ಪಾಕಿಸ್ತಾನದಲ್ಲಿ ಜೈಷ್-ಎ-ಮೊಹಮ್ಮದ್ ಆಸ್ತಿತ್ವದಲ್ಲಿಲ್ಲ : ಆಸಿಫ್ ಗಫೂರ್
ಇಸ್ಲಾಮಾಬಾದ್, ಮಾರ್ಚ್ 06: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿನ ಆತ್ಮಾಹುತಿ ದಾಳಿಗೆ ಕಾರಣವಾದ ಜೈಷ್ ಎ ಮೊಹಮ್ಮದ್ ಸಂಘಟನೆಯ ಅಸ್ತಿತ್ವದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು ಖಚಿತಪಡಿಸಿದ್ದಾರೆ. ಆದರೆ, ಸೇನಾ ವಕ್ತಾರರು ಮಾತ್ರ ಜೈಷ್ ಎ ಮೊಹಮ್ಮದ್ ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳಿದ್ದಾರೆ.
ಫೆಬ್ರವರಿ 14ರಂದು ಪುಲ್ವಮಾದಲ್ಲಿ 40 ಸಿಆರ್ ಪಿಎಫ್ ಸಿಬ್ಬಂದಿಯ ಹುತಾತ್ಮರಾದ ಬಳಿಕ, ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದ್ದು, ಗಡಿಯಲ್ಲಿ ಶೀತಲ ಸಮರ ಹೆಚ್ಚಾಗಿದೆ.
'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ
ಪುಲ್ವಾಮಾ ದಾಳಿಯ ಹೊಣೆ ಹೊತ್ತ ಜೈಷ್ ಎ ಮೊಹಮ್ಮದ್ ಸಂಘಟನೆ ಹಾಗೂ ಅದರ ಮುಖ್ಯಸ್ಥ ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಿ, ನಿಷೇಧ ಹೇರುವಂತೆ ಭಾರತ ನಿರಂತರವಾಗಿ ವಿಶ್ವಸಂಸ್ಥೆಗೆ ಮನವಿ ಮಾಡುತ್ತಿದೆ.
ಆದರೆ, ಈ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎನ್ನುತ್ತಿರುವ ಪಾಕಿಸ್ತಾನ ಈಗ ಜೈಷ್ ಸಂಘಟನೆ ನಮ್ಮ ದೇಶದಲ್ಲೇ ಇಲ್ಲ ಎನ್ನುತ್ತಿದೆ. ಪಾಕಿಸ್ತಾನದ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್ ನ ಡಿಜಿ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಸಿಎನ್ಎನ್ ಜತೆ ಮಾತನಾಡಿ, ನಮ್ಮ ವೈಮಾನಿಕ ಪ್ರದೇಶದಲ್ಲಿ ಭಾರತ ಅತಿಕ್ರಮಣ ಮಾಡಿದೆ. ಗಡಿ ನಿಯಂತ್ರಣ ರೇಖೆ ದಾಟಿದೆ. ಗಡಿಯಲ್ಲಿ ನಮ್ಮ ಸೈನ್ಯ ಶಾಂತಿ ಕಾಪಾಡುತ್ತಿದೆ ಎಂದಿದ್ದಾರೆ.
ಬಾಲಕೋಟ್ ನಲ್ಲಿ ನಡೆದಿದೆ ಎನ್ನಲಾದ ವೈಮಾನಿಕ ದಾಳಿ ಬಗ್ಗೆ ಮಾತನಾಡಿ, ಅಲ್ಲಿ ಒಂದು ಇಟ್ಟಿಗೆ ಕಲ್ಲು ಅಲುಗಾಡಿಲ್ಲ, ಯಾವ ಶವವೂ ಪತ್ತೆಯಾಗಿಲ್ಲ. ಅಲ್ಲಿನ ಪರಿಸರಕ್ಕೆ ಹಾನಿಯಾಗಿದೆ ಅಷ್ಟೇ ಎಂದಿದ್ದಾರೆ.
ಪುಲ್ವಾಮಾ ದಾಳಿಗೆ ಪ್ರತ್ಯುತ್ತರ, ವಾಯುಸೇನೆಗೆ ಬಹುಪರಾಕ್
ಜೈಷ್ ಎ ಮೊಹಮ್ಮದ್ ಸಂಘಟನೆಯು ಬಾಲಕೋಟ್ ನಲ್ಲಿತ್ತು. ಉಗ್ರರ ನೆಲೆ ಮೇಲೆ ಬಾಂಬ್ ದಾಳಿ ನಡೆಸಲಾಯಿತು ಎಂಬುದು ಸುಳ್ಳು. ಅಸಲಿಗೆ ಜೈಷ್ ಸಂಘಟನೆ ಪಾಕಿಸ್ತಾನದಲ್ಲೇ ಇಲ್ಲ. ನಾವು ಯಾರ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸಬೇಕಾಗಿಲ್ಲ ಎಂದಿದ್ದಾರೆ.
ಕಳೆದ ತಿಂಗಳು ಸಿಎನ್ಎನ್ ಗೆ ನೀಡಿದ ಸಂದರ್ಶನದಲ್ಲಿ ಶಾ ಖುರೇಶಿ ಅವರು ಜೈಷ್ ಎ ಮೊಹಮ್ಮದ್ ಸಂಘಟನೆ ಪಾಕಿಸ್ತಾನದಲ್ಲಿದೆ. ಅಜರ್ ಮಸೂದ್ ಅನಾರೋಗ್ಯಪೀಡಿತನಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದಿದ್ದರು. ಆದರೆ, ಈಗ ಗಫೂರ್ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ.
ಸುಮ್ಮನೆ ಪಾಕಿಸ್ತಾನವನ್ನು ದೂಷಿಸದೆ, ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟಕ್ಕೆ ವಿಶ್ವದ ಇತರೆ ರಾಷ್ಟ್ರಗಳು ಕೈ ಜೋಡಿಸಬೇಕು ಎಂದರು. ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿದ್ದು ಶಾಂತಿಯದ್ಯೋತಕವಾಗಿತ್ತು. ಆದರೆ, ಇದಕ್ಕೆ ಬೇರೆ ಅರ್ಥ ಹುಡುಕಿದರೆ ಅದು ನಮ್ಮ ತಪ್ಪಲ್ಲ ಎಂದು ಹೇಳಿದರು.