Breaking: ಜರ್ಮನಿಯಲ್ಲಿ ಭಾರತದ ಪ್ರಜಾಪ್ರಭುತ್ವದ ಮಹತ್ವ ಸಾರಿದ ಮೋದಿ
ಮ್ಯೂನಿಚ್, ಜೂನ್ 26: "ಭಾರತದಲ್ಲಿ 47 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವದ ರೋಮಾಂಚಕ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿತ್ತು" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಜರ್ಮನಿ ಮ್ಯೂನಿಚ್ನಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಜೂನ್ 26 ಎನ್ನುವುದು ಪ್ರಜಾಪ್ರಭುತ್ವವನ್ನು ತುಳಿದು ದಮನ ಮಾಡಿದ ದಿನವನ್ನು ನೆನಪಿಸುತ್ತದೆ" ಎಂದರು.
"ನಾವು ಭಾರತೀಯರು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆಪಡುತ್ತೇವೆ. ಇಂದು ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಹೆಮ್ಮೆಯಿಂದ ಹೇಳಬಹುದು. ಸಂಸ್ಕೃತಿ, ಆಹಾರ, ಬಟ್ಟೆ, ಸಂಗೀತ ಮತ್ತು ಸಂಪ್ರದಾಯಗಳ ವೈವಿಧ್ಯತೆಯು ನಮ್ಮ ಪ್ರಜಾಪ್ರಭುತ್ವವನ್ನು ರೋಮಾಂಚಕಗೊಳಿಸುತ್ತದೆ" ಎಂದು ಹೇಳಿದರು.
4ನೇ ಕೈಗಾರಿಕಾ ಕ್ರಾಂತಿಯನ್ನು ಭಾರತ ಮುನ್ನಡೆಸುವುದು: "ಕಳೆದ ಶತಮಾನದಲ್ಲಿ, ಜರ್ಮನಿ ಮತ್ತು ಇತರ ದೇಶಗಳು ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆದುಕೊಂಡವು. ಆಗ ಭಾರತವು ಗುಲಾಮಗಿರಿಯ ಹಂತದಲ್ಲಿತ್ತು, ಈ ಹಿನ್ನೆಲೆ ಕೈಗಾರಿಕೆ ಕ್ರಾಂತಿಯ ಲಾಭವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಇಂದು ಕೈಗಾರಿಕೆಯ ಎಲ್ಲ ಲಾಭಗಳನ್ನು ಪಡೆದುಕೊಳ್ಳುವಲ್ಲಿ ಭಾರತವು ಸಮರ್ಥವಾಗಿದೆ. ಈಗ ಭಾರತವು 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಹಿಂದೆ ಉಳಿಯುವುದಿಲ್ಲ, ಅದು ಈಗ ಜಗತ್ತನ್ನು ಮುನ್ನಡೆಸುತ್ತಿದೆ" ಎಂದು ನರೇಂದ್ರ ಮೋದಿ ತಿಳಿಸಿದರು.
ಗುಲಾಮಗಿರಿಯಿಂದ ಹೊರ ಬಂದಿದೆ ಭಾರತ ಎಂದ ಮೋದಿ
"ಕಳೆದ ಶತಮಾನದಲ್ಲಿ, ಜರ್ಮನಿ ಮತ್ತು ಇತರ ದೇಶಗಳು ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆದುಕೊಂಡವು. ಆಗ ಭಾರತವು ಗುಲಾಮವಾಗಿತ್ತು, ಅದಕ್ಕಾಗಿಯೇ ಅದು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಈಗ ಭಾರತವು 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಹಿಂದೆ ಉಳಿಯುವುದಿಲ್ಲ, ಅದು ಈಗ ಜಗತ್ತನ್ನು ಮುನ್ನಡೆಸುತ್ತಿದೆ" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಶೇ.99ರಷ್ಟು ಹಳ್ಳಿಗಳಲ್ಲಿ ಶುದ್ಧ ಅಡುಗೆ ಅನಿಲ
ಇಂದು ನಮ್ಮ ದೇಶದ ಪ್ರತಿಯೊಂದು ಗ್ರಾಮವು ಬಯಲು ಶೌಚ ಮುಕ್ತವಾಗಿದೆ, ವಿದ್ಯುತ್ ಸಂಪರ್ಕವನ್ನು ಹೊಂದಿದೆ. ಶೇ 99ರಷ್ಟು ಹಳ್ಳಿಗಳಲ್ಲಿ ಶುದ್ಧ ಅಡುಗೆ ಇಂಧನವೂ ಸಿಗುತ್ತಿದೆ. ಕಳೆದ 2 ವರ್ಷಗಳಿಂದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ನೀಡುತ್ತಿದೆ.
"ಭಾರತದಲ್ಲಿ ನಾವು ಪ್ರತಿ 10 ದಿನಗಳಿಗೊಮ್ಮೆ ಯುನಿಕಾರ್ನ್ ಅನ್ನು ಹೊಂದಿದ್ದೇವೆ. ನಾವು ಪೆಟ್ರೋಲ್ನಲ್ಲಿ ಶೇ 10 ಎಥೆನಾಲ್ ಮಿಶ್ರಣ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದೇವೆ. ಗುರಿಗಿಂತ ಐದು ತಿಂಗಳ ಮೊದಲೇ ನಾವು ಇದನ್ನು ಸಾಧಿಸಿದ್ದೇವೆ. ಭಾರತ ಈಗ ಪ್ರಗತಿಗೆ, ಅಭಿವೃದ್ಧಿಗೆ ಮತ್ತು ತನ್ನ ಕನಸುಗಳ ಈಡೇರಿಕೆಗೆ ಸಿದ್ಧವಾಗಿದೆ," ಎಂದು ಹೇಳಿದರು.
ಸ್ವಚ್ಛತೆ ಕಾಪಾಡಿಕೊಳ್ಳುವುದು ಭಾರತೀಯರ ಕರ್ತವ್ಯ
"ಸಾಮಾನ್ಯವಾಗಿ ಹವಾಮಾನ ಬದಲಾವಣೆಯು ಭಾರತದಲ್ಲಿನ ನೀತಿಗಳಿಗೆ ಸಂಬಂಧಿಸಿದ ವಿಷಯವಲ್ಲ. ಸುಸ್ಥಿರ ಹವಾಮಾನವನ್ನು ಕಾಪಾಡಿಕೊಳ್ಳುವುದು ದೇಶದ ಜನರ ಜೀವನದ ಒಂದು ಭಾಗವೇ ಆಗಿದೆ. ನಾವು ದೇಶದಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಈಗ ಜನರು ದೇಶವನ್ನು ಸ್ವಚ್ಛವಾಗಿಡುವುದು ತಮ್ಮ ಕರ್ತವ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವು ಸ್ಟಾರ್ಟಪ್ಗಳ ಸ್ಪರ್ಧೆಯಲ್ಲಿ ಮುಂದು
"ಈ ಮೊದಲು ಭಾರತವು ಸ್ಟಾರ್ಟಪ್ಗಳ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಇಂದು ನಾವು ಸ್ಟಾರ್ಟಪ್ಗಳ ಪಟ್ಟಿಯಲ್ಲಿ ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದೇವೆ. ಅದೇ ರೀತಿ ನಾವು ಈ ಮೊದಲು ಸಾಮಾನ್ಯ ಮೊಬೈಲ್ ಫೋನ್ ಅನ್ನು ಸಹ ಅನ್ಯರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ವಿಶ್ವದಲ್ಲೇ ಅತಿಹೆಚ್ಚು ಮೊಬೈಲ್ ಫೋನ್ ಉತ್ಪಾದಿಸುವ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದೇವೆ" ಎಂದು ಹೇಳಿದರು.