ಒಮಾನ್ ನಲ್ಲೂ ಕಾಂಗ್ರೆಸ್ ಜಪ ಮಾಡಿದ ಮೋದಿ! 8 ಸಂಗತಿ
ಮಸ್ಕಟ್, ಫೆಬ್ರವರಿ 12: ತಮ್ಮ ಅಸ್ಖಲಿತ ಮಾತು, ಆಕರ್ಷಕ ಆಂಗಿಕ ಅಭಿವ್ಯಕ್ತಿಯ ಮೂಲಕ ಉತ್ತಮ ವಾಗ್ಮಿ ಅನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ತಮ್ಮ ಮಾತಿನ ಓಘದಲ್ಲಿ ಎಡವಿಬೀಳುತ್ತಿದ್ದಾರಾ..?
ಸಿಗುವ ವೇದಿಕೆಯಲನ್ನೆಲ್ಲ ವಿಪಕ್ಷವನ್ನು ದೂರುವುದಕ್ಕೆ ಬಳಸುತ್ತಿದ್ದಾರಾ..? ಎನ್ ಡಿಎ ಸಾಧನೆಗಿಂತ ಹೆಚ್ಚಾಗಿ, ಕಳೆದ ಅವಧಿಯಲ್ಲಿ ಯುಪಿಎ ಸರ್ಕಾರ ನಡೆಸಿದ ಹಗರಣಗಳ ಕುರಿತೇ ಮೋದಿ ಹೆಚ್ಚು ಮಾತನಾಡುತ್ತಿದ್ದಾರಾ..? ಅಂಥದೊಂದು ಅನುಮಾನ ಇತ್ತೀಚೆಗೆ ಕಾಡುತ್ತಿದೆ!
ಪ್ಯಾಲೆಸ್ತೇನ್ ಸ್ವತಂತ್ರ ರಾಷ್ಟ್ರವಾಗಲಿ : ನರೇಂದ್ರ ಮೋದಿ
ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಭಾಷಣದ ಸಂಪೂರ್ಣ ಸಮಯವನ್ನು ಮೋದಿಯವರು ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ದೂರುವುದಕ್ಕೆ ಬಳಸಿಕೊಂಡಿದ್ದು ಸತ್ಯ. ಅದು ಪ್ರಚಾರ ಸಭೆ, ಹಾಗೆ ಮಾಡಿದರೆ ತಪ್ಪಿಲ್ಲ ಎಂದುಕೊಳ್ಳೋಣ. ಆದರೆ ನಂತರ ರಾಜ್ಯ ಸಭೆಯಲ್ಲಿ ಮಾತನಾಡುವಾಗಲೂ ಮೋದಿ ಅದೇ ಕೆಲಸ ಮಾಡಿದರು. ಇದೀಗ ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ನರೇಂದ್ರ ಮೋದಿ, ನಿನ್ನೆ(ಫೆ.11) ಒಮಾನ್ ನಲ್ಲಿ 20,000ಕ್ಕೂ ಹೆಚ್ಚು ಭಾರತೀಯರಿದ್ದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡುವಾಗಲೂ ಕಾಂಗ್ರೆಸ್ ಜಪ ಆರಂಭಿಸಿದ್ದು ಅಚ್ಚರಿ ಮೂಡಿಸಿತ್ತು! ಒಮಾನ್ ರಾಜಧಾನಿ ಮಸ್ಕತ್ ನ ಸುಲ್ತಾನ್ ಕ್ವಾಬೂಸ್ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ಮೋದಿ ಮಾಡಿದ ಭಾಷಣದ ಮುಖ್ಯಾಂಶ ಇಲ್ಲಿದೆ. ಜೊತೆಗೆ ಮೋದಿ, ಗಲ್ಫ್ ರಾಷ್ಟ್ರಗಳ ಭೇಟಿ ಕುರಿತು ತಿಳಿಯಬೇಕಾದ ಕೆಲವು ಸಂಗತಿಯೂ ಇಲ್ಲಿದೆ.
ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ
"ನನ್ನ ಸರ್ಕಾರಕ್ಕೆ ಯಾರೂ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ನನ್ನ ಸರ್ಕಾರದ ವಿರುದ್ಧ ಯಾವುದೇ ಹಗರಣದ ಆರೋಪವಿಲ್ಲ, ನಮ್ಮ ಸರ್ಕಾರದ ವಿರುದ್ಧ ಜನರು ಇಟ್ಟಿರುವ ವಿಶ್ವಾಸಕ್ಕೆ ನಾವೆಂದಿಗೂ ಮೋಸ ಮಾಡುವುದಿಲ್ಲ" ಎಂದ ಪ್ರಧಾನಿ ನರೇಂದ್ರ ಮೋದಿ, ರಾಫೆಲ್ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ವಿದೇಶದಲ್ಲೂ ಕಾಂಗ್ರೆಸ್ ಜಪ
ತನ್ನ ಅದಕ್ಷ ಆಡಳಿತ ಮತ್ತು ತಪ್ಪು ನಿರ್ಣಯಗಳಿಂದ ಹಿಂದಿನ ಸರ್ಕಾರ (ಕಾಂಗ್ರೆಸ್) ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕಡಿಮೆ ಮಾಡಿದೆ. ನಾವು ಅವನ್ನೆಲ್ಲ ಇದೀಗ ಸರಿಪಡಿಸಲು ಕಠಿಣ ಪರಿಶ್ರಮ ಹಾಕುತ್ತಿದ್ದೇವೆ- ನರೇಂದ್ರ ಮೋದಿ.
