶಸ್ಸಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, "ಈ ಮಾದರಿಯ ಆಡಳಿತ ತನ್ನ ಗುರಿಯನ್ನು ಸಮರ್ಪಕವಾಗಿ ಮುಟ್ಟುತ್ತಿದೆ. ಜನರು ಪ್ರಜಾತಂತ್ರ ವ್ಯವಸ್ಥೆ ಮೇಲೆ ಇಟ್ಟಿರುವ ನಂಬಿಕೆ ನಿರಂತರವಾಗಿ ಗಟ್ಟಿಗೊಳ್ಳುತ್ತಾ ಹೋಗಲು ಇದು ಪ್ರಮುಖ ಕಾರಣ. ಇವತ್ತು ಭಾರತೀಯರು ತನ್ನ ಪುರಾತನ ಇತಿಹಾಸದ ಬಗ್ಗೆ ಎಷ್ಟು ಹೆಮ್ಮೆ ಭಾವನೆ ಹೊಂದಿದ್ದಾರೋ, ತಂತ್ರಜ್ಞಾನ ಕೇಂದ್ರಿತ, ವಿಜ್ಞಾನ ಕೇಂದ್ರಿತ, ಕೌಶಲ್ಯ ಕೇಂದ್ರಿತ ಭವಿಷ್ಯದ ಬಗ್ಗೆಯೂ ಅಷ್ಟೇ ಆಶಯ ಇಟ್ಟುಕೊಂಡಿದ್ದಾರೆ" ಎಂದು ಮೋದಿ ತಿಳಿಸಿದ್ಧಾರೆ.
ರಾಜಧಾನಿ ಟೋಕಿಯೋಗೆ ಬಂದಿಳಿದ ನರೇಂದ್ರ ಮೋದಿ
ಇಂದು ಜಪಾನ್ ದೇಶದ ರಾಜಧಾನಿ ಟೋಕಿಯೋಗೆ ಬಂದಿಳಿದ ನರೇಂದ್ರ ಮೋದಿ, ಈ ಸಮಾರಂಭಕ್ಕೆ ಮುನ್ನ 34 ಜಪಾನೀ ಕಂಪನಿಗಳ ಸಿಇಒಗಳು ಮತ್ತು ಉನ್ನತ ಅಧಿಕಾರಿಗಳ ಜೊತೆ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡರು. 'ವಿಶ್ವಕ್ಕಾಗಿ ಭಾರತದಲ್ಲಿ ತಯಾರಿಸಿ' ಎಂಬ ಭಾರತೀಯ ಆಂದಲನಕ್ಕೆ ಕೈ ಜೋಡಿಸಬೇಕೆಂದು ಜಪಾನೀ ಉದ್ಯಮಿಗಳನ್ನು ಕೇಳಿಕೊಂಡರು.
ಇಂದು ಜಪಾನ್ ಪ್ರಧಾನಿ ಫುಮಿಯೋ ಕಿಶಿದಾರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ಮೋದಿ, ನಾಳೆ ಮಂಗಳವಾರ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಯೂ ಅವರು ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.
(ಒನ್ಇಂಡಿಯಾ ಸುದ್ದಿ)