4 ವರ್ಷಗಳಲ್ಲಿ ಭಾರತದ ಆರ್ಥಿಕತೆಗೆ ಭದ್ರ ಅಡಿಪಾಯ: ಪಿಯೂಷ್ ಗೋಯಲ್
ಲಂಡನ್, ಜೂನ್ 21: ಎರಡನೇ ದಿನದ 5ನೇ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ಇಲ್ಲಿನ ಬಕಿಂಗ್ ಹ್ಯಾಮ್ ಶೈರ್ ನಲ್ಲಿ ನಡೆಯುತ್ತಿದೆ. ಇಂದು 'ವಿದೇಶಿ ಬಂಡವಾಳ ಹೂಡಿಕೆಗೆ ಭಾರತದಲ್ಲಿ ಇರುವ ಅವಕಾಶಗಳು' ಎಂಬುದರ ಕುರಿತು ಹಣಕಾಸು ಸಚಿವ ಪಿಯೂಷ್ ಗೋಯಲ್ ಮಾತನಾಡಿದರು.
ಮೊದಲಿಗೆ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಧನ್ಯವಾದ ಹೇಳಿದ ಪಿಯೂಷ್ ಗೋಯಲ್, "ಕಳೆದ 4 ವರ್ಷಗಳಲ್ಲಿ ನಾವು ಭಾರತದ ಆರ್ಥಿಕತೆಗೆ ತಳಪಾಯವನ್ನು ಹಾಕಲು ಯತ್ನಿಸಿದ್ದೇವೆ. ಇದು ಮುಂದಿನ ಮೂರು ದಶಕಗಳಿಗೆ ಸಹಾಯವಾಗಲಿದೆ. ಭಾರತದ ಆರ್ಥಿಕತೆಯಲ್ಲಿ ಕಳೆದ 4 ವರ್ಷಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ. ಅದರಲ್ಲಿ ನಾನು ಕೆಲವನ್ನು ಇಲ್ಲಿ ಹೇಳಲು ಇಚ್ಛಿಸುತ್ತೇನೆ" ಎಂದರು.
"ಹಲವು ವರ್ಷಗಳ ನಂತರ ಭಾರತದ ಕರೆನ್ಸಿ ಸ್ಥಿರವಾಗಿದೆ. ಸದ್ಯ ಭಾರತದ ಆರ್ಥಿಕತೆಯಲ್ಲಿ ವಿತ್ತೀಯ ಕೊರತೆ ನಿಯಂತ್ರಣದಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಇವತ್ತು ಭಾರತದ ಆರ್ಥಿಕತೆಗೆ ಜಾಗತಿಕವಾಗಿ ಇರುವ ಗೌರವ ಇರಲಿಲ್ಲ," ಎಂದು ಗೋಯಲ್ ವಿವರಿಸಿದರು.
"ಎಲ್ಲಾ ವಿಷಯಗಳಲ್ಲೂ ಭಾರತ ಹೆಚ್ಚು ಹೆಚ್ಚು ಜಾಗತಿಕ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಇನ್ನೊಂದು ಆಕರ್ಷಣೆ ಎಂದರೆ ಭಾರತದ ಆರ್ಥಿಕತೆ ನಂಬಿಕಸ್ಥ ಆರ್ಥಕತೆಯಾಗಿ ರೂಪುತಾಳಿದೆ. ಉನ್ನತ ಸ್ಥಳಗಳಲ್ಲಿ ಭ್ರಷ್ಟಾಚಾರದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಸ್ಥಿರವಾದ, ಭವಿಷ್ಯಸೂಚಕ, ಸರಳೀಕೃತ ನೀತಿ ಚೌಕಟ್ಟು ಭಾರತದ ಆರ್ಥಿಕತೆಯ ನಿರೂಪಣೆಯನ್ನು ಬದಲಿಸಲು ಸಹಾಯ ಮಾಡುತ್ತದೆ," ಎಂದು ಗೋಯಲ್ ವಿವರಿಸಿದರು.
"ಭಾರತದಲ್ಲಿ ಅಭೂತಪೂರ್ವ ಪ್ರಮಾಣದಲ್ಲಿ ಸಮಗ್ರ ಪ್ರಯತ್ನ ನಡೆಯುತ್ತಿದೆ. GST ಯ ಪರಿಣಾಮವಾಗಿ ಆರ್ಥಿಕತೆಯ ಸರಿ ಹಾದಿಗೆ ಬಂದಿದೆ. ಸ್ವಚ್ಛ ಭಾರತವನ್ನು ನಿರ್ಮಿಸುವುದು ನಮ್ಮ ಅಜೆಂಡಾದ ಭಾಗವಾಗಿದ್ದು, ಇದು ಆರೋಗ್ಯದ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಇಂದು ನಾವು ಜಗತ್ತಿನೊಂದಿಗೆ ಪ್ರಾಮಾಣಿಕ ಆರ್ಥಿಕತೆಯೊಂದಿಗೆ ತೊಡಗಿಸಿಕೊಂಡ ದೇಶವನ್ನು ಹೊಂದಿದ್ದೇವೆ," ಎಂದು ಹೆಮ್ಮೆ ವ್ಯಕ್ತಪಡಿಸಿದರು ಗೋಯಲ್.
"1979-84ರ ನಡುವೆ ಚೀನಾದಲ್ಲಿ ನಡೆದ ರೀತಿಯ ಪ್ರಯತ್ನಗಳು ಭಾರತದಲ್ಲಿ ನಡೆಯುತ್ತಿವೆ. ನಮ್ಮ ಯೋಜನೆಗಳ ಚೌಕಟ್ಟಿನ ಪ್ರಯತ್ನವಾಗಿ ಇವತ್ತು ನಮ್ಮ ದೇಶಕ್ಕೆ ಬರುತ್ತಿರುವ ಹಣ ಸ್ವಚ್ಛ ಹಣವಾಗಿದೆ. ನಮ್ಮ ಸರಕಾರದ ಅತೀ ದೊಡ್ಡ ಸಾಧನೆಯೆಂದರೆ ನಾವು ಭವಿಷ್ಯಕ್ಕೆ ಸಿದ್ಧವಾಗಿದ್ದೇವೆ. ಚೀನಾದಲ್ಲಿ ಏನು ನಡೆಯಿತೋ ಅದು ಇವತ್ತು ಭಾರತದಲ್ಲಿ ನಡೆಯುತ್ತಿದೆ," ಎಂದು ಗೋಯಲ್ ತಿಳಿಸಿ ಹೇಳಿದರು.
ಸರಕಾರಿ ಮತ್ತು ಖಾಸಗಿ ಹೂಡಿಕೆಗಳ ಬಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಿರುವ ಸಂಜಯ್ ನಾಯರ್ ಪಿಯೂಷ್ ಗೋಯಲ್ ಅವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಗೋಯಲ್, "ನಾವು ದೇಶದ ಮನಸ್ಥಿತಿಯನ್ನೇ ಬದಲಾಯಿಸುತ್ತಿದ್ದೇವೆ. ಈ ಹಿಂದೆ ನಾವು ದೂರದೃಷ್ಟಿ ಇಲ್ಲದೆ ಕ್ಷಣಿಕ ಲಾಭಗಳ ಬಗ್ಗೆ ಯೋಚಿಸುತ್ತಿದ್ದೆವು. 2014ಕ್ಕೂ ಮೊದಲಿದ್ದ ಮಾದರಿಯನ್ನು ಬಿಜೆಪಿ ಬದಲಾಯಿಸಿದೆ," ಎಂದರು.
ಎಲ್ಲರಿಗೂ ಗೊತ್ತಿರುವಂತೆ ಹಿಂದಿನ ಸರಕಾರಗಳ ರೀತಿ ಬಿಜೆಪಿ ಯಾವುದೇ ಜನಪ್ರಿಯ ಉಚಿತ ಯೋಜನೆಗಳನ್ನು ನೀಡಿಲ್ಲ. ನೀವು ಹೇಗೆ ಇದನ್ನು ಹೊಂದಿಸಿಕೊಂಡು ಹೋಗುತ್ತೀರಿ ಎಂದು ಸಂಜಯ್, ಪಿಯೂಷ್ ಗೋಯಲ್ ಗೆ ಪ್ರಶ್ನೆ ಕೇಳಿದರು.
ಇದಕ್ಕುತ್ತರಿಸಿದ ಗೋಯಲ್, "ನಾವು ವಿತ್ತೀಯ ಕೊರತೆಯನ್ನು ಸರಿದೂಗಿಸಲು ಬದ್ಧವಾಗಿದ್ದೇವೆ. ಒಟ್ಟಾರೆ ತೆರಿಗೆ ಸಂಗ್ರಹ ಇಳಿಕೆಯಾಗುವುದಿಲ್ಲ ಎಂದು ಖಾತರಿಯಾಗುವವರೆಗೆ ತೆರಿಗೆ ಇಳಿಕೆಗೆ ನಾನು ಮುಂದಾಗುತ್ತಿಲ್ಲ. ನಿರ್ಧಾರಗಳು ಭಾರತದ ಒಳ್ಳೆಯದಕ್ಕೆ ಆಗಿರುವಾಗ ಚುನಾವಣೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂಬುದು ಪ್ರಧಾನಿ ಮೋದಿಯವರ ನಂಬಿಕೆಯಾಗಿದೆ. ದೇಶದ ಹಿತಾಸಕ್ತಿಗೆ ಬೇಕಾದ ಕೆಲಸಗಳನ್ನು ಮೋದಿಯವರಿಗೆ ಮಾಡುತ್ತಾರೆ ಎಂಬ ನಂಬಿಕೆ ಜನರಿಗೆ ಇದೆ," ಎಂದರು.
ಸಂಜಯ್ ನಾಯರ್ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಚಿವರನ್ನು ಕೇಳಿದ್ದಕ್ಕೆ ಉತ್ತರಿಸಿದ ಗೋಯಲ್, "ನಾವು ಕಾರ್ಪೆಟ್ ಅಡಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಒತ್ತಡವನ್ನು ನೂಕುವುದಿಲ್ಲ. ಭಾರತೀಯ ಬ್ಯಾಂಕಿಂಗ್ ವಲಯ ತನಗೆ ಅಗತ್ಯವಾದ ಬೆಂಬಲವನ್ನು ಪಡೆಯುವುದು ಮುಖ್ಯವಾಗಿದೆ. ನಾವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಬಲವಾಗಿದೆ ಮತ್ತು ಕಾರ್ಯಸಾಧು ಎಂಬುದನ್ನು ಖಚಿತ ಪಡಿಸಲು ಕೆಲಸ ಮಾಡುತ್ತಿದ್ದೇವೆ. ವಿವೇಕಯುತವಾದ ಯಾವುದೇ ನಿರ್ಧಾರಗಳನ್ನು ಬ್ಯಾಂಕ್ ತೆಗೆದುಕೊಂಡರೂ ನಾವು ಅದನ್ನು ಬೆಂಬಲಿಸುತ್ತೇವೆ ," ಎಂದು ಹೇಳಿದರು.
ಎರಡಂಕಿಯ ಬೆಳವಣಿಗೆ ದರ ಸಾಧಿಸುವ ಸಂಬಂಧ ಮಾತನಾಡಿದ ಪಿಯೂಷ್ ಗೋಯಲ್, "ಭಾರತದಲ್ಲಿರು ಮಹತ್ವಾಕಾಂಕ್ಷೆಯ ಮಧ್ಯಮ ವರ್ಗ ಮತ್ತು ಭೌಗೋಳಿಕ ವಿನ್ಯಾಸದಲ್ಲಿ ನಮಗೆ ದೊಡ್ಡ ಮಾರುಕಟ್ಟೆಯ ಬೇಡಿಕೆ ಇದೆ. ಎರಡಂಕಿಯ ಬೆಳವಣಿಗೆಯನ್ನು ಪಡೆಯುವುದು ಅಸಾಧ್ಯವಲ್ಲ. ಭಾರತದಲ್ಲಿ ಸ್ಪರ್ಧಾತ್ಮಕವಾಗುತ್ತಿರುವ ಸರಕು ದರ ಹೆಚ್ಚಿನ ಬೆಳವಣಿಗೆ ದರವನ್ನು ಸಾಧಿಸಲು ನಿರ್ಣಾಯಕವಾಗಿದೆ. ಮೂಲಸೌಕರ್ಯ ಉತ್ತೇಜನವು ಆರ್ಥಿಕತೆ ಎರಡಂಕಿಯ ಬೆಳವಣಿಗೆಯನ್ನು ತಯಾರಿಸಲು ಸಹಾಯ ಮಾಡುತ್ತದೆ. ಉತ್ಪಾದನೆಯು ಭಾರತೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಮುಂದಿನ ಪ್ರಮುಖ ವಿಚಾರವಾಗಿದೆ," ಎಂದರು.
"ಭಾರತ ವೀಸಾ ಮತ್ತು ಮಾಸ್ಟರ್ ಕಾರ್ಡ್ಗಳನ್ನು ವ್ಯಾಪಾರದಿಂದ ಹೊರತರಲು ಸಾಧ್ಯವಾಗುವಂತಹ ಪರಿಹಾರಗಳನ್ನು ಕಂಡುಕೊಳ್ಳಬಹುದು. ಚುನಾವಣೆಗಳಿಗೆ ಬಂದಾಗ ಭಾರತದ ಜನರ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಅಂತಿಮವಾಗಿ ಕಾಂಗ್ರೆಸಿಗೆ ಪರ್ಯಾಯವಾಗಿ ಮತ್ತು ದೆಹಲಿಯ ಚುಕ್ಕಾಣಿಯಲ್ಲಿ ಬಲವಾದ ನಾಯಕರಿದ್ದಾರೆ. 2019 ರ ಚುನಾವಣೆಯಲ್ಲಿ ಬಿಜೆಪಿ 300 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ನಮ್ಮ ಸಾಧನೆಗಳ ಆಧಾರದಲ್ಲಿ ನಾನು ನಂಬುತ್ತೇನೆ," ಎಂದು ಪಿಯೂಷ್ ಗೋಯಲ್ ಮಾತು ಮುಗಿಸಿದರು.
ಇದಕ್ಕೂ ಮೊದಲ ನಡೆಯುತ್ತಿದ್ದ ಪ್ಯಾನಲ್ ಚರ್ಚೆಯಲ್ಲಿ ಮಾತನಾಡಿದ ಕೆಕೆಆರ್ ಸಿಇಒ (ಹೂಡಿಕೆ ಸಂಸ್ಥೆ) ಸಂಜಯ್ ನಾಯರ್, "ಜನರನ್ನು ಬಡತನ ರೇಖೆಗಿಂತ ಮೇಲೆ ತರಬೇಕು ಎಂದು ಆಲೋಚನೆ ಆರಂಭಿಸಿದರೆ ಜಿಡಿಪಿ ಸಮಸ್ಯೆ ಬರುತ್ತದೆ. ಸಬ್ಸಿಡಿಗಳನ್ನು ನೀಡದೆ ಭಾರತ ಸರಕಾರ ಒಳ್ಳೆ ಕೆಲಸ ಮಾಡಿದೆ. ಬ್ಯಾಂಕ್ ನ ಖಾಸಗೀಕರಣದ ಬಗ್ಗೆ ಕೆಲಸ ಮಾಡಬೇಕಿದೆ," ಎಂದರು.
"ಎಲ್ಲಿವರೆಗೆ ಹಣದುಬ್ಬರದ ಬಗ್ಗೆ ಜನರಲ್ಲಿ ನಿರೀಕ್ಷೆ ಇರುತ್ತದೋ ಅಲ್ಲಿವರೆಗೆ ರಿಯಲ್ ಎಸ್ಟೇಟ್, ಆಭರಣಕ್ಕೆ ಖರ್ಚು ಮಾಡುತ್ತಾರೆ. ಹಣದುಬ್ಬರ ನಿರೀಕ್ಷೆ ಹೆಚ್ಚು; ರುಪಾಯಿಯಲ್ಲಿ ಸಾಲ ಪಡೆಯುವುದು ಕೆಟ್ಟದ್ದು ಮತ್ತು ಒಳ್ಳೆಯದು," ಎಂದವರು ತಿಳಿಸಿದರು.
"ರಫ್ತು ಮುಖ್ಯವಾದ ಪಾತ್ರವನ್ನು ವಹಿಸಬೇಕಿದೆ. ಎಲ್ಲ ವಲಯ
ವು ಅಭಿವೃದ್ಧಿ ಕಾಣಬೇಕಿದೆ. ಬಹಳ ದೂರ ಸಾಗಬೇಕಿದೆ. ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡದೆ ಸರಕಾರದ ಮಟ್ಟದಲ್ಲಿ ಒಳ್ಳೆ ಕೆಲಸ ಮಾಡಿದೆ," ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಭಾರ್ತಿ ಉಪಾಧ್ಯಕ್ಷ, ರಾಕೇಶ್ ಭಾರ್ತಿ ಮಿತ್ತಲ್, "ಭಾರತದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯು ಜಗತ್ತಿನಲ್ಲಿಯೇ ಅತ್ಯಂತ ಉದಾರವಾದ ನೀತಿ ಹೊಂದಿದೆ. ಭಾರತ ಸರಕಾರ ಹೂಡಿಕೆದಾರರನ್ನು ಆಹ್ವಾನಿಸುತ್ತಿದೆ. ಹಲವರು ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ. ವ್ಯಾಪಾರ ಮಾಡಲು ಸುಲಭ ಆಗುವಂತೆ ವಾತಾವರಣ ಇದೆ. ಅಗತ್ಯಕ್ಕೂ ಮೀರಿ ಸರಕಾರಗಳು ಅನುಕೂಲ ಮಾಡಿಕೊಡುತ್ತಿವೆ," ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಭಾರತದಲ್ಲಿ ಉದ್ಯೋಗವು ಅಸಂಘಟಿತ ವಲಯದಿಂದ ಸಂಘಟಿತವಾಗಿ ಮಾರ್ಪಡುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲು ವಿದೇಶಿ ಬಂಡವಾಳ ಆಕರ್ಷಿಸಲು ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ಭಾರತದ ಪ್ರಾಥಮಿಕ ಕೃಷಿಯಲ್ಲಿ ಖಾಸಗಿ ವಲಯದಿಂದ ಹೂಡಿಕೆ ಮಾಡಬೇಕಿದೆ. ಪ್ರಧಾನಿ ಮೋದಿ ಅವರು ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಉದ್ದೇಶ ಇರಿಸಿಕೊಂಡಿದ್ದಾರೆ. ಆ ಕಾರಣಕ್ಕೆ ಖಾಸಗಿಯವರಿಂದ ಹೂಡಿಕೆ ಆಗಬೇಕಿದೆ," ಎಂದು ಮಿತ್ತಲ್ ಹೇಳಿದರು.
ಇನ್ನು "2025ರ ವೇಳೆಗೆ ಭಾರತೀಯರ ಸರಾಸರಿ ವಯಸ್ಸು 29 ವರ್ಷವಾಗಲಿದೆ. ಇದು ನವ ಭಾರತ. ಭಾರತದ ಆರ್ಥಿಕತೆ ಶೇಕಡಾ 7.4ರ ದರದಲ್ಲಿ ಬೆಳವಣಿಯಾಗಲಿದೆ. ನಮ್ಮದು ಜಗತ್ತಿನಲ್ಲೇ ಮೂರನೇ ಅತೀ ದೊಡ್ಡ ವಾಣಿಜ್ಯ ಆರ್ಥಿಕತೆಯಾಗಿದೆ. 2025ರ ವೇಳೆಗೆ ಭಾರತದ ಜನರ ಸರಾಸರಿ ವಯಸ್ಸು 25 ಆಗಲಿದೆ," ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಉಪ ನಿರ್ದೇಶಕಿ ಶ್ರುತಿ ತಿಳಿದರು.