ದುಬೈನ ಅತೀದೊಡ್ಡ ದೇವಸ್ಥಾನ ನಿರ್ಮಾಣಕ್ಕೆ ಮೋದಿ ಅಡಿಗಲ್ಲು
ಮೊಳಗಿದ ವಂದೇ ಮಾತರಂ..!
ಪ್ರಧಾನಿ ಮೋದಿಯವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳು ಮೊಳಗಿದ್ದವು. ಸಾವಿರಾರು ಸಂಖ್ಯೆಯಲ್ಲಿರುವ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ತಮ್ಮ ಸರ್ಕಾರ ಹಲವು ವಿನೂತನ ಯೋಜನೆಗಳಿಂದ ಸುಮಾರು 1,40,000 ಕೋಟಿ ರೂ.ಗಳನ್ನು ಇದುವರೆಗೂ ಉಳಿಸಿದೆ ಎಂದರು. ಅಪನಗದೀಕರಣದಂಥ ನಿರ್ಧಾರದಿಂದ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದ್ದು, ಸರಕಾರದ ಬೊಕ್ಕಸಕ್ಕೆ ಹಣ ಹರಿದುಬರುತ್ತಿದೆ ಎಂದು ಸಹ ಅವರು ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು.
ಒಮಾನ್ ನಮ್ಮ ಆತ್ಮೀಯ ರಾಷ್ಟ್ರ
ಗಲ್ಫ್ ರಾಷ್ಟ್ರಗಳಲ್ಲಿ ಒಮಾನ್ ಭಾರತದ ಆತ್ಮೀಯ ರಾಷ್ಟ್ರ. ಒಮಾನ್ ಸುಲ್ತಾನ್ ಭಾರತದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಮೋದಿಯವರು ಭಾರತ ಮತ್ತು ಒಮಾನ್ ನಡುವಿನ ಬಾಂಧವ್ಯವನ್ನು ಕೊಂಡಾಡಿದರು.
ತಂತ್ರಜ್ಞಾನದಿಂದ ಅಭಿವೃದ್ಧಿಯಾಗಬೇಕು, ನಾಶವಲ್ಲ!
ಆಧುನಿಕ ತಂತ್ರಜ್ಞಾನ ದೇಶದ ಪ್ರಗತಿಗೆ ಸಾಧನವಾಗಬೇಕೇ ಹೊರತು ನಾಶಕ್ಕಲ್ಲ ಎಂದು ದುಬೈನಲ್ಲಿ ವಿಶ್ವ ಸರ್ಕಾರ ಸಮಿತಿ ಸಭೆಯಲ್ಲಿ ಮಾತನಾಡಿದ ಮೋದಿ ಹೇಳಿದರು. ಈಖ ಸಭೆಯಲ್ಲಿ ಭಾರತ ವಿಶೇಶ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿತ್ತು.
ಒಪ್ಪಂದಗಳಿಗೆ ಸಹಿ
ನರೇಂದ್ರ ಮೋದಿ ಮತ್ತು ಒಮಾನ್ ಪ್ರಧಾನಿ ಸಯ್ಯಿದ್ ಫಾಹ್ದ್ ಬಿನ್ ಮಹ್ಮುದ್ ಸಲ್ ಸೈದ್ ಈ ಸಂದರ್ಭದಲ್ಲಿ ಹಲವು ಒಪ್ಪಂದಗಳಿಗೆ ಶಿ ಮಾಡಿದರು. ನಾಗರಿಕ ಮತ್ತು ವಾಣಿಜ್ಯೋದ್ಯಮಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಸಹಕಾರ, ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ಸೇರಿದಂತೆ ಹಲವು ಒಪ್ಪಂದಗಳಿಗೆ ಪರಸ್ಪರ ಒಪ್ಪಿಗೆ ಸೂಚಿಸಿ ಉಭಯ ನಾಯಕರೂ ಸಹಿ ಮಾಡಿದರು.
ಎರಡನೇ ಬಾರಿ ಯುನೈಟೆಡ್ ಅರಬ್ ಎಮಿರೇಟ್ಸ್
ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಇದು ಎರಡನೇ ಭೇಟಿ. ಇದಕ್ಕೂ ಮುನ್ನ 2015 ರಲ್ಲಿ ಮೋದಿ ಇಲ್ಲಿಗೆ ಭೇಟಿ ನೀಡಿದ್ದರು. 34 ವರ್ಷದ ನಂತರ ಭಾರತೀಯ ಪ್ರಧಾನಿಯೊಬ್ಬರು ಅರಬ್ ದೇಶಕ್ಕೆ ಭೇಟಿ ನೀಡಿದ್ದು ವಿಶೇಷವೆನ್ನಿಸಿತ್ತು.
ಗಲ್ಫ್ ರಾಷ್ಟ್ರದಲ್ಲಿ ಭಾರತೀಯರು
ಉದ್ಯೋಗ ಅರಸಿ ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋದ 9 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಅಲ್ಲಿಯೇ ಬದುಕು ಕಂಡುಕೊಂಡಿದ್ದಾರೆ. ಆದ್ದರಿಂದಲೇ ಗಲ್ಫ್ ರಾಷ್ಟ್ರದೊಂದಿಗೆ ಭಾರತ ಆತ್ಮೀಯ ಸಂಬಂಧ ಹೊಂದಿದೆ. ಒಮಾನ್ ಗೆ ಅತೀ ಹೆಚ್ಚು ವಲಸೆ ಬಂದವರಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ.