ಇಂಡೋನೇಷ್ಯಾದ ನಾಗರಿಕರಿಗೆ ಕೊಡುಗೆ ಘೋಷಿಸಿದ ಮೋದಿ
ಜಕಾರ್ತಾ, ಮೇ 30: ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿನ ನಾಗರಿಕರಿಗೆ ಭಾರತಕ್ಕೆ ಬರಲು ಉಚಿತ ವೀಸಾ ಸೌಲಭ್ಯ ನೀಡುವುದಾಗಿ ಪ್ರಕಟಿಸಿದ್ದಾರೆ.
ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ನಿಮ್ಮಲ್ಲಿನ ಅನೇಕರು ಭಾರತಕ್ಕೆ ಎಂದಿಗೂ ಭೇಟಿ ನೀಡದೆ ಇರಬಹುದು. ಮುಂದಿನ ವರ್ಷ ನಡೆಯಲಿರುವ ಕುಂಭ ಪ್ರಯಾಗಕ್ಕೆ ನೀವೆಲ್ಲರೂ ಭಾರತಕ್ಕೆ ಬರಬೇಕು ಎಂದು ಆಹ್ವಾನ ನೀಡುತ್ತೇನೆ ಎಂದರು.
ಜತೆಗೆ, ಭಾರತದಲ್ಲಿ 30 ದಿನಗಳವರೆಗೆ ಪ್ರಯಾಣ ಮಾಡಲು ಇಂಡೋನೇಷ್ಯಾದ ನಾಗರಿಕರಿಗೆ ಉಚಿತ ವೀಸಾವನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದರು.
ಮೋದಿಯವರು ಇಷ್ಟು ವರ್ಷ ಇಂಡೋನೇಷ್ಯಾವನ್ನು ದೂರವಿಟ್ಟಿದ್ದೇಕೆ?
ಇದೇ ಮೊದಲ ಬಾರಿಗೆ ಇಂಡೋನೇಷ್ಯಾದಲ್ಲಿನ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತ ಮತ್ತು ಇಂಡೋನೇಷ್ಯಾಗಳ ನಡುವೆ ಇರುವ ಐತಿಹಾಸಿಕ, ಪೌರಾಣಿಕ ನಂಟು, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳ ಕುರಿತು ಪ್ರಸ್ತಾಪಿಸಿದರು.
ಜತೆಗೆ ದೇಶದಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಬಳಿಕ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೇಳಿಕೊಂಡರು.
ಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮ
ಇದಕ್ಕೂ ಮುನ್ನ ಅವರು ಭಾರತ-ಇಂಡೋನೇಷ್ಯಾ ಗಾಳಿಪಟ ಪ್ರದರ್ಶನದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೊ ಅವರೊಂದಿಗೆ ಗಾಳಿಪಟ ಹಾರಿಸಿದರು.
ಭಾರತ ನಿಮ್ಮ ಹೃದಯದಲ್ಲಿದೆ
ನೀವು ಇಂಡೋನೇಷ್ಯಾದೊಂದಿಗೆ ಹೊಂದಿರುವ ನಂಟಿನಂತೆಯೇ ಭಾರತದಲ್ಲಿನ ನಿಮ್ಮ ಬೇರುಗಳಿಗೂ ಸರಿಸಮನಾಗಿ ಬದ್ಧರಾಗಿರುವಿರಿ. ನೀವು ಹೆಚ್ಚಿನವರು ಇಂಡೋನೇಷ್ಯನ್ನರು. ಆದರೆ ಭಾರತ ನಿಮ್ಮ ಹೃದಯದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾಲ್ಕು ವರ್ಷದಲ್ಲಿ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಹೊಸ ಹಂತಕ್ಕೆ ತಲುಪಿದೆ. ರಾಜನೀತಿ, ಕಾರ್ಯತಂತ್ರ, ಆರ್ಥಿಕ ವಿಚಾರಗಳಲ್ಲಿ ಪರಸ್ಪರ ಸ್ನೇಹ ಭಾವ ಸಹಭಾಗಿತ್ವ ಹೊಂದಿವೆ. ಅದನ್ನು ಇನ್ನೊಂದು ಹಂತಕ್ಕೆ ತಲುಪಿಸಲು ನಿರ್ಧರಿಸಿದ್ದೇವೆ.
ಪ್ರಜಾಪ್ರಭುತ್ವದ ಹೋಲಿಕೆ
ಭಾರತ ಮತ್ತು ಇಂಡೋನೇಷ್ಯಾಗಳು ತಮ್ಮ ಪ್ರಜಾಪ್ರಭುತ್ವ ತತ್ವಗಳು ಮತ್ತು ತಮ್ಮ ವೈವಿಧ್ಯಗಳಿಗೆ ಹೆಮ್ಮೆ ಹೊಂದಿವೆ. 2014ರಲ್ಲಿ ಬಡ ಹಿನ್ನೆಲೆಯ ವ್ಯಕ್ತಿಯೊಬ್ಬನ ನೇತೃತ್ವದ ಸರ್ಕಾರಕ್ಕಾಗಿ ಭಾರತದ ಜನರು ಮತ ಚಲಾವಣೆ ಮಾಡಿದರು. ಅದೇ ರೀತಿ ವಿನಮ್ರತೆಯ ಹಿನ್ನೆಲೆ ಹೊಂದಿರುವ ಅಧ್ಯಕ್ಷ ಜೋಕೋ ವಿಡೊಡೊ ಅವರನ್ನು ಸಹ ಇಂಡೋನೇಷ್ಯಾದ ಜನರು ಚುನಾಯಿಸಿದರು.
ಭ್ರಷ್ಟಾಚಾರಮುಕ್ತ ದೇಶ
ನಮ್ಮ ಸರ್ಕಾರದ ಆದ್ಯತೆ ಏನೆಂದರೆ ದೇಶವನ್ನು ಭ್ರಷ್ಟಾಚಾರ ಮುಕ್ತ, ನಾಗರಿಕ ಕೇಂದ್ರಿತ ಮತ್ತು ಅಭಿವೃದ್ಧಿ ಸ್ನೇಹಿಯನ್ನಾಗಿಸುವುದು.
ಪಾಸ್ಪೋರ್ಟ್ ಪಡೆದುಕೊಳ್ಳಲು ಈ ಹಿಂದೆ ಎಷ್ಟೆಲ್ಲ ಹೆಣಗಾಡಬೇಕಾಗಿತ್ತು. ಅದಿನ್ನೂ ನಿಮ್ಮ ಮನಸಿನಲ್ಲಿ ಇರಬಹುದು. ಇದೆಯೇ? ಆದರೆ ಈಗ ದೇಶ ಬದಲಾಗಿದೆ. ಪಾಸ್ಪೋರ್ಟ್ಗಾಗಿ ತಿಂಗಳುಗಟ್ಟಲೆ ಕಾಯಬೇಕಿಲ್ಲ. ಹತ್ತು ದಿನದಲ್ಲಿ ನಿಮ್ಮ ಮನೆಗೆ ಪಾಸ್ಪೋರ್ಟ್ ಬಂದು ತಲುಪುತ್ತದೆ.
ರೈಮ್-ರಿದಂನಲ್ಲಿ ಸಾಮ್ಯತೆ
ಇಂಡಿಯಾ-ಇಂಡೋನೇಷ್ಯಾ. ನಮ್ಮ ದೇಶದಗಳ ಹೆಸರಿನಲ್ಲಿ 'ರೈಮ್' ಇರುವುದು ಮಾತ್ರವಲ್ಲ, ಭಾರತ-ಇಂಡೋನೇಷ್ಯಾ ಗೆಳೆತನದ ನಡುವೆ ಗಾಢವಾದ 'ರಿದಂ' ಕೂಡ ಇದೆ.
ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಭಾರತ ಮತ್ತು ಇಂಡೋನೇಷ್ಯಾ ಸಂವೇದನಾತ್ಮಕ ಗುಣ ಹೊಂದಿವೆ. ನಾವು ಯಾವುದೇ ವ್ಯಕ್ತಿಯ ಪಾಸ್ಪೋರ್ಟ್ನ ಬಣ್ಣ ನೋಡುವುದಿಲ್ಲ. ಯಾವುದೇ ನೆರವು ಬೇಕಿರುವ ವ್ಯಕ್ತಿಗೆ ನಾವು ಸಹಾಯ ಮಾಡುತ್ತೇವೆ.
ಭಾಷೆ, ಆಹಾರದ ನಂಟು
ಮೂರು ತಿಂಗಳ ಹಿಂದೆ ಒಡಿಶಾದ ಕಟಕ್ನಲ್ಲಿ ಬಾಲಿ ಜಾತ್ರಾ ನಡೆಯಿತು. ಇಂಡೋನೇಷ್ಯಾಕ್ಕೂ ಗುಜರಾತ್ಗೂ ಬಹಳ ಹಳೆಯ ನಂಟು ಇದೆ. 12ನೇ ಶತಮಾನದಲ್ಲಿ ಗುಜರಾತ್ ಕಚ್ನ ಮುಸಲ್ಮಾನರು ಇಂಡೋನೇಷ್ಯಾಕ್ಕೆ ಬಂದರು. ಆಗ ಗುಜರಾತ್ನ ಭಾಷೆ, ಆಹಾರವನ್ನೂ ತಂದರು. ಇಂಡೋನೇಷ್ಯಾದ ಪ್ರತಿ ಮುಸ್ಲಿಂ ಪರಿವಾರವೂ ಗುಜರಾತ್ನ ತಿನಿಸನ್ನು ಇಂದಿಗೂ ತಯಾರಿಸುತ್ತವೆ.
ಪೌರಾಣಿಕ ನಂಟು
ನಮ್ಮ ಭಾಷೆಗಳ ನಡುವೆ ಸಾಕಷ್ಟು ಸಾಮ್ಯತೆ ಇದೆ. ಇದು ಸಹಜ. ಇಂಡೋನೇಷ್ಯಾದ ಅತಿ ಹತ್ತಿರದ ದೇಶ ಹಿಂದೂಸ್ತಾನ. ಹಿಂದೂಸ್ತಾನದ ಅತಿ ಹತ್ತಿರದ ದೇಶ ಇಂಡೋನೇಷ್ಯಾ. ಭಾರತದ ಪರಂಪರೆಯನ್ನು ಒಂದಲ್ಲ ಒಂದು ರೀತಿ ಹಂಚಿಕೊಂಡಿದ್ದೇವೆ. ಇಂಡೋನೇಷ್ಯಾದ ದೈನಂದಿನ ಬದುಕಿನಲ್ಲಿ ರಾಮಾಯಣ ಮತ್ತು ಮಹಾಭಾರತಗಳು ವಿಶೇಷ ಸ್ಥಾನ ಹೊಂದಿರುವುದು ಖುಷಿ ನೀಡುತ್ತದೆ.
1.10 ಲಕ್ಷ ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್
ನಾಲ್ಕು ವರ್ಷಗಳಲ್ಲಿ ಭಾರತ ಸರಿಸಾಟಿಯಿಲ್ಲದ ಪರಿವರ್ತನೆಗೆ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನಾವು 1.10 ಲಕ್ಷ ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸೌಲಭ್ಯ ಕಲ್ಪಿಸಿದ್ದೇವೆ. 300 ಬಿಲಿಯನ್ ಡಾಲರ್ನಷ್ಟಿದ್ದ ಭಾರತದ ವಿದೇಶಿ ವಿನಿಮಯ ಮೀಸಲು, ನಾಲ್ಕು ವರ್ಷಗಳಲ್ಲಿ 400 ಬಿಲಿಯನ್ ಡಾಲರ್ ದಾಟಿದೆ. ಜಿಎಸ್ಟಿಯು ಭಾರತದ ತೆರಿಗೆ ಮತ್ತು ಆದಾಯ ವ್ಯವಸ್ಥೆಯನ್ನು ಸುಧಾರಿಸಿದೆ.
ಸರಾಗ ಸುಲಭ ಜೀವನ
ಆರಾಮದಾಯಕ ವ್ಯವಹಾರ ಮಾಡುವುದರಿಂದ ನಾವು ಒಂದು ಹೆಜ್ಜೆ ಮುಂದಿದ್ದೇವೆ. ನಮ್ಮ ಲಕ್ಷ್ಯ ಈಗ ಆರಾಮದಾಯಕ ಜೀವನ ನಡೆಸುವುದು. ನಮ್ಮ ಪ್ರಕ್ರಿಯೆಗಳು ಪಾರದರ್ಶಕ ಮತ್ತು ಸಂವೇದನಾಶೀಲವಾಗಿವೆ. ಜಗತ್ತಿನ ಎರಡನೆಯ ಅತಿ ದೊಡ್ಡ ಸ್ಟಾರ್ಟ್ಅಪ್ ವ್ಯವಸ್ಥೆಯನ್ನು ಭಾರತ ಸೃಷ್ಟಿಸಿದೆ.