3 ವರ್ಷ ಹಣ ಉಳಿಸಿ ಪಿಜ್ಜಾ ಅಂಗಡಿ ತೆಗೆದರೆ ಮರು ದಿನವೇ ಹೀಗಾಯಿತಾ?
ಆ ವ್ಯಕ್ತಿಯ ಹೆಸರು ಮಿಲನ್ ವರ್ಗ. ಮೂರು ವರ್ಷಗಳ ಕಾಲ ಹಣ ಕೂಡಿಟ್ಟು, ಹಂಗೇರಿಯ ರಾಜಧಾನಿ ಬುಡಾಪೆಸ್ಟ್ ನಲ್ಲಿ ಪಿಜ್ಜಾ ಮಾರಾಟ ಮಳಿಗೆಯೊಂದನ್ನು ಕಳೆದ ವಾರ ಆರಂಭಿಸಿದ್ದ. ಮಳಿಗೆ ಆರಂಭಿಸಿದ ಮರು ದಿನವೇ ಮಂಗಳವಾರ. ಒಬ್ಬೇ ಗ್ರಾಹಕ ಅತ್ತ ಸುಳಿಯುತ್ತಿಲ್ಲ. ಆ ಮಳಿಗೆ ಅಂತಲ್ಲ, ರಸ್ತೆಗೆ ರಸ್ತೆಯೇ ಖಾಲಿ. ಕೊರೊನಾದ ಭೀತಿ ಅದ್ಯಾವ ಪರಿ ಹೊಡೆತ ಕೊಟ್ಟಿದೆ ಅನ್ನೋದಕ್ಕೆ ಇದು ಉದಾಹರಣೆ.
ಆದರೆ, ವರ್ಗ ಅದಾಗಲೇ ಅಗತ್ಯ ವಸ್ತುಗಳನ್ನೆಲ್ಲ ಖರೀದಿಸಿ ತಂದಾಗಿತ್ತು. ಕೂಡಲೇ ಆತನಿಗೊಂದು ಆಲೋಚನೆ ಹೊಳೆಯಿತು. ಕೊರೊನಾದಿಂದ ಯಾವ ಹಿರಿಯರಿಗೆ ಮನೆಯಿಂದ ಹೊರಬರಲು ಸಹ ಸಾಧ್ಯವಿಲ್ಲವೋ ಅಂಥವರಿಗೆ ಉಚಿತವಾಗಿ ಪಿಜ್ಜಾ ತಲುಪಿಸಲು ನಿರ್ಧಾರ ಮಾಡಿದ.
ಶೇಕಡಾ 50ರಷ್ಟು ಪಿಜ್ಜಾ ಡೆಲಿವರಿ ಉಚಿತ
"ನಾನು ಪಿಜ್ಜಾ ಮಾರಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಸ್ವಯಂಪ್ರೇರಿತರಾಗಿ ದಿಗ್ಬಂಧನದಲ್ಲಿ ಇರುವವರಿಗೆ ಉಚಿತವಾಗಿ ನೀಡಲು ಸಾಧ್ಯವಿದೆ. ಆದ್ದರಿಂದ ಅಂಥವರನ್ನು ನೋಡಲು ಆರಂಭಿಸಿದೆ. ಆ ಮೂಲಕ ಅವರಿಗೆ ಮನೆಯಲ್ಲೇ ಇರುವುದಕ್ಕೆ ನೆರವಾಗುತ್ತಿದ್ದೇನೆ" ಎನ್ನುತ್ತಾನೆ ಇಪ್ಪತ್ತು ವರ್ಷದ ವರ್ಗ. ಈಗ ವರ್ಗ ಡೆಲಿವರಿ ನೀಡುವ ಪಿಜ್ಜಾಗಳ ಪೈಕಿ ಶೇಕಡಾ ಐವತ್ತರಷ್ಟು ಉಚಿತವಾಗಿಯೇ ಇರುತ್ತದೆ.
ಯುರೋಪಿಯನ್ ರಾಷ್ಟ್ರವಾದ ಹಂಗೇರಿ ತನ್ನ ಗಡಿ ಭಾಗವನ್ನು ಮುಚ್ಚಿದೆ. ವಿದೇಶೀಯರಿಗೆ ಪ್ರವೇಶವೇ ಇಲ್ಲ. ಶಾಲೆಗಳನ್ನು ಮುಚ್ಚಲಾಗಿದೆ. ಹಂಗೇರಿಯನ್ನರು ಈಗ ಸ್ವಯಂಪ್ರೇರಿತರಾಗಿ ಹಿರಿಯ ವಯಸ್ಸಿನವರ ಸಹಾಯಕ್ಕೆ ನಿಂತಿದ್ದಾರೆ. ಜತೆಗೆ ವೈದ್ಯಕೀಯ ಸಿಬ್ಬಂದಿಯೂ ಅಷ್ಟೇ ಶ್ರಮಿಸುತ್ತಿದ್ದಾರೆ.
ಫ್ಲ್ಯಾಟ್ಸ್ ಗಳು ಉಚಿತ
ಏರ್ ಬಿಎನ್ ಬಿ ಸಮುದಾಯದ ಫೇಸ್ ಬುಕ್ ಗ್ರೂಪ್ ಇದೆ. ಅದರಲ್ಲಿ ಸಾವಿರದಿನ್ನೂರು ಸದಸ್ಯರಿದ್ದಾರೆ. ನರ್ಸ್ ಗಳು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಯಾರು ಸ್ವಯಂಪ್ರೇರಿತರಾಗಿ ಪ್ರತ್ಯೇಕವಾಗಿ ಇರಲು ಮುಂದೆಬರುವವರ ದೇಖರೇಕಿ ನೋಡಿಕೊಳ್ಳುತ್ತಾರೋ ಅಂಥವರಿಗೆ ತಮ್ಮ ಫ್ಲ್ಯಾಟ್ಸ್ ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಕೊರೊನಾ ಬಿಕ್ಕಟ್ಟು ತಲೆದೋರುವ ಮುನ್ನ ಬುಡಾಪೆಸ್ಟ್ ನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಏರ್ ಬಿಎನ್ ಬಿ ಫ್ಲ್ಯಾಟ್ಸ್ ಗಳು ಇದ್ದವು. ಇವುಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಆದರೆ ರಾತ್ರೋರಾತ್ರಿ ವ್ಯಾಪಾರ ಕುಸಿದುಹೋಯಿತು. ಪ್ರವಾಸಿಗರೇ ಕಣ್ಮರೆಯಾದರು. ಖಾಲಿ ಉಳಿದ ಏರ್ ಬಿಎನ್ ಬಿ ಫ್ಲ್ಯಾಟ್ ಗಳನ್ನು ಈಗ ಈ ರೀತಿ ಉಪಯೋಗಿಸುತ್ತಿದ್ದಾರೆ.
39 ಮಂದಿಗೆ ಊಟದ ವ್ಯವಸ್ಥೆ
ಇನ್ನು ಲೇಕ್ ಬಲಾಟನ್ ಎಂಬುದು ಹಂಗೇರಿಯ ಬೇಸಿಗೆ ಕಾಲದ ಪ್ರಮುಖ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಹೋಟೆಲ್ ವೊಂದು ಎಂಥ ಕೆಲಸ ಮಾಡುತ್ತಿದೆ ಗೊತ್ತಾ? ವಿದೇಶದಿಂದ ಹಿಂತಿರುಗಿ, ಸ್ವಯಂ ದಿಗ್ಬಂಧನದಲ್ಲಿ ಇರುವ ಹಂಗೇರಿಯನ್ನರಿಗೆ ರೂಮ್ ಗಳನ್ನು ಒದಗಿಸುತ್ತಿದೆ.
ಅಂದ ಹಾಗೆ ಲೇಕ್ ಬಲಾಟನ್ ನಲ್ಲಿ ಕೆಲಸ ಮಾಡುವವರು ಬೇಸಿಗೆಯಲ್ಲಿ ಮಾತ್ರ ಇಲ್ಲಿರುತ್ತಾರೆ. ಚಳಿಗಾಲದಲ್ಲಿ ವಿದೇಶಗಳಿಗೆ ಹೋಗುತ್ತಾರೆ. ಸದ್ಯಕ್ಕೆ ಈ ಹೋಟೆಲ್ ನಲ್ಲಿ ಮೂವತ್ತೊಂಬತ್ತು ಮಂದಿ ಇದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